ಲಿಂಬೆ ಬೆಳೆಗಾರರ ಕಾರ್ಯಾಗಾರ ಉದ್ಘಾಟಿಸಿದ ಶಾಸಕ ಪಾಟೀಲ
ಇಂಡಿ: ಇಂಡಿಯ ನಿಂಬೆಗೆ ಭೌಗೋಳಿಕ ಸೂಚ್ಯಾಂಕ ದೊರೆತ್ತಿದ್ದು ಅಂತರ ರಾಷ್ಟೀಯ ಮಟ್ಟದಲ್ಲಿ ಇಂಡಿಯ ನಿಂಬೆಗೆ ಚೆನ್ನಾಗಿ ಬೆಲೆ ದೊರೆಯುತ್ತಿದ್ದು ರಾಜ್ಯ ಮತ್ತು ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲಿಯೂ ಭಾರಿ ಬೇಡಿಕೆ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಮಂಗಳವಾರ ಪಟ್ಟಣದ ರೈಲ್ವೆ ಸ್ಟೇಷನ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಎಸ್.ಡಬ್ಲೂ.ಎ.ಆರ್.ಡಿಎಸ್ ಸಂಸ್ಥೆ ಸಹಯೋಗದೊಂದಿಗೆ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿ ನಿಂಬೆ ಬೆಳೆಗಾರರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೋಲ್ಡ ಸ್ಟೋರೆಜ್ – ಇಂಡಿಯ ಕೃಷಿ ವಿಜ್ಞಾನದಲ್ಲಿ ಕೇಂದ್ರದಲ್ಲಿ ಮೂರು ಎಕರೆ, ಇಲ್ಲವೆ ನಿಂಬೆ ಅಭಿವೃದ್ದಿ ಮಂಡಳಿಗೆ ಸರಕಾರ ಜಾಗ ನೀಡಿದ್ದು, ಅಲ್ಲಿ ಮೂರು ಎಕರೆ, ಇಲ್ಲವೆ ಬೂದಿಹಾಳ ಹತ್ತಿರ ಔದ್ಯೋಗಿಕ ವಸಹಾತು ನಿರ್ಮಿಸುತ್ತಿದ್ದು, ಅಲ್ಲಿ ಮೂರು ಎಕರೆ ಯಾವದಾದರೂ ಒಂದು ಕಡೆ ಜಾಗ ನೀಡಿ ಶೀಘ್ರದಲ್ಲಿಯೇ ಕೋಲ್ಡ್ ಸ್ಟೋರೆಜ್ ನಿರ್ಮಿಸಲಾಗುವದು ಎಂದರು. ಈಗಾಗಲೇ ನಿಂಬೆ ಅಭಿವೃದ್ದಿಗೆ ಸರಕಾರ ೭.೫ ಕೋಟಿ ಹಣ ನೀಡಿದ್ದು, ಅದು ಕೋಲ್ಡ ಸ್ಟೋರೆಜ ನಿರ್ಮಿಸಲು ಉಪಯೋಗಿಸಬಹುದು ಎಂದರು.
ಮಾರುಕಟ್ಟೆ – ಸಧ್ಯ ನಿಂಬೆ ಖರೀದಿಗೆ ನಾಲ್ಕು ಇಲ್ಲವೆ ಐದು ಕಡೆ ದಲ್ಲಾಲಿಗಳು ಮಾರುಕಟ್ಟೆ ಮಾಡಿದ್ದು ಅದರ ಬದಲಾಗಿ ಸರಕಾರದಿಂದಲೇ ಒಂದು ಮಾರುಕಟ್ಟೆ ನಿರ್ಮಿಸಿ ತಾಲೂಕಿನ ಎಲ್ಲ ನಿಂಬೆ ಅಲ್ಲಿಯೇ ಖರಿದಿಸುವ ಮತ್ತು ದಲ್ಲಾಳಿಗಳು ಅಲ್ಲಿ ಬರುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ರೈತರು ಇಂಡಿಯ ಕೃಷಿ ವಿಜ್ಞಾನ ಕೇಂದ್ರದ ಮತ್ತು ಅಲ್ಲಿಯ ವಿಜ್ಞಾನಿಗಳ ಸಲಹೆ ಪಡೆದು ಕೊಳ್ಳಬೇಕು. ನಿಸರ್ಗ ತೋಟಗಾರಿಕೆ ಬೆಳೆಗಳಿಗೆ ಪೂರಕವಾಗಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಕೃಷಿ ಹೊಂಡ ಇಂಡಿ ತಾಲೂಕಿನಲ್ಲಿವೆ. ಅದಲ್ಲದೆ ಶೀಘ್ರದಲ್ಲಿ ಇಂಡಿ ತಾಲೂಕಿನಲ್ಲಿ ಕೃಷ್ಣಾ ಕಾಲುವೆಯಿಂದ ಮತ್ತು ರೇವಣಸಿದ್ದೇಶ್ವರ, ಗುತ್ತಿ ಬಸವಣ್ಣ ಮತ್ತು ತಿಡಗುಂದಿ ಶಾಖಾ ಕಾಲುವೆಯಿಂದ ನೀರು ಹರಿದು ಬರುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ ರೈತರು ಹೆಚ್ಚು ನಿಂಬೆ ಬೆಳೆಗೆ ಪ್ರೋತ್ಸಾಹಿಸಬೇಕಾಗಿದೆ ಎಂದರು.
ಕೆವಿಕೆ ಮುಖ್ಯಸ್ಥ ಡಾ. ಶಿವಶಂಕರ ಮೂರ್ತಿ ಮಾತನಾಡಿ, ದೇಶದ ೭೩೭ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಇಂಡಿಯ ಕೃಷಿ ವಿಜ್ಞಾನ ಕೇಂದ್ರ ಪ್ರಥಮ ಸ್ಥಾನದಲ್ಲಿದೆ. ರೈತರು ನಿಂಬೆ ಸೇರಿದಂತೆ ಬಹು ಬೆಳೆ ಪದ್ಧತಿ ಅನುಸರಿಸಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಮೇಲಿಂದ ಮೇಲೆ ಬಂದು ಸಲಹೆ ಪಡೆಯಲು ಕೇಳಿಕೊಂಡರು. ನಿಂಬೆ ರೋಗಕ್ಕೆ ಅಂಟುರೋಗ ಬರದೇ ಇರುವ ಹಾಗೆ ಕ್ರಮ ಕೈಕೊಳ್ಳಲು ವಿವರಿಸಿದರು. ಸಾವಯುವ ಗೊಬ್ಬರ, ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ತರುವ ಯೋಜನೆ ಅಳವಡಿಸಲು ತಿಳಿಸಿದರು.
ನಿಂಬೆ ಅಭಿವೃದ್ದಿ ಮಂಡಳಿ ಮ್ಯಾನೆಜಿಂಗ್ ಡೈರೆಕ್ಟರ್ ರಾಹುಲ್ ಕುಮಾರ ಭಾವಿದೊಡ್ಡಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೆಚ್.ಎಸ್. ಪಾಟೀಲ, ತೋಟಗಾರಿಕೆ ವಿಜ್ಞಾನಿ ಡಾ. ಹೀನಾ ಎಂ.ಎಸ್, ಬಾಲಾಜಿ ನಾಯಕ, ಪ್ರಗತಿಪರ ರೈತರಾದ ತಮ್ಮಣ್ಣ ಪೂಜಾರಿ, ಭೀಮಾಶಂಕರ ಮುರಗುಂಡಿ ಮಾತನಾಡಿದರು.
ವೇದಿಕೆಯ ಮೇಲೆ ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ, ಉಪ ಕೃಷಿ ನಿರ್ದೇಶಕ ಚಂದ್ರಕಾಂತ ಪವಾರ, ತಾಪಂ ಇಒ ಬಾಬುರಾವ ರಾಠೋಡ, ಮಲ್ಲನಗೌಡ ಪಾಟೀಲ ಇದ್ದರು.
ಪ್ರಗತಿಪರ ರೈತರಾದ ಸೋಮಣ್ಣ ಶರಣಪ್ಪ ಕರೂರ, ಭೀಮರಾಯ ಶಂಕರೆಪ್ಪ ಹಿರಾಪುರ, ಪ್ರಕಾಶ ಸಿದರಾಯ ಗಿಣ್ಣಿ, ರಾಮಣ್ಣ ಧರಗೊಂಡ ದೇವರ ನಾವದಗಿ ಇವರನ್ನು ಸನ್ಮಾನಿಸಲಾಯಿತು.