ಕೆರೆ ತುಂಬಿಸುವ ಕಾರ್ಯ ಆರಂಭ ; ಶಾಸಕ ರಾಜುಗೌಡ
ದೇವರಹಿಪ್ಪರಗಿ: ರೈತರು, ಜನ, ಜಾನುವಾರಗಳಿಗೆ ಕುಡಿವ ನೀರಿನ ಅನೂಕೂಲ ಕಲ್ಪಿಸಲು ಮತಕ್ಷೇತ್ರದ ಎಲ್ಲಾ ಕೆರೆಗಳು ತುಂಬುವ ಕಾರ್ಯ ಪ್ರಾರಂಭಗೊಂಡಿದ್ದು, ಕ್ಷೇತ್ರದ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ತಿಳಿಸಿದ್ದಾರೆ. ಪಾಟೀಲ
ಮತಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರಂತರ ಮಾತನಾಡಿದ್ದೇನೆ. ಕಳೆದ ಸಲ ಹಲವು ಕೆರೆಗಳಿಗೆ ನೀರು ಹರಿದು ಹೋಗಿಲ್ಲ. ಆದ ಕಾರಣ ಈ ಬಾರಿ ದೇವರಹಿಪ್ಪರಗಿ ಮತಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಕೆರೆಗಳ ತುಂಬುವ ವಿಷಯಕ್ಕಾಗಿ ಅಬಕಾರಿ ಸಚಿವರು ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪೂರ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರನ್ನು ಖುದ್ದಾಗಿ ಭೇಟಿಯಾಗಿ ಒತ್ತಡ ಹಾಕಲಾಗಿದೆ. ಸಚಿವರು ಸಹ ಇದಕ್ಕೆ ಸಕಾರಾತ್ಮಕವಾಗಿ ಸಂದಿಸಿರುತ್ತಾರೆ. ಪ್ರತಿದಿನ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ನೀರಾವರಿಗಾಗಿ ನಾನು ವಿಶೇಷ ಕಾಳಜಿ ವಹಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.