ಬಜಾರ್ ಹನುಮಾನ ದೇವಸ್ಥಾನದಲ್ಲಿ ಬಿಎಸ್ವೈ ಜನ್ಮದಿನಾಚರಣೆ: ಹರ್ಷ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು
ಮುದ್ದೇಬಿಹಾಳ: ಕರ್ನಾಟಕದ ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನವನ್ನು ತಾಲ್ಲೂಕು ಬಿಜೆಪಿ ಮಂಡಲದ ವತಿಯಿಂದ ಶುಕ್ರವಾರ ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ಪ್ರಸಿದ್ಧ ಶ್ರೀ ಬಜಾರ್ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ಹಂಚುವ ಮೂಲಕ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಶುಭ ಕೋರಿದರು.
ದೀನದಲಿತರ ಆಶಾಕಿರಣ ಬಿಎಸ್ವೈ: ಜಗದೀಶ ಪಂಪಣ್ಣವರ.
ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಮಾತನಾಡಿ, “ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆಯು ಇಂದು ಲಕ್ಷಾಂತರ ಹೆಣ್ಣುಮಕ್ಕಳ ಬದುಕಿಗೆ ಆಧಾರವಾಗಿದೆ. ರೈತರಿಗೆ, ಅಂಗವಿಕಲರಿಗೆ, ವಿಧವೆಯರಿಗೆ ಹಾಗೂ ದೀನದಲಿತರಿಗೆ ಅವರು ನೀಡಿದ ಸೌಲಭ್ಯಗಳು ಎಂದಿಗೂ ಅವಿಸ್ಮರಣೀಯ. ಬಡವರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಅವರು ಮಾಡಿದ ಕೆಲಸಗಳು ಇಂದಿನ ರಾಜಕಾರಣಿಗಳಿಗೆ ಮಾದರಿ” ಎಂದರು.
ರೈತರ ಬದುಕಿಗೆ ಬೆಳಕಾದ ನಾಯಕ: ಸಿದ್ದರಾಜ ಹೊಳಿ
ಮತ್ತೊಬ್ಬ ಮುಖಂಡ ಸಿದ್ದರಾಜ ಹೊಳಿ ಮಾತನಾಡಿ, “ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಯಡಿಯೂರಪ್ಪನವರು, ಅನ್ನದಾತರ ಬದುಕು ಹಸನಾಗಲು 24 ಗಂಟೆಗಳ ಕಾಲ ವಿದ್ಯುತ್ ನೀಡಬೇಕೆಂಬ ಸಂಕಲ್ಪ ಮಾಡಿದ್ದರು. ಅಂತಹ ದೂರದೃಷ್ಟಿಯ ನಾಯಕನ ಜನ್ಮದಿನವನ್ನು ನಮ್ಮ ಕ್ಷೇತ್ರದಲ್ಲಿ ಆಚರಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ” ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ನಡಹಳ್ಳಿ ಅವರ ಸಹೋದರ ಸೋಮನಗೌಡ ಪಾಟೀಲ (ನಡಹಳ್ಳಿ), ಪ್ರಮುಖರಾದ ಮದನಸ್ವಾಮಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ಗಿರೀಶಗೌಡ ಪಾಟೀಲ (ಮುರಾಳ), ಶಂಕರಗೌಡ ಶಿವಣಗಿ ಕಂದಗನೂರ, ಭೀಮನಗೌಡ ಕೊಡಗಾನೂರ, ಲಕ್ಷ್ಮಣ ಬಿಜ್ಜೂರ, ನಾಗೇಶ ಕವಡಿಮಟ್ಟಿ, ನಿಖಿಲ ಮಲಗಲದಿನ್ನಿ, ಸಂಗನಗೌಡ ಪಾಟೀಲ, ಸಂಗಣ್ಣ ಬಿಸಲದಿನ್ನಿ, ಶಿವರಾಜ ಕುಂಟೋಜಿ ಹಾಗೂ ಮಹಿಳಾ ಘಟಕದ ನರಸಮ್ಮ ಗುಬಚಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.


















