ಅಫಜಲಪುರ: ನಾವೆಲ್ಲ ದಿನ ಬೆಳಗಾದರೆ ಹತ್ತಾರು ದೇವರುಗಳಿಗೆ ಕೈ ಮುಗಿಯುತ್ತೇವೆ. ನಮ್ಮ ಬೇಕು ಬೇಡಿಕೆಗಳನ್ನು ಪೂರೈಸುವಂತೆ ದೇವರಲ್ಲಿ ಮೊರೆ ಹೋಗುತ್ತೇವೆ. ದೇವರಿಗೆ ನಿತ್ಯ ಕೈಮುಗಿದು ಭಕ್ತಿಯಿಂದ ಗೌರವಿಸಿದ ಹಾಗೆ ನಮಗೆ ಹೆತ್ತವರನ್ನು ಕೂಡ ಪ್ರೀತಿಯಿಂದ ಕಾಣಬೇಕೆಂದು ಉಜ್ಜಯಿನಿ ಜಗದ್ಗುರುಗಳು ಹೇಳಿದರು.
ಅಫಜಲಪುರ ತಾಲೂಕಿನ ಆನೂರ ಗ್ರಾಮದಲ್ಲಿ ಚಂದ್ರಗಿರಿ ದೇವಿಯ ನೂತನ ದೇವಾಲಯದ ಲೋಕಾರ್ಪಣೆಯ ಪ್ರಯುಕ್ತ ನಡೆದ ಧರ್ಮ ಸಭೆಯನ್ನು ಉದ್ಘಾಟಿಸಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ಭಾರತ ದೇಶ ಮಾತ್ರ ಸರ್ವ ಧರ್ಮಗಳು, ಸರ್ವ ಜಾತಿ, ಮತಪಂಥಗಳನ್ನು ಇಟ್ಟುಕೊಂಡಿದ್ದರು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿ ಎಲ್ಲರೂ ಭಾರತೀಯರೆಂಬ ಅಭಿಮಾನದಿಂದ ಬದುಕು ನಡೆಸುವವರ ದೇಶವಾಗಿದೆ. ಇಂತಹ ದೇಶದಲ್ಲಿ ಜನ್ಮ ಪಡೆದಿದ್ದು ನಮ್ಮೆಲ್ಲರ ಪುಣ್ಯವಾಗಿದೆ. ಮನುಷ್ಯ ಜೀವನ ಬಹಳ ಅಮೂಲ್ಯವಾದುದ್ದು ಈ ಜನ್ಮ ಸಾರ್ಥಕವಾಗಬೇಕಾದರೆ ದೇವರು, ಧರ್ಮದ ಕಾರ್ಯಗಳನ್ನು ಮಾಡುತ್ತಿರಬೇಕು. ಭಕ್ತರು ದೇವರನ್ನು ಆರಾಧಿಸುವಂತೆ ದೇವರ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇನ್ನೂ ಆನೂರ ಗ್ರಾಮದ ಚಂದ್ರಗಿರಿ ದೇವಿಗೆ ನಮ್ಮ ಉಜ್ಜಯಿನಿ ಪೀಠದ ಜಗದ್ಗುರುಗಳು ಧೀಕ್ಷೆ ನೀಡಿದ್ದಾರೆ. ಸಣ್ಣದಾಗಿದ್ದ ದೇವಾಲಯ ಇಂದು ಮುಗಿಲೆತ್ತರಕ್ಕೆ ನಿರ್ಮಾಣವಾಗಿದೆ. ಈ ದೇವಸ್ಥಾನದ ಲೋಕಾರ್ಪಣೆ ಉಜ್ಜಯಿನಿ ಪೀಠದಿಂದಲೇ ಆಗುತ್ತಿರುವುದು ಖುಷಿ ತಂದಿದೆ. ಈ ಗ್ರಾಮಸ್ಥರ ಭಕ್ತಿ ಶ್ಲಾಘನೀಯವಾದುದ್ದು ಎಂದರು.
ಬಡದಾಳ ತೇರಿನ ಮಠದ ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಮಾತನಾಡಿ ಸಾಮಾನ್ಯವಾಗಿ ಉಜ್ಜಯಿನಿ ಪೀಠದ ಜಗದ್ಗುರುಗಳು ಯಾವ ಊರಿಗೆ ಬರುತ್ತಾರೋ ಅಲ್ಲಿಗೆ ಅವರ ಸಂಬಂಧ ಬಹಳ ಅವಿನಾಭಾವವಾಗಿರುತ್ತದೆ. ಅಂಥದ್ದೆ ಸಂಬಂಧ ಆನೂರಿನ ಚಂದ್ರಗಿರಿ ದೇವಿಗೂ ಉಜ್ಜಯಿನಿ ಪೀಠಕ್ಕೂ ಇದೆ. ಜಗದ್ಗುರುಗಳ ಉತ್ಸವವನ್ನು ಗ್ರಾಮಸ್ಥರೆಲ್ಲ ಹಬ್ಬದಂತೆ ಆಚರಿಸಿದ್ದು ಮತ್ತು ಧರ್ಮ ಸಭೆಯಲ್ಲಿ ಜನಸಾಗರ ಹರಿದು ಬಂದಿದ್ದು ನೋಡಿದಾಗ ಸ್ವರ್ಗವೇ ಆನೂರಿನಲ್ಲಿ ಇಳಿದಂತೆ ಕಾಣುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಂದ್ರಗಿರಿ ದೇವಿಯ ಪ್ರಧಾನ ಅರ್ಚಕ ರಾಹುಲ್ ಭಂಡಾರಿ, ಸೀತಿಮನಿ ಧರ್ಮರ ಮಠದ ರಾಮಸ್ವಾಮಿ, ಚಿಂಚೋಳಿಯ ಗದ್ದುಗೇಶ್ವರ ಮಲ್ಲಿಕಾರ್ಜುನ ಶಿವಾಚಾರ್ಯ, ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು, ಕುಮಸಗಿಯ ಕಲ್ಲಾಲಿಂಗ ಶಿವಾಚಾರ್ಯರು, ಐನಾಪುರ ಮಠದ ಪಂಚಾಕ್ಷರಿ ದೇವರು, ಹಿರೇ ಅಳ್ಳಗಿಯ ಶಾಂತಲಿಂಗ ಶಿವಾಚಾರ್ಯರು, ಪವಾಡಯ್ಯ ಸ್ವಾಮಿ, ಇಂಡಿ ಡಾ. ಸ್ವರೂಪಾನಂದ ಸ್ವಾಮಿಜಿ, ನೀಲೂರಿನ ಶರಣಯ್ಯ ಸ್ವಾಮಿ, ಮಹಾಂತಯ್ಯ ಮಲಘಾಣ, ಮಡಿವಾಳಯ್ಯ ಸ್ಥಾವರಮಠ, ಮುಖಂಡರಾದ ಪುಣೆಯ ಖ್ಯಾತ ಉದ್ಯಮಿ ಎಸ್.ಬಿ ಪಾಟೀಲ್ ಪುಣೆ, ದಾನಯ್ಯ ಹಿರೇಮಠ, ಈರಣ್ಣ ನಾವದಗಿ, ಸಿದ್ದಯ್ಯ ಆಕಾಶಮಠ, ಧೂಳಪ್ಪ ಪೂಜಾರಿ, ಪ್ರಶಾಂತ ಪಾಟೀಲ್, ಬಾಬುರಾವ್ ಬಿರಾದಾರ, ಗಣೇಶ ಪಾಟೀಲ್, ನಿಂಗಣ್ಣ ಕಲಶೆಟ್ಟಿ, ಅಂಬರೀಷ ಪಟ್ಟಣ, ಶೇಖರಗೌಡ ಪಾಟೀಲ್, ರಾಜು ಜಿರೋಳಿ, ಸಿದ್ದು ರೂಗಿ, ಶ್ರೀಮಂತ ಭಂಡಾರಿ, ಬಾಬು ತಳವಾರ, ಶ್ರೀಮಂತ ಸಿಂಗೆ, ರಾಣಪ್ಪ ಬಬಲಾದ, ಮಹಾಂತ ತಳವಾರ, ಚಂದ್ರಕಾಂತ ಸಿಂಗೆ, ಡಾ. ಸಂಗಣ್ಣ ಸಿಂಗೆ, ಗುಂಡು ಮಾಳಗೆ ಸೇರಿದಂತೆ ಅನೇಕರು ಇದ್ದರು.
ಧರ್ಮಸಭೆಗೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪುರವಂತರು, ೨೫೦ ಮಹಿಳೆಯರ ಕುಂಭ ಕಳಶ, ವಾದ್ಯ ಮೇಳದೊಂದಿಗೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.