ಇಂಡಿ ತಾಲೂಕು ಬರಪೀಡಿತವೆಂದು ಘೋಷಿಸಿ: ವಿವೇಕ ಡಬ್ಬಿ
ಇಂಡಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅನುಭವದ ಕೊರತೆ ಇದೆ ಎಂದು ಬಿಜೆಪಿ ರಾಜ್ಯ ಓಬಿಸಿ ಮೋರ್ಚಾ ಉಪಾಧ್ಯಕ್ಷ ವಿವೇಕ ಡಬ್ಬಿ ಆರೋಪಿಸಿದರು.
ಇಂಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.
ವಿಜಯಪುರ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ, ಬರಗಾಲ ಪೀಡಿತ ತಾಲೂಕುಗಳ ಪಟ್ಟಿಯಿಂದ ಜಿಲ್ಲೆಯ ತಾಲೂಕುಗಳನ್ನು ಕೈಬಿಟ್ಟಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೇ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.
ಶಾಸಕರು–ಉಸ್ತುವಾರಿ ಸಚಿವರ ಹೊಂದಾಣಿಕೆ ಕೊರತೆಯೇ
ಕಾರಣ: ಅಪ್ಪು ಪಟ್ಟಣಶೆಟ್ಟಿ ಮಾಜಿ ಸಚಿವ ಅಪ್ಪಾಸಾಹೇಬ (ಅಪ್ಪು) ಪಟ್ಟಣಶೆಟ್ಟಿ ಮಾತನಾಡಿ, ಇಂಡಿ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ಹೊಂದಾಣಿಕೆ ಇಲ್ಲದ ಕಾರಣದಿಂದಲೇ ಇಂಡಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿಲ್ಲ ಎಂದು ಆರೋಪಿಸಿದರು.
ಇಂಡಿ ತಾಲೂಕಿನ ಮಳೆಯ ಕೊರತೆ, ಕೃಷಿ ಪರಿಸ್ಥಿತಿ, ಮಣ್ಣಿನ ತೇವಾಂಶದ ಕೊರತೆ, ಬಿತ್ತನೆ ಹಾಗೂ ಬೆಳೆ ಸ್ಥಾಪನೆಯ ಮೇಲಿನ ಪರಿಣಾಮ ಸೇರಿದಂತೆ ಸ್ಥಳೀಯ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ಮರುಪರಿಶೀಲಿಸಿ, ಇಂಡಿ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಧರಣಿಗೆ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಎಸ್.ಬಿ. ಕೆಂಬೋಗಿ, ಕರವೇ ತಾಲೂಕು ಅಧ್ಯಕ್ಷ ಬಾಳು ಮುಳಜಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಬಸಮ್ಮ ಮರಡಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಡಿ. ಪಾಟೀಲ, ಅಯೂಬ ನಾಟಿಕಾರ, ಡಾ. ರಮೇಶ ರಾಠೋಡ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಮಲ್ಲಿಕಾರ್ಜುನ ಕಿವುಡೆ, ಶಂಕರಗೌಡ ಪಾಟೀಲ, ಶೀಲವಂತ ಉಮರಾಣಿ, ಕಾಸುಗೌಡ ಬಿರಾದಾರ ಸೇರಿದಂತೆ ಹಲವರು ಮಾತನಾಡಿದರು.
ಧರಣಿಯಲ್ಲಿ ದೇವೇಂದ್ರ ಕುಂಬಾರ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ನಾಗೇಶ ಹೆಗಡ್ಯಾಳ, ಸಂತೋಷ ಪಾಟೀಲ, ಮಹೇಶ ಹೂಗಾರ, ಶಿವಯೋಗಿ ರೂಗಿಮಠ, ಪ್ರಶಾಂತ ಗವಳಿ, ಮಂಜು ದೇವರ, ಶ್ರೀಶೈಲಗೌಡ ಪಾಟೀಲ, ಗಜಾನನ ಗಿಣ್ಣಿ, ಜೆಟ್ಟು ಮರಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.



















