ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಂಡಳದ ಗಣೇಶ ವಿಸರ್ಜನಾ ಮೆರವಣಿಗೆ ಸಮಾರಂಭ
ಸನಾತನ ಧರ್ಮ ಉಳಿದರೆ ಭಾರತ ಉಳಿಯಲು ಸಾಧ್ಯ; ಶಾಸಕ ಯತ್ನಾಳ
ವಿಜಯಪುರ: ಸನಾತನ ಧರ್ಮ ಉಳಿದರೆ ಮಾತ್ರ ಭಾರತ ದೇಶ ಉಳಿಯಲು ಸಾಧ್ಯ. ಹೀಗಾಗಿ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ, ದೇಶದ ಉಳಿವಿಗಾಗಿ ನಾವೇಲ್ಲರೂ ಒಂದಾಗುವುದು ಅನಿವಾರ್ಯವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಮುಂಭಾಗದ ಶತಮಾನ ಕಂಡ ಸಂತ, ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಯವರ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇನೆಯ ಶ್ರೀ ಗಜಾನನ ಮಹಾಮಂಡಳ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಗಣೇಶ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆಯವರಂತೆ, ದೇಶದ ಅನ್ನ ತಿಂದು, ನೀರು ಕುಡಿದು, ಗಾಳಿ ಸೇವಿಸುವ ಯಾವೊಬ್ಬ ಹಿಂದೂ ದೇಶದ್ರೋಹಿ ಕೆಲಸ ಮಾಡಲ್ಲ, ಅದೇ ಸನಾತನ ಧರ್ಮ. ರಾಮಾಯಣ ವಾಲ್ಮೀಕಿ ಬರೆದರು, ಮಹಾಭಾರತ ವೇದ ವ್ಯಾಸರು ಬರೆದರು, ದೇಶದ ಪವಿತ್ರ ಸಂವಿಧಾನ ನಾನು ಬರೆಯುತ್ತಿರುವೆ ಎಂದು ಸ್ವತ ಸಂವಿಧಾನ ಶಿಲ್ಪಿ ಅಂಬೇಡ್ಕರ ಅವರೇ ಹೇಳಿಕೊಂಡಿದ್ದಾರೆ. ಎಲ್ಲಿದೆ ಜಾತಿ? ಜಾತಿ ಜಾತಿಯಿಂದ ಹೊರ ಬಂದು ನಾವೇಲ್ಲ ಒಂದಾಗಬೇಕು. ದಲಿತ ಯುವಕರು ಅಂಬೇಡ್ಕರ್ ರವರು ಬರೆದಿರುವ ಪುಸ್ತಕಗಳನ್ನು ಓದಿ, ಹಿಂದೂ ಸಮಾಜದ ಯಾವ ಜಾತಿಯಿಂದಲೂ ದಲಿತ ಸಮುದಾಯದವರಿಗೆ ಅಪಾಯವಿಲ್ಲ. ನೀವು ನಾವು ಕೂಡಿದ್ದರೆ, 2047ಕ್ಕೆ ಹಿಂದೂ ರಾಷ್ಟ್ರವನ್ನು, ಇಸ್ಲಾಂ ರಾಷ್ಟ್ರ ಮಾಡುವ ಹುನ್ನಾರದಿಂದ ಬಚಾವ್ ಆಗುತ್ತೇವೆ ಎಂದು ಸಲಹೆ ನೀಡಿದರು.
ಬಸವಣ್ಣನೂ ಶ್ರೇಷ್ಠ, ಪಂಚ ಪೀಠದವರು ನಮಗೆ ಶ್ರೇಷ್ಠ, ಅಂಬೇಡ್ಕರರು ಶ್ರೇಷ್ಠ, ಸಂಗೋಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ, ಸಾವರ್ಕರ್, ಬಾಬು ಜಗಜೀವನ ರಾಮ್, ಹಡಪದ ಅಪ್ಪಣ್ಣ, ವಾಲ್ಮೀಕಿ, ಕಿತ್ತೂರು ಚನ್ನಮ್ಮ, ಒನಕೆ ಓಬವ್ವನು ನಮಗೆ ಶ್ರೇಷ್ಠರು. ಕಾಂಗ್ರೆಸ್ ಉರಿಯುತ್ತಿರುವ ಬೆಂಕಿ ಅಂತ ಸ್ವತ ಅಂಬೇಡ್ಕರವರೇ ಹೇಳಿದ್ದಾರೆ. ಜಗತ್ತಿಗೆ ಮಾದರಿಯಾದ ಸಂವಿಧಾನ ಕೊಟ್ಟ ಪುಣ್ಯಾತ್ಮ ನಿಧನರಾದಾಗ ಅಂತ್ಯಕ್ರಿಯೆಗೆ ಕಾಂಗ್ರೆಸ್ ದೆಹಲಿಯಲ್ಲಿ 6 ಅಡಿ ಜಾಗ ಕೊಡಲಿಲ್ಲ. ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿದರು. ಮುಖರ್ಜಿ ರವರು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದರು, ಜನಸಂಘ ಭಾರತ ರತ್ನ ಕೊಟ್ಟಿತು. ಮೋದಿಯವರ ಪಂಚ ಕ್ಷೇತ್ರ ಅಭಿವೃದ್ಧಿಪಡಿಸಿದರು ಎಂದು ವಿವರಿಸಿದರು.
ಕರ್ನಾಟಕದ ಜನ ನನ್ನಿಂದ ನಿರೀಕ್ಷೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನನ್ನಿಂದ ಬದಲಾವಣೆ ಸಾಧ್ಯವೆಂದು ಜನರ ಮನಸ್ಸಿನಲ್ಲಿದೆ. ವಿಜಯಪುರ ನಗರದ ಮಾದರಿಯಲ್ಲೇ ಇಡೀ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇನೆಂಬ ಅಚಲವಾದ ವಿಶ್ವಾಸ ಹೊಂದಿದ್ದಾರೆ. ಯಾವ ಸಮಾಜಕ್ಕೂ ಸಹ ಅನ್ಯಾಯವಾಗದಂತೆ, ಅವರಿಗೆ ಅವರ ಹಕ್ಕು ಕೊಡಿಸುವ ಜೊತೆಗೆ ಸಮಗ್ರ ಕರ್ನಾಟಕ ಅಭಿವೃದ್ಧಿ ಮಾಡುವ ಶಪತ ಮಾಡಿರುವೆ. ಲೂಟಿ ಮಾಡಿ ದುಬೈದಲ್ಲಿ, ಅಮೇರಿಕಾದಲ್ಲಿ ಆಸ್ತಿ ಮಾಡಬೇಕೆಂಬ, ಸಿಂಗಾಪುರದಾಗ ಹಡಗು ತೆಗೆದುಕೊಳ್ಳಬೇಕೆಂಬ ದುರಾಸೆ ನನಗಿಲ್ಲ. ರಾಜ್ಯದ ಯುವಕರಿಗೆ ಉದ್ಯೋಗ ಸಿಗಬೇಕು, ಎಲ್ಲರೂ ಸ್ವಾಭಿಮಾನದಿಂದ ಜೀವನ ನಡೆಸಬೇಕೆಂಬ ಕನಸು ನನ್ನದಾಗಿದೆ. ಅಪ್ಪನಿಂದ ಮಗ, ಮಗನಿಂದ ಮೊಮ್ಮಕ್ಕಳು ಅಧಿಕಾರ ಬೇಕೆನ್ನುವುದು ಬದಲಾವಣೆ ಆಗಬೇಕು ಎಂದು ಹೇಳಿದರು.
ಮೇಯರ್ ಎಂ.ಎಸ್.ಕರಡಿ, ದಲಿತ ಮುಖಂಡ ಪ್ರತಾಪ್ ಚಿಕ್ಕಲಕಿ, ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕ ಗುರು ಗಚ್ಚಿನಮಠ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಮುಖಂಡರಾದ ಸಂತೋಷ ತಲಕೇರಿ, ಪ್ರಕಾಶ ಚವ್ಹಾಣ, ವಿಕ್ರಮ ಗಾಯಕವಾಡ ಮಾತನಾಡಿದರು. ಗೋಪಾಲ ಮಹಾರಾಜರು, ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಕಿರಣ ಪಾಟೀಲ, ವಿಠ್ಠಲ ಹೊಸಪೇಟ, ಮಲ್ಲಿಕಾರ್ಜುನ ಗಡಗಿ, ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ಚಂದ್ರು ಚೌದರಿ, ಸ್ವಾಮಿ ವಿವೇಕಾನಂದ ಸೇನೆಯ ಗಜಾನನ ಮಹಾಮಂಡಳದ ಅಧ್ಯಕ್ಷ ನಂದು ಗಡಗಿ, ಮುಖಂಡರಾದ ರಾಜು ಜಾಧವ, ಪಾಂಡುಸಾಹುಕಾರ ದೊಡಮನಿ, ಶಂಕರ ಹೂಗಾರ, ಪ್ರಕಾಶ ಚವ್ಹಾಣ, ಬಸವರಾಜ ಬಿರಾದಾರ, ಬಾಬು ಶಿರಶ್ಯಾಡ, ರಾಜಶೇಖರ ಬಜಂತ್ರಿ, ಸುನೀಲ ಬೈರವಾಡಗಿ, ಉಮೇಶ ವೀರಕರ ಸೇರಿದಂತೆ ಮತ್ತಿತರು ಇದ್ದರು.



















