ಲಿಂಗಸೂಗೂರು: ಐತಿಹಾಸ ಮುದಗಲ್ ಪಟ್ಟಣದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ಅಧ್ಯಕ್ಷ ಎಸ್.ಎ.ನಯೀಮ್ ಅವರ ನೇತೃತ್ವದಲ್ಲಿ ಪುರಸಭೆಯ ಎದುರು ಪ್ರತಿಭಟನೆ ನಡೆಸಲಾಯಿತು.
ಮುದಗಲ್ ಪಟ್ಟಣಕ್ಕೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರುತ್ತಿರುವ ಪುರಸಭೆ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ಈ ವೇಳೆ ಕರವೆ ಅಧ್ಯಕ್ಷ ಎಸ್.ಎ. ನಯೀಮ್ ಮಾತನಾಡಿ ಪಟ್ಟಣದಲ್ಲಿ ಕುಡಿಯುವ ನೀರು ಎಂಟರಿಂದ ಹತ್ತು ದಿವಸಕ್ಕೆ ಒಮ್ಮೆ ಅನಿಯಮಿತವಾಗಿ ಸರಬರಾಜು ಆಗುತ್ತಿದೆ. ಇದರಿಂದ ಜನರಿಗೆ ತುಂಬಾ ತೊಂದರೆಯಾಗಿದೆ. ಅಲ್ಲದೆ ಎಂಟರಿಂದ ಹತ್ತು ದಿನಗಳವರೆಗೆ ನೀರನ್ನು ಶೇಖರಣೆ ಮಾಡುವುದು ಕಷ್ಟವಾಗಿದೆ. ಶೇಖರಣೆ ಮಾಡಿದ ನೀರಿನಲ್ಲಿ ಹುಳುಗಳು ಬೀಳುತ್ತಿವೆ. ಸಮರ್ಪಕ ನೀರು ಪೂರೈಕೆ ಯಾಗುವವರೆಗೂ ನೀರಿನ ಕರ ವಸೂಲಿ ಮಾಡಬಾರದು ಎಂದರು.
ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ವಾರ್ಡಿನ ಮಹಿಳೆಯರೊಂದಿಗೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಕೊಟ್ಟರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಮರಿಲಿಂಗಪ್ಪ, ಎಸ್.ಎನ್. ಖಾದ್ರಿ ಸಾಬು ಹುಸೇನ್, ನಾಗರಾಜ ನಾಯಕ, ಅಬ್ದುಲ್ ಮಜೀದ್, ಮಹಾಂತೇಶ್ ಚೆಟ್ಟರ, ವಿರುಪಾಕ್ಷಿ , ಸಾಬೀರ್ ಪಾಷಾ, ಜಮೀರ್, ಮಜೀದ್ ಕಿಲ್ಲಾ, ಚನ್ನಪ್ಪ ಉಪ್ಪಾರ, ಹನೀಫ ಖಾನ್, ಪುರಸಭೆ ಸಿಬ್ಬಂದಿ ರಂಗನಾಥ್ ತಳವಾರ ಉಪಸ್ಥಿತ ರಿದ್ದರು.