ಅಫಜಲಪುರ: ಸರಕಾರ ರೈತರ ಜಮೀನುಗಳಿಗೆ ದಿನದ ೭ ಗಂಟೆಯವರೆಗೆ ವಿದ್ಯುತ್ ಪೂರೈಸುವಂತೆ ಹೇಳಿದರೂ ಕೂಡಾ ತಾಲೂಕಿನ ಆನೂರ ಗ್ರಾಮದ ರೈತರ ಜಮೀನುಗಳಿಗೆ ಕೆಲ ದಿನಗಳಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದ ಕಾರಣ ಆನೂರ ಗ್ರಾಮದ ನೂರಾರು ರೈತರು ಸೇರಿ ಸಮರ್ಪಕವಾಗಿ ವಿದ್ಯುತ್ ಪೂರೈಸುವಂತೆ ರೇವೂರ ವಿದ್ಯುತ್ ಕಛೇರಿಗೆ ಮುತ್ತಿಗೆ ಹಾಕಿದರು.
ನಂತರ ರೈತ ಮುಖಂಡ ರೇವಣಸಿದ್ದ ಬಳೂಂಡಗಿ, ಜಗದೀಶ ಹಿರೇಮಠ, ರೇವಣಸಿದ್ದ ಕಲಶೆಟ್ಟಿ ಮಾತನಾಡಿ ತಾಲೂಕಿನ ಆನೂರ ಗ್ರಾಮಕ್ಕೆ ನಿರಂತರವಾಗಿ ವಿದ್ಯುತ್ ವತ್ಯವಾಗುತ್ತಿದೆ. ಈ ಕುರಿತು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಾಕಷ್ಟು ಸಲ ಮಾತನಾಡಿದರೂ ಕೂಡಾ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಎಲ್ಲ ರೈತರು ಬೇಸತ್ತು ತಮ್ಮ ಕೆಲಸಗಳನ್ನು ಬಿಟ್ಟು ಸರಿಯಾಗಿ ವಿದ್ಯತ್ ಪೂರೈಕೆ ಮಾಡಬೇಕು ಎಂದು ದೂರದ ತಮ್ಮ ಕಛೇರಿಗೆ ಬಂದಿದ್ದೇವೆ. ಸಧ್ಯ ಬೇಸಿಗೆ ಆವರಿಸಿಕೊಂಡಿದ್ದರಿಂದ ನೀರಾವರಿ ಮಾಡಿಕೊಂಡಿದ್ದ ರೈತರಿಗೆ ಆಂತಕ ಸುರುವಾಗಿದೆ ಅಂತಹದರಲ್ಲಿ ವಿದ್ಯುತ್ ಇಲಾಖೆಯವರು ನಮ್ಮೂರಿಗೆ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಇದರಿಂದಾಗಿ ಬೆಳೆಗಳು ವಣಗುವ ಹಂತಕ್ಕೆ ತಲುಪಿವೆ. ಇದೇ ಮುಂದುವರೆದರೆ ರೈತ ಮತ್ತಷ್ಟು ಸಾಲದ ಹೋರೆ ಹೋರಬೇಕಾಗುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಇಲ್ಲದಿದ್ದರೆ ರೈತ ಕುಟುಂಬದೊಂದಿಗೆ ಕಛೇರಿ ಎದುರು ಧರಣಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರಗತಿಪರ ರೈತ ಶಿವಕುಮಾರ ಬಳೂಂಡಗಿ ಮಾತನಾಡಿ ರೈತರ ಜಮೀನುಗಳಿಗೆ ವಿದ್ಯುತ್ ಪೂರೈಕೆ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷವಹಿಸುತ್ತಿದ್ದಾರೆ. ಇದರಿಂದ ನೀರಾವರಿ ಅವಲಂಬಿತ ಬೆಳೆಗಳು ಸಂಪೂರ್ಣವಾಗಿ ಹಾಳಾಗುತ್ತಿವೆ ಕೂಡಲೇ ಅಧಿಕಾರಿಗಳು ನೆಪ ಹೇಳದೆ ಸರಕಾರದ ನಿರ್ದೇಶನದಂತೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ರೇವೂರ ಜೇಸ್ಕಾಂ ಕಚೇರಿ ಎಸ್ ಒ ದೇವಿಂದ್ರಪ್ಪ ಮಾತನಾಡಿ ಈಗಾಗಲೇ ಆನೂರ ಗ್ರಾಮಕ್ಕೆ ಎರಡು ಟಿಸಿ ಮೂಲಕ ವಿದ್ಯುತ್ ಪೂರೈಕೆಯಾಗುತ್ತಿದೆ. ಅದರಲ್ಲಿ ಒಂದು ಟಿಸಿ ಕೆಟ್ಟಿದ್ದರಿಂದ ಈ ಸಮಸ್ಯೆಯಾಗಿದೆ. ನಾಲ್ಕೈದು ದಿನಗಳಲ್ಲಿ ಕೆಟ್ಟಿರುವ ಟಿಸಿ ಸರಿಪಡಿಸಿ ಸಮರ್ಪಕ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ರೇವಣಸಿದ್ದ ಕಲಶೆಟ್ಟಿ, ಗುರುದೇವ ಜೀರೊಳಿ, ಸುನೀಲ ಜೀರೊಳಿ ಹೂವಪ್ಪ ಪೂಜಾರಿ, ಬಾಬು ಸೀತನೂರ, ಭೀಮರಾಯ ಕೆರಮಗಿ, ಹೊನ್ನಪ್ಪ ಪೂಜಾರಿ, ಸಿದ್ದು ಕೆರಮಗಿ, ಆಕಾಶ ಹಳ್ಯಾಳ, ಯಶವಂತ ಉಮ್ಮನಗೋಳ, ಹಣಮಂತ್ರಾಯ ನವದಗಿ, ಶಿವಪುತ್ರ ಭೂಸನೂರ ಸೇರಿ ಅನೇಕರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: