ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಆರಂಭದಲ್ಲಿ ಶೂನ್ಯ ಮೈಲ್ನಲ್ಲಿ ಕೆನಾಲ್ ಹೊಡೆದು, ಕೆಳ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗುವಂತಹ ಘಟನೆ ನಡೆದಿದ್ದು, ಯುದ್ದೋಪಾದಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡು ಕೆಳ ಭಾಗದ ರೈತರ ಬೆಳೆ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜು ಅವರು ತಿಳಿಸಿದ್ದಾರೆ.
ಕೆನಾಲ್ ಆರಂಭದ ಹಂತದಲ್ಲಿ ಮರವೊಂದು ನಾಲೆಗೆ ಬಿದ್ದು, ಭಾರೀ ಪ್ರಮಾಣದಲ್ಲಿ ನಾಲೆ ಹೊಡೆದಿದೆ. ಇದರಿಂದಾಗಿ ತುಂಗಭದ್ರಾ ಎಡದಂಡೆ ಕಾಲುವೆ ನೀರು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ನೆಲ್ಲು ಸೇರಿದಂತೆ ಎಲ್ಲಾ ಬೆಳೆಗಳು ತೆನೆ ಬಿಡುವ ಹಂತದಲ್ಲಿವೆ. ಈ ಹಂತದಲ್ಲಿ ನೀರು ಸ್ಥಗಿತಗೊಂಡರೇ, ರೈತರು ತೀವ್ರ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಸರ್ಕಾರದ ನಿರ್ಲಕ್ಷ್ಯೆಯೇ ಕಾಲುವೆ ಹೊಡೆಯಲು ಮೂಲ ಕಾರಣವಾಗಿದೆ. ಮೇ ತಿಂಗಳಲ್ಲಿ ಕಾಲುವೆ ನಿರ್ವಹಣೆಗೆ ಸಂಬಂಧಿಸಿ ಕಾಮಗಾರಿ ಕೈಗೊಳ್ಳಲಾಗುತ್ತದೆ.
ದುರಂತವೆಂದರೇ, ವಾರ್ಷಿಕ ನಿರ್ವಹಣೆ ಸಮರ್ಪಕವಾಗಿ ಕೈಗೊಳ್ಳದಿರುವುದರಿಂದ ಪರಿಸ್ಥಿತಿ ಕೈ ಮೀರುವಂತಾಗಿದೆ. ನಾಲೆಯ ಅಕ್ಕಪಕ್ಕದಲ್ಲಿ ಬೆಳೆದ ಮರಗಳ ಬೇರುಗಳಿಂದ ಕಾಲುವೆಗೆ ನಷ್ಟವಾಗುತ್ತದೆ. ಈ ಬಗ್ಗೆ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯಿದ್ದರೂ, ಸಕಾಲಕ್ಕೆ ಕ್ರಮ ಕೈಗೊಳ್ಳದಿರುವುದರಿಂದ ಈ ದುರಂತ ಸಂಭವಿಸಿದೆ. ಸರ್ಕಾರ ತುಂಗಭದ್ರಾ ಎಡದಂಡೆ ಕಾಲುವೆ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯೆ ವಹಿಸುತ್ತಿದೆ. ಕಾಲುವೆ ನೀರು ನಿರ್ವಹಣೆ, ದುರಸ್ತಿ ವಿಷಯದಲ್ಲಿ ಸರ್ಕಾರದ ಧೋರಣೆಯಿಂದಾಗಿ ರೈತರು ಸಂಕಷ್ಟಕ್ಕೆ ಗುರಿಯಾಗುವಂತಾಗಿದೆ.
ಕೂಡಲೇ ಅಧಿಕಾರಿಗಳು ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡು ಯುದ್ದೋಪಾದಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ. ಮೂರು, ನಾಲ್ಕು ದಿನಗಳು ಕಾಲುವೆಗೆ ನೀರು ಸ್ಥಗಿತಗೊಂಡರೇ, ರೈತರ ಪರಿಸ್ಥಿತಿ ಗಂಭೀರವಾಗುತ್ತದೆ. ಈಗಾಗಲೇ ಬಿಸಿಲು ಹೆಚ್ಚದ್ದರಿಂದ ಬೆಳೆಗಳಿಗೆ ನೀರು ಇಲ್ಲದಿದ್ದರೇ, ರೈತರು ಭಾರೀ ಪ್ರಮಾಣದ ನಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅತಿ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಅವರು ಒತ್ತಾಯಿಸಿದ್ದು, ಈ ರೀತಿ ಮತ್ತೇ ಕಾಲುವೆ ಹೊಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.