ಯತ್ನಾಳರ ಮಹತ್ವದ ಹೇಳಿಕೆ: ಲಚ್ಯಾಣ ಮಠದ ಗೊಂದಲಕ್ಕೆ ಜಿಡಗಾ-ಮುಗಳಖೇಡ ಶ್ರೀಗಳ ನೇತೃತ್ವದಲ್ಲಿ ಪರಿಹಾರ!
ಇಂಡಿ: “ಲಚ್ಯಾಣದ ಸದ್ಗುರು ಶ್ರೀ ಸಿದ್ದಲಿಂಗ ಮಹಾರಾಜರ ಪುಣ್ಯಭೂಮಿ ಅತ್ಯಂತ ಪವಿತ್ರವಾದದ್ದು. ಮುಗಳಖೋಡ ಮತ್ತು ಜಿಡಗಾ ಮಹಾಸಂಸ್ಥಾನ ಮಠಗಳಿಗಿಂತಲೂ ಈ ಲಚ್ಯಾಣದ ಶ್ರೀಮಠವು ಆಧ್ಯಾತ್ಮಿಕವಾಗಿ ಮತ್ತು ಸಾಮಾಜಿಕವಾಗಿ ಇನ್ನೂ ಎತ್ತರಕ್ಕೆ ಬೆಳೆಯಬೇಕು, ದೇಶದಾದ್ಯಂತ ಕೀರ್ತಿ ಪಸರಿಸಬೇಕು ಎಂಬುದೇ ನಮ್ಮ ಪರಮ ಆಶಯವಾಗಿದೆ” ಎಂದು ಮುಗಳಖೋಡ-ಜಿಡಗಾ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾರ್ಮಿಕವಾಗಿ ನುಡಿದಿದ್ದಾರೆ.
ಭಾನುವಾರ ಇಂಡಿ ತಾಲ್ಲೂಕಿನ ಸುಕ್ಷೇತ್ರ ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಯ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ಬಿಲ್ವಾರ್ಚನೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆಯ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಲಚ್ಯಾಣ ಮಠ ಭಕ್ತಿ ಶ್ರದ್ದೆಯ ಅಭಿಮಾನ, ಭಕ್ತಿ ಇರುವಲ್ಲಿ ಭಗವಂತ ಇರುತ್ತಾನೆ, ಗುರುಗಳು ಇದ್ದಲ್ಲಿ ಶಿಷ್ಯರು ಇರುತ್ತಾರೆ. ಭಕ್ತ ಜ್ಞಾನ, ಸತ್ಯ, ಧರ್ಮ, ನೀತಿ, ಭಕ್ತಿ, ಸಂಸ್ಕಾರ, ನ್ಯಾಯದಿಂದ ಭಗವಂತನ ಸ್ಥಾನ ಪಡೆಯುತ್ತಾನೆ. ಅಪಾರ ಶಿಷ್ಯರನ್ನು ಹೊಂದಿರುವ ಲಚ್ಯಾಣ ಮಠದ ಕೀರ್ತಿ ರಾಜ್ಯಾದಂತ ಬೆಳೆಯಬೇಕು. ಲಚ್ಯಾಣ ಮಠ ಪ್ರಗತಿ ಹೊಂದಿ ಬೆಳೆಯ ಬೇಕು, ಸಿದ್ದಲಿಂಗ ಗುರುಗಳ ಶಕ್ತಿ ಎತ್ತರಕ್ಕೆ ಬೆಳೆಯಬೇಕು. ಇಂದು ಮಹಿಳೆಯರು ಉಡಿ ತುಂಬುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಿದ್ದಲಿಂಗರ ಆಶೀರ್ವಾದದಿಂದ ನೂರು ದಾಂಪತ್ಯ ಸುಖಮಯ ಜೀವನ ನಿಮ್ಮದು, ಸಿದ್ದಲಿಂಗರ ಆಶೀರ್ವಾದ ನಿಮ್ಮ ಮೇಲಿದೆ ಎಂದರು.
ಮುಗಳಖೋಡದ ಸದ್ಗುರು ಶ್ರೀ ಯಲ್ಲಾಲಿಂಗ ಮಹಾರಾಜರು ಮತ್ತು ಲಚ್ಯಾಣದ ಸದ್ಗುರು ಶ್ರೀ ಸಿದ್ಧಲಿಂಗ ಮಹಾರಾಜರ ನಡುವಿನ ಐತಿಹಾಸಿಕ ಹಾಗೂ ದಿವ್ಯ ಗುರು-ಶಿಷ್ಯ ಪರಂಪರೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಮಹಾನ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಶಾಸಕ ಬಸವನಗೌಡ ಪಾಟೀಲ ಯತ್ನಾಳರು ಮಾತನಾಡಿ, ಲಚ್ಯಾಣ ಬಂಥನಾಳದ ಸಂಗನಬಸವ ಶ್ರೀಗಳು ವಿಜಯಪುರ ಜಿಲ್ಲೆ ಶೈಕ್ಷಣಿಕ ಕ್ರಾಂತಿ ಮಾಡಿದ್ದು ವಿಜಯಪುರ ಜಿಲ್ಲೆಯ ಜನರಿಗೆ ಶಿಕ್ಷಣ ನೀಡುವಲ್ಲಿ ಶ್ರಮಿಸಿದ್ದಾರೆ. ಲಚ್ಯಾಣ ಮಠ ಭವ್ಯ ಪರಂಪರೆ ಹೊಂದಿದೆ. ಸರಕಾರ ಮಾಡದ ಕೆಲಸ ಬಂಥನಾಳ ಶ್ರೀಗಳು ಮಾಡಿದ್ದು ಆ ಪರಂಪರೆ ಉಳಿಸಿಕೊಂಡು ಹೋಗಬೇಕಾಗಿದೆ. ಮಠದ ಏಳ್ಗೆಗಾಗಿ ಎಲ್ಲರ ಅಭಿಪ್ರಾಯ ಪಡೆದು , ಜಿಡಗಾ-ಮುಗಳಖೇಡ ಪೂಜ್ಯರ ನೇತೃತ್ವದಲ್ಲಿ ಗೊಂದಲ ನಿರ್ಮೂಲನೆ ಮಾಡಬೇಕು ಎಂದರು.
ಅಭಿನವ ಸಿದ್ದಾರೂಢ ಮಹಾಸ್ವಾಮೀಜಿ ಷರ್ಣಮುಖಾರೂಢ ಮಠ ಹುಬ್ಬಳ್ಳಿ, ಅಭಿನವ ಮೃತ್ಯುಂಜಯ ಶ್ರೀಗಳು ಮಣಕವಾಡ, ವೀರ ಮಹಾಂತ ಶ್ರೀಗಳು ಚಿನ್ಮಯಗಿರಿ, ನಿರಂಜನ ಶ್ರೀಗಳು ಅಫಜಲಪೂರ, ಶ್ರೀ ಅಮರನಾಥ ಮಹಾದೇವ ಮಠ ಕುಷ್ಟಗಿ, ಶಿರಶ್ಯಾಡದ ಆಬಿನವ ಮುರಘೇಂದ್ರ ಶ್ರೀಗಳು, ಧನರಾಜ ಮುಜಗೊಂಡ ಮಾತನಾಡಿದರು.
ವೇದಿಕೆಯಲ್ಲಿ ಹಳಿಂಗಳಿ ಶಿವಾನಂದ ಶ್ರೀಗಳು, ಜುನಾಗಡದ ಮಹಾಂತ ಸಹದೇವಾನಂದ ಗಿರಿ ಶ್ರೀಗಳು, ಹುಣಸಿಹಾಳದ ನಿಜಗುಣ ದೇವರು, ಜಕನೂರದ ಸಿದ್ದಲಿಂಗ ದೇವರು, ಸುಲೇಪೇಠದ ದೊಡ್ಡೆಂದ್ರ ಶ್ರೀಗಳು, ಕಲಬುರಗಿಯ ಚರಲಿಂದ ಶ್ರೀಗಳು, ಮಾಶ್ಯಾಳದ ಮರುಳಾರಾಧ್ಯ ಶ್ರೀಗಳು, ನಿಂಬರ್ಗಾದ ಶಿವಲಿಂಗೇಶ್ವರ ಶ್ರೀಗಳು, ಜೋಗುರದ ಶಂಕರಾನAದ ಶ್ರೀಗಳು, ರೂಗಿಯ ಸುಗಲಾತಾಯಿ, ತುಂಗಳದ ಅನುಸೂಯಾ ಮಾತಾಜಿ, ಚಿಕ್ಕ ಪಡಸಲಗಿಯ ಅಕ್ಕಮಹಾದೇವಿ, ಶಶಿಕಾಂತ ಗುರುಜಿ, ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ ಮತ್ತಿತರಿದ್ದರು.
ಈ ಮಹೋತ್ಸವಕ್ಕೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಮಹಾಜನರು ಭಕ್ತಿ ಸಾಗರದಲ್ಲೇ ತೇಲಾಡಿದರು. ಮಠದ ವತಿಯಿಂದ ಆಗಮಿಸಿದ ಸಮಸ್ತ ಭಕ್ತಾದಿಗಳಿಗೆ ಭವ್ಯ ದಾಸೋಹ ಹಾಗೂ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಇಂಡಿ: ಲಚ್ಯಾಣದ ಶ್ರೀ ಸಿದ್ಧಲಿಂಗ ಮಹಾಪ್ರಭುಗಳ ಕರ್ತೃ ಗದ್ದುಗೆಯ ಸನ್ನಿಧಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಕ್ಷ ಬಿಲ್ವಾರ್ಚನೆ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಧರ್ಮಸಭೆಯ ಪಾವನ ಸಾನಿಧ್ಯವಹಿಸಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಇಂಡಿ: ಸಾವಿರಾರು ಮಹಿಳೆಯರಿಗೆ ಉಡಿ ತುಂಬಲಾಯಿತು.

ಇಂಡಿ: ಮುಗಳಖೋಡ-ಜಿಡಗಾ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಸಿಧ್ದಲಿಂಗ ಮಹಾರಾಜರ ಗದ್ದುಗೆಗೆ ಲಕ್ಷ ಬಿಲ್ವಾರ್ಚನೆ ನೆರವೇರಿಸಿದರು.


















