ಕಾಲುವೆಗಳಿಗೆ ನೀರು ಹರಿವು: ರೈತರ ಮುಖದಲ್ಲಿ ಸಂಭ್ರಮ
ಶಾಸಕ ನಾಡಗೌಡರ ಕಾರ್ಯಕ್ಕೆ ಗ್ರಾಮೀಣ ಭಾಗದಲ್ಲಿ ಮೆಚ್ಚುಗೆ
ಮುದ್ದೇಬಿಹಾಳ: ತಾಲೂಕಿನ ಚಿಮ್ಮಲಗಿ ಏತನೀರಾವರಿ ಪಶ್ಚಿಮ ಕಾಲುವೆ ಹಾಗೂ ಎಎಲ್ಬಿಸಿ ಕಾಲುವೆಗಳಿಗೆ ಸೋಮವಾರ ರಾತ್ರಿಿನಿಂದ ನೀರು ಹರಿಸಲಾಗುತ್ತಿದ್ದು, ನೀರು ಬರುತ್ತಿದ್ದಂತೆ ರೈತರು ಹಾಗೂ ಗ್ರಾಮಸ್ಥರಲ್ಲಿ ಹರ್ಷದ ವಾತಾವರಣ ನಿರ್ಮಾಣವಾಗಿದೆ. ಶಾಸಕ ಸಿ.ಎಸ್. ನಾಡಗೌಡರ ಪ್ರಯತ್ನದಿಂದ ನೀರು ಹರಿದು ಬಂದಿದ್ದು, ರೈತರು ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಮಂಗಳವಾರ ವಿವಿಧ ಗ್ರಾಮಗಳ ರೈತರು ತಂಡೋಪ ತಂಡವಾಗಿ ಕಾಲುವೆ ಪ್ರದೇಶಗಳಿಗೆ ತೆರಳಿ ನೀರಿನ ಹರಿವನ್ನು ವೀಕ್ಷಿಸಿದರು. ಚಿಮ್ಮಲಗಿ ಏತನೀರಾವರಿ ಯೋಜನೆ ಹಾಗೂ ಎಎಲ್ಬಿಸಿ ಯೋಜನೆಗೆ ವಿದ್ಯುತ್ ಪ್ರಸರಣದ ಟವರ್ ಕುಸಿತದಿಂದಾಗಿ ನೀರು ಹರಿವಿನಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ರೈತರು, ಜಾನುವಾರುಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಿಸಲಾಗುತ್ತಿತ್ತು. ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಸಮಸ್ಯೆ ಮನಗಂಡ ಶಾಸಕ ಅಪ್ಪಾಜಿ ನಾಡಗೌಡರು ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ತಕ್ಷಣ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದರು. ಜೊತೆಗೆ ವಿದ್ಯುತ್ ಸಮಸ್ಯೆ ಸರಿಯಾದ ಕೂಡಲೇ ಕಾಲುವೆಗಳಿಗೆ ನೀರು ಹರಿಸುವಂತೆ ಕೆಬಿಜೆಎನ್ಎಲ್ ಅಧಿಕಾರಿಗಳ ಮೇಲೂ ಒತ್ತಡ ಹೇರಿದ್ದರು ಎನ್ನಲಾಗಿದೆ.
ಶಾಸಕರ ಸೂಚನೆಯಂತೆ ಕಾಲುವೆಗಳಿಗೆ ನೀರು ಹರಿದು ಬಂದ ಪರಿಣಾಮ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಬಸರಕೋಡ, ಅರೇಶಂಕರ, ಸರೂರು, ಶಿರೋಳ, ಹೊಕ್ರಾಣಿ, ಕವಡಿಮಟ್ಟಿ, ಹಗರಗುಂಡ, ಹುಲಗಬಾಳ, ಜಕ್ಕೇರಾಳ, ಇಂಗಳಗೇರಿ, ತಮದಡ್ಡಿ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳ ಕೆರೆಗಳನ್ನು ತುಂಬಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಬಾರಿ ಸಮರ್ಪಕ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿ ಹಾಗೂ ತೆರೆದ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಪರಿಣಾಮ ತೋಟಗಾರಿಕಾ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಕಾಲುವೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗುತ್ತಿರುವುದರಿಂದ ಬಾಂದಾರಗಳಲ್ಲಿ ನೀರು ನಿಲ್ಲಲಿದ್ದು, ಸಮೀಪದ ಜಮೀನುಗಳಿಗೆ ಅನುಕೂಲವಾಗಲಿದೆ ಎಂದು ರೈತರು ತಿಳಿಸಿದ್ದಾರೆ.
ರೈತರ ಪ್ರತಿಕ್ರಿಯೆ
“ಕಾಲುವೆಗಳಿಗೆ ನೀರು ಹರಿಸಿರುವುದು ರೈತರಿಗೆ ಜೀವದಾನವಾದಂತಾಗಿದೆ. ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಲಿದೆ,” ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.



















