ಶಿಕ್ಷಣ ದೇಶದ ಭವಿಷ್ಯ ರೂಪಿಸುವ ಅಸ್ತ್ರ-ಅಬೀದ್ ಗದ್ಯಾಳ
ಇಂಡಿ: ಶಿಕ್ಷಣ ದೇಶದ ಭವಿಷ್ಯವನ್ನು ರೂಪಿಸುವ ಪ್ರಮುಖ ಅಸ್ತ್ರ. ವಿದ್ಯೆಗೆ ನೀಡುವ ಪ್ರೋತ್ಸಾಹವು ಮಕ್ಕಳ ಬದುಕನ್ನು ರೂಪಿಸುತ್ತದೆ. ಮಕ್ಕಳು ತಂದೆ-ತಾಯಿ,ಗುರುಗಳಿಗೆ ಗೌರವಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಅವರು ಪಟ್ಟಣದ ಆಶ್ರಯ ಕಾಲೋನಿಯಲ್ಲಿರುವ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮಾಜ ಸೇವಕ ಹಸನ್ ಮುಜಾವರ ವತಿಯಿಂದ ಉಚಿತವಾಗಿ ಬ್ಯಾಗ್ ಮತ್ತು ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜತೆಗೆ ಆಶ್ರಯ ಕಾಲೊನಿಯ ಎರಡೂ ಸರ್ಕಾರಿ ಶಾಲೆಯ ಭೌತಿಕ ಸ್ಥಿತಿಗತಿಯನ್ನು ವೀಕ್ಷಿಸಿ,ಕಂಪೌಂಡ್ ದುರಸ್ತಿ ಕಾರ್ಯ ಮಾಡಿಸುವದಾಗಿ ಭರವಸೆ ನೀಡಿದರು. ಶಾಲಾ ಆವರಣದಲ್ಲಿ ಸಸಿನೆಟ್ಟು, ಮಕ್ಕಳು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಹಿರೇರೂಗಿ ಯುಬಿಎಸ್ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಶಿಕ್ಷಣವು ಮಾನವನ ಪ್ರಗತಿಗೆ ಆಧಾರವಾಗಿದೆ.
ಇದು ಸಮಾಜ ಮತ್ತು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ನೆರವಾಗಿ, ಬ್ಯಾಗ್-ಕಲಿಕಾ ಸಾಮಗ್ರಿಗಳನ್ನು ವಿತರಿಸಿ, ಪ್ರೋತ್ಸಾಹಿಸುವುದು ಪುಣ್ಯದ ಕೆಲಸ ಎಂದು ಹೇಳಿದರು.
ಧರ್ಮಗುರು ಜಿಯಾ ಉಲ್ ಹಕ್ ಉಮರಿ ಸಾನಿಧ್ಯ
ವಹಿಸಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಈ ನಿಟ್ಟಿನಲ್ಲಿ ಮಕ್ಕಳಿಗೆ ಹಸನ್ ಮುಜಾವರ ಅವರು ಬ್ಯಾಗ್,ಕಲಿಕಾ ಸಾಮಗ್ರಿ ವಿತರಿಸುತ್ತಿದ್ದು, ಮಕ್ಕಳು ಶೃದ್ಧೆಯಿಂದ ಶಿಕ್ಷಣದತ್ತ ಗಮನ ಹರಿಸಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಇಂಡಿ ಉರ್ದು ಕ್ಲಸ್ಟರ್ ಸಿಆರ್ಪಿ ಪರವೇಜ್ ಪಟೇಲ,
ಮುಖ್ಯ ಶಿಕ್ಷಕಿ ಎ ಎ ಜಮಾದಾರ, ಡಿ ಎಸ್ ಹಿರೇಮಠ, ಶಿಕ್ಷಕರಾದ ಎನ್ ಎ ಕಲಾದಗಿ, ಎಂ ಡಿ ಹೆಬ್ಬಾಳ, ಸಿ ಎಸ್ ಝಳಕಿ, ಎಂ ಎ ಮೋಮಿನ್, ನಿವೃತ್ತ ಶಿಕ್ಷಕ ಹುಸೇನ್ ಟೇಲರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಆಶ್ರಯ ಕಾಲೊನಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೆ ಇಂಡಿ ಉಪವಿಭಾಗಾಧಿಕಾರಿಗಳಾದ ಅಬೀದ್ ಗದ್ಯಾಳ ಅವರು ನೋಟ್ ಬುಕ್ ಗಳನ್ನು ವಿತರಿಸಿದರು ಹಾಗೂ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಎಲ್ಲ ಮಕ್ಕಳಿಗೆ
ಸಮಾಜ ಸೇವಕ ಹಸನ್ ಮುಜಾವರ ಅವರು ನೋಟ್ ಬುಕ್, ಲೇಖನ ಸಾಮಗ್ರಿಗಳನ್ನು ವಿತರಿಸಿದರು.



















