ದಲಿತ ಮುಖಂಡರು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು..!
ಡಿವೈಎಸ್ಪಿ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕಾ ಮಟ್ಟದ ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ಕುಂದು ಕೊರತೆ ಸಭೆ
ಇಂಡಿ: ನಗರದ ಉಪನೋಂದಣಾಧಿಕಾರಿಗಳ ಕಾರ್ಯಾಲಯದ ಅಧಿಕಾರಿ ದಲಿತರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಶಾಸಕರಿದ್ದ ಸಭೆಯಲ್ಲಿ ದಲಿತ ಮುಖಂಡರು ಬಂದು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ಮುಖಂಡರು ಪಟ್ಟು ಹಿಡಿದ ಘಟನೆ ನಡೆಯಿತು.
ನಗರದ ಡಿವೈಎಸ್ಪಿ ಕಾರ್ಯಾಲಯದ ಸಭಾಂಗಣದಲ್ಲಿ ಇಂಡಿ ತಾಲೂಕಾ ಮಟ್ಟದ ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಈ ಚರ್ಚೆ ನಡೆಯಿತು.
ಉಪನೋಂದಣಾಧಿಕಾರಿಗಳಿಗೆ ಯಾರಿಂದಲಾದರೂ ತೊಂದರೆ ಆಗಿದ್ದರೆ ತೊಂದರೆ ಕೊಟ್ಟವರ ಹೆಸರನ್ನು ಹೇಳಬೇಕು. ಇಲ್ಲವಾದರೆ ಪೊಲೀಸ್ ಕಚೇರಿಗೆ ಹೋಗಿ ದೂರು ದಾಖಲಿಸಬೇಕು. ಆದರೆ ನೋಂದಣಾಧಿಕಾರಿಗಳು ಪದೇ ಪದೇ ದಲಿತರ ಬಗ್ಗೆ ಇರುವ ಅವರ ತುಚ್ಛ ಮನೋಭಾವನೆ ಹೊರಹಾಕುತ್ತಿದ್ದಾರೆ. ಕೂಡಲೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಬ್ ರಜಿಸ್ಟರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೆಂದು ದಲಿತ ಮುಖಂಡ ಚಂದ್ರಶೇಖರ ಹೊಸಮನಿ ಸಭೆಯಲ್ಲಿ ಆಗ್ರಹಿಸಿದರು.
ಅಲ್ಲದೆ ಅಕ್ರಮ ಸಾರಾಯಿ, ಮಟಕಾ ಧಂದೆ, ಇಸ್ಪೀಟ್ ಆಟಗಳು ತಾಲೂಕಿನಾದ್ಯಂತ ಜೋರಾಗಿ ನಡೆದಿವೆ. ಈ ಕುರಿತು ಗ್ರಾಮ ಮಟ್ಟದ ಬೀಟ್ ಪೊಲೀಸರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಪೊಲೀಸ್ ಇಲಾಖೆಯ ಬಗ್ಗೆ ಗಂಭೀರ ಆರೋಪ ಮಾಡಿದರು.
ಡಿವೈಎಸ್ಪಿ ಸದಾಶಿವ ಕಟ್ಟೀಮನಿ ಮಾತನಾಡಿ, ಈ ಬಗ್ಗೆ ಪಿಎಸ್ಐ ಅಥವಾ ಸಿಪಿಐ ಅವರ ತನ್ನಿ ತಾಲೂಕಿನ ಎಲ್ಲ ಗ್ರಾಮಗಳ ಬೀಟ್ ಪೊಲೀಸರನ್ನು ಬದಲಾಯಿಸಿ ಬೇರೆಯವರಿಗೆ ಬೀಟ್ ಹಾಕಲಾಗುವುದು ಎಂದರು.
ಬಾಲಕಾರ್ಮಿಕ ಮಕ್ಕಳು ಕೆಲಸಕ್ಕೆ ಹೋಗುವುದು ಕಂಡು ಬರುತ್ತಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು. ಚಿಕ್ಕಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುತ್ತಿರುವ ಘಟನೆಗಳು ನಡೆಯುತ್ತಿವೆ ಅವುಗಳನ್ನು ತಡೆಯಬೇಕು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಗ್ರಾಮೀಣ ಭಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳ ಸದ್ಬಳಕೆಯಾಗುತ್ತಿಲ್ಲ. ಕೂಡಲೆ ಈ ಕುರಿತು ಪರಿಶೀಲಿಸಿ ಸಮುದಾಯ ಭವನಗಳು ದಲಿತರಿಗೆ ಉಪಯೋಗಕ್ಕೆ ಬರುವಂತೆ ನೋಡಿಕೊಳ್ಳಬೇಕೆಂದರು.
ಡಿವೈಎಸ್ಪಿ ಸದಾಶಿವ ಕಟ್ಟೀಮನಿ ನಿಮ್ಮ ಎಲ್ಲ ಬೇಡಿಕೆಗಳು ಮತ್ತು ಆರೋಪಗಳಿಗೆ ಮುಂಬರುವ ಸಭೆಯ ಒಳಗಾಗಿಯೇ ಪ್ರತಿಶತ ೯೦ ಕ್ಕಿಂತ ಹೆಚ್ಚಿನ ಕಾರ್ಯ ಮಾಡಲಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ತಹಸೀಲ್ದಾರ ಬಿ.ಎಸ್. ಕಡಕಭಾವಿ, ಸಿಪಿಐ ಪ್ರದೀಪ ಭಿಸೆ, ಸುನೀಲ ಪಾಟೀಲ ಇದ್ದರು.
ಸಭೆಯಲ್ಲಿ ಇಂಡಿ ಉಪವಿಭಾಗದ ಎಲ್ಲ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು, ದಲಿತ ಸಮುದಾಯಗಳ ಮುಖಂಡರಾದ ವಿನಾಯಕ ಗುಣಸಾಗರ, ಬಿ.ಎಸ್. ತಳವಾರ, ಸೋಮಶೇಖರ ಮ್ಯಾಕೇರಿ, ಮಲ್ಲಿಕಾರ್ಜುನ ಮಡ್ಡೀಮನಿ, ಧರ್ಮರಾಜ ವಾಲೀಕಾರ, ಎಸ್.ಕೆ. ಲಿಂಗದಳ್ಳಿ, ಮಹೇಶ ಶಿವಶರಣ, ರಮೇಶ ನಿಂಬಾಳಕರ್, ಸುನೀಲ ಕೋಳೀ, ಯಲ್ಲಪ್ಪ ಬಂಡೇನವರ, ರೇವಣ್ಣ ಹತ್ತಳ್ಳಿ, ಭೀಮಾಶಂಖರ ವಾಲೀಕಾರ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ನಗರದ ಡಿವೈಎಸ್ಪಿ ಕಾರ್ಯಾಲಯದ ಸಭಾಂಗಣದಲ್ಲಿ ಇಂಡಿ ತಾಲೂಕಾ ಮಟ್ಟದ ಅನುಸೂಚಿತ ಜಾತಿ/ಅನುಸೂಚಿತ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಡಿವೈಎಸ್ಪಿ ಸದಾಶಿವ ಕಟ್ಟೀಮನಿ ಮಾತನಾಡಿದರು.



















