ಪ್ಲಾಸ್ಟಿಕ್ ಮುಕ್ತ ಪರಿಸರ ಪ್ರತಿಯೊಬ್ಬರ ಕರ್ತವ್ಯ ಆಗಲಿ-
ಸಂತೋಷ ಬಂಡೆ
ಇಂಡಿ: ಮಿತಿಮೀರಿದ ಪ್ಲಾಸ್ಟಿಕ್ ಬಳಕೆಯಿಂದ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಮುಂದಿನ ತಲೆಮಾರಿಗೆ ವಿಷಮುಕ್ತ ಪರಿಸರ ನೀಡಲು ಇಂದೇ ಪ್ಲಾಸ್ಟಿಕ್ ತ್ಯಜಿಸಿ.
ಪ್ಲಾಸ್ಟಿಕ್ ಮುಕ್ತ ಪರಿಸರ ಪ್ರತಿಯೊಬ್ಬರ ಕರ್ತವ್ಯ ಆಗಲಿ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಭೂಮಿ, ಸಮುದ್ರ, ಜೀವಸಂಕುಲಕ್ಕೆ ಅಪಾಯವಾಗಿದೆ. ಅಂಗಡಿ,
ಮಾರುಕಟ್ಟೆಗೆ ಹೋಗುವಾಗ ಮನೆಯಿಂದ ಬಟ್ಟೆ ಕೈಚೀಲ ತೆಗೆದುಕೊಂಡು ಹೋಗಬೇಕು. ಪ್ಲಾಸ್ಟಿಕ್ ಚೀಲಗಳ ನಿರಾಕರಣೆ ನಮ್ಮ ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಪರಿಸರ ಖಾತ್ರಿಪಡಿಸುವ ಹೆಜ್ಜೆಯಾಗಿದೆ. ಎಲ್ಲರೂ ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಬಟ್ಟೆ, ಸೆಣಬಿನ ಕೈಚೀಲ ಬಳಸಬೇಕು ಎಂದು ಹೇಳಿದರು.
ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ತ್ಯಾಜ್ಯವಾಗಿ ನದಿ, ಸಮುದ್ರ ಸೇರುವ ಪ್ಲಾಸ್ಟಿಕ್ನಿಂದಾಗಿ ಜಲಚರಗಳು, ಹಸು, ನಾಯಿಯಂತಹ ಮೂಕ ಪ್ರಾಣಿಗಳು ಅದನ್ನೇ ಆಹಾರ
ಎಂದು ನುಂಗಿ ಪ್ರಾಣ ಕಳೆದುಕೊಳ್ಳುತ್ತಿವೆ. ಪ್ಲಾಸ್ಟಿಕ್ ವಸ್ತು ಇಂದು ಗ್ರಾಮದ ಸ್ವಚ್ಛತೆ ಹಾಳು ಮಾಡುತ್ತಿದೆ. ಪರಿಸರ ಸ್ನೇಹಿ ಬಟ್ಟೆ ಚೀಲ ಬಳಸುವ ಹವ್ಯಾಸ ಬೆಳೆಸಿಕೊಳ್ಳೋಣ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿಸಲು ಮನೆಗೊಂದು ಮರ ಬೆಳೆಸುವ ಮೂಲಕ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ, ಬೆಳೆಸಬೇಕು ಎಂದು ಹೇಳಿದರು.
ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಸೇರಿದಂತೆ ಮಕ್ಕಳು ಹಾಜರಿದ್ದರು.

















