ರೈತರಿಗೆ ಹಗಲು 7 ಗಂಟೆ ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹ
ಅಫಜಲಪುರ: ತಾಲೂಕಿನಲ್ಲಿ ರೈತರಿಗೆ ಹಗಲು ವೇಳೆ ನಿರಂತರ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ತಾಲೂಕು ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಪಟ್ಟಣದ ಜೆಸ್ಕಾಂ ಇಲಾಖೆಯ ಅಧಿಕಾರಿ ನಾಗರಾಜ ಅವರಿಗೆ ಮನವಿ ಸಲ್ಲಿಸಿದರು.
ಜೆಸ್ಕಾಂ ಕಚೇರಿ ಎದುರು ನೂರಾರು ರೈತರು ಪ್ರತಿಭಟನೆ ನಡೆಸಿ ಮಾತನಾಡಿದ ರೈತ ಮುಖಂಡರು, ಅಫಜಲಪುರ ತಾಲೂಕು ಹಲವು ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗುತ್ತಿದ್ದು, ರೈತರು ಭೀಮಾ ನದಿ ಮತ್ತು ಬೋರ್ವೆಲ್ಗಳ ಮೂಲಕ ನೀರಾವರಿ ಮಾಡಿ ಕಬ್ಬು, ಹತ್ತಿ ಹಾಗೂ ಬಾಳೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಆದರೆ ತಾಲೂಕಿನ ಹಲವು ಗ್ರಾಮಗಳಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಇಲ್ಲದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಪ್ರತಿ ಎರಡು ಗಂಟೆಗೊಮ್ಮೆ ವಿದ್ಯುತ್ ಟ್ರಿಪ್ ಆಗುತ್ತಿರುವುದರಿಂದ ಬೆಳೆಗಳಿಗೆ ಸಮರ್ಪಕವಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಹಗಲು ವೇಳೆ ನಿರಂತರವಾಗಿ 7 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಹೋರಾಟಗಾರ ಶ್ರೀಮಂತ ಬಿರಾದಾರ, ರೈತ ಮುಖಂಡರಾದ ಗುರು ಚಾಂದಕವಟೆ, ರಮೇಶ ಶೆಟ್ಟಿ, ರಮೇಶ ಪಾಟೀಲ, ಲತೀಪ್ ಬೋಗನಳ್ಳಿ, ಶಿವಶಂಕರ ಪಾಟೀಲ, ಅರ್ಜುನ ಸೋಮಜಾಳ, ರಾಜಕುಮಾರ ಬಡದಾಳ, ಭೀಮಾಶ್ಯಾ ವಡಗೇರ, ಶರಣ ಪ್ರಸಾದ ನೂಲಾ, ಅಣ್ಣರಾಯ ಪಾಟೀಲ, ಧಾನು ನೂಲ, ಮಹಾಂತಗೌಡ ಪಾಟೀಲ, ಶರಣು ದಿವಾಣಜಿ ,ವಿಠಲ ಪೂಜಾರಿ ಯಶವಂತ ಪಟ್ಟೆದಾರ್ ಮಲ್ಲಿಕಾರ್ಜುನ್ ಪಾಟೀಲ್ ಅಣ್ಣರಾಯಗೌಡ್ ಪಾಟೀಲ್ ಬಸವರಾಜ್ ಪಾಟೀಲ್ ಸುರೇಶ್ ಗೌಡ ಪಾಟೀಲ್ ಸಂಗಣ್ಣ ನಾರಸೆರ
ಶರಣು ದಿವಾನ ಜಿ ಅಡೆಪ್ಪ ಹೂಗಾರ್ ಸೇರಿದಂತೆ ಅನೇಕರು ಇದ್ದರು.



















