ಭೀಮಾನದಿ ತಟದ ಇತಿಹಾಸ ಪುರುಷರ, ಸಂತರ, ಶರಣರ, ಸಾಹಿತಿಗಳ ಜೀವನ ಚಿತ್ರಣ ಪರಿಚಯಿಸುವ ಕಾರ್ಯ ಶ್ಲಾಘನೀಯ..
ಇಂಡಿ: ಕುವೆಂಪುರವರ ಸಾಹಿತ್ಯ 20ನೇ ಶತಮಾನದ
ಸಾಕ್ಷಿಪ್ರಜ್ಞೆಯಾಗಿ, 21ನೇ ಶತಮಾನದಲ್ಲೂ ಪ್ರಭಾವಿಯಾಗಿದೆ. ಶ್ರೀಸಾಮಾನ್ಯನನ್ನು ಜಗನ್ಮಾನ್ಯನೆಂದು ನಂಬಿ ಎಲ್ಲ ವಯೋಮಾನದ ಓದುಗರ ಆಸಕ್ತಿ ಅಭಿರುಚಿಗಳನ್ನು ತಣಿಸುವಂತೆ ಆಯಾ ಕಾಲ ಮತ್ತು ಸಂದರ್ಭಗಳಿಗೆ ಸ್ಪಂದಿಸುವ ಸಾಹಿತ್ಯ ಸೃಷ್ಟಿಸಿದ್ದು ಕುವೆಂಪು ಅವರ ವೈಶಿಷ್ಟ್ಯವಾಗಿದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು. ಶನಿವಾರ ಸಾಯಂಕಾಲ ಇಂಡಿಯ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕøತಿಕ ಜಗಲಿ ಕೇಂದ್ರದಿಂದ ಹಮ್ಮಿಕೊಂಡ ಉಪನ್ಯಾಸ ಮಾಲಿಕೆ-2 ರಲ್ಲಿ ಕುವೆಂಪು ಮತ್ತು ನಾಟಕಗಳು ಕುರಿತು ಉಪನ್ಯಾಸ ನೀಡುತ್ತಾ ಈ
ಮಾತುಗಳನ್ನು ಅವರು ಹೇಳಿದರು.
ಕನ್ನಡ ರಂಗಭೂಮಿಗೆ ಕುವೆಂಪುರವರ ಕೊಡುಗೆ
ಅನನ್ಯ.ಅವರು ಪಾರಂಪರಿಕ ಪುರಾಣ ಕಥೆಗಳನ್ನು
ಸಮಕಾಲೀನ ಅಗತ್ಯಕ್ಕೆ ಅನುಗುಣವಾಗಿ ಮರು ರೂಪಿಸಿ
ಕ್ರಾಂತಿಕಾರಕ ಬೆಳವಣಿಗೆಗೆ ಕಾರಣವಾಗಿದ್ದಾರೆ. ಜಲಗಾರ,
ಶೂದ್ರ ತಪಸ್ವಿ, ಬೆರಳ್ಗೆ ಕೊರಳ್, ಶ್ಮಶಾನ ಕುರುಕ್ಷೇತ್ರ, ಮಹಾರಾತ್ರಿ ಇಂಥ ನಾಟಕಗಳ ಮೂಲಕ ಪುರಾಣಗಳ ಮರು ವ್ಯಾಖ್ಯಾನ ಮಾಡಿ,ಕನ್ನಡ ಸಾಹಿತ್ಯದ
ಬೃಹನ್ಮೂರ್ತಿಯಾಗಿದ್ದಾರೆ ಎಂದು ಹೇಳಿದರು.
ತಮ್ಮ ಸೃಜನಶೀಲತೆಯ ಅಭಿವ್ಯಕ್ತಿ ಮಾಧ್ಯಮವನ್ನಾಗಿ
ರಂಗಭೂಮಿಯನ್ನು ಬಳಸಿಕೊಂಡಿರುವುದು
ಕುವೆಂಪುರವರ ಶ್ರೇಷ್ಟತೆಯನ್ನು ತೋರಿಸುತ್ತದೆ.
ಪಾತ್ರ ಪೋಷಣೆ, ಸಂಭಾಷಣೆಯ ತಂತ್ರ, ದೃಶ್ಯಗಳ ಜೋಡಣೆ, ಹಳೆಗನ್ನಡ-ನಡುಗನ್ನಡ ಶೈಲಿಯ, ಛಂದಸ್ಸಿನ ಶೈಲಿಯ, ಸರಳ ರಗಳೆಯಂತಿರುವ ಸಂಭಾಷಣೆ ಹಾಗೂ
ಹಾಡುಗಳಂತಹ ಸಾಹಿತ್ಯದ ಹಲವಾರು ಪ್ರಕಾರಗಳನ್ನು ಯಶಸ್ವಿಯಾಗಿ ರಂಗದಲ್ಲಿ ಬಳಸಿಕೊಂಡಿರುವ ಶ್ರೇಯಸ್ಸು ಕುವೆಂಪುರವರಿಗೆ ಸಲ್ಲುತ್ತದೆ. ಕವಿವರ್ಯರು ಏಕಾಂಕ ನಾಟಕಗಳಿಂದ ಆರಂಭಿಸಿ ಪೂಣಾರ್ಂಕ ನಾಟಕಗಳವರೆಗೂ ತಮ್ಮ ವಿಸ್ತಾರವನ್ನು ಹರವಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಿರಗಿ ಪ್ರೌಢ ಶಾಲಾ ಶಿಕ್ಷಕ ವೈ.ಜಿ.
ಬಿರಾದಾರ ಮಾತನಾಡಿ, ‘ಮನುಜ ಮತ, ವಿಶ್ವಪಥ’ ಎಂಬ
ಮಹಾನ್ ಸಂದೇಶದ ಮೂಲಕ ಅಲ್ಪಮಾನವರೆಲ್ಲ
ವಿಶ್ವಮಾನವರಾಗಬೇಕೆಂದು ಕರೆಕೊಟ್ಟು, ಅದರಂತೆ
ಬದುಕಿದ್ದ ಕುವೆಂಪು ಪ್ರಪಂಚದಲ್ಲಿರುವ ಎಲ್ಲ ಧರ್ಮಗಳ ಎಲ್ಲ ತತ್ವಗಳನ್ನು ಆಳವಾಗಿ ಅಧ್ಯಯನ ಮಾಡಿ, ಅವುಗಳ ಸಾರವನ್ನು ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡವರು ಎಂದು ಹೇಳಿದರು.
ನಾದ ಕೆ.ಡಿ. ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ.ಎಂ.ಬಂಡಗರ ಪ್ರಾಸ್ತಾವಿಕವಾಗಿ ಮಾತನಾಡಿ, ಭೀಮಾ ನದಿ ತಟದ ಇತಿಹಾಸ ಪುರುಷರ, ಸಂತರ, ಶರಣರ, ಸಾಹಿತಿಗಳ ಜೀವನ ಚಿತ್ರಣವನ್ನು ಇಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಭೀಮಾಂತರಂಗ ಆನ್ ಲೈನ್ ಸಾಹಿತ್ಯಿಕ-ಸಾಂಸ್ಕøತಿಕ ಜಗಲಿ ಕೇಂದ್ರವು ಸದಾ ಶ್ರಮಿಸುತ್ತಿರುವದು ಶ್ಲಾಘನೀಯ ಎಂದು ಹೇಳಿದರು.
ಖ್ಯಾತ ಸಂಶೋಧಕ ಡಾ. ಚನ್ನಪ್ಪ ಕಟ್ಟಿ, ಗೀತಯೋಗಿ,
ಬಸವರಾಜ ಕಿರಣಗಿ, ಶ್ರೀಧರ ಹಿಪ್ಪರಗಿ, ದಾನಯ್ಯ ಮಠಪತಿ, ಡಾ. ಮಂಜುನಾಥ ಕೋಟೆಣ್ಣವರ, ರಾಚು ಕೊಪ್ಪ, ಸುಜಾತಾ ಬೀಳಗಿ, ಸುನೀಲ ಗೌರ, ಸಂಗನಗೌಡ ಹಚಡದ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
ಶಿಕ್ಷಕಿ ಸರೋಜಿನಿ ಮಾವಿನಮರ ಸ್ವಾಗತಿಸಿ, ಪರಿಚಯಿಸಿದರು. ಶಿಕ್ಷಕಿ ಬಿ.ಸಿ. ಭಗವಂತಗೌಡರ ನಿರೂಪಿಸಿದರು. ಶಿಕ್ಷಕ ವೀರಣ್ಣ ದಸ್ತರೆಡ್ಡಿ ವಂದಿಸಿದರು.


















