ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ : ಮಹಾದೇವ ಏವೂರ
ಇಂಡಿ: ಗ್ರಾಮೀಣ ಪ್ರದೇಶದ ಜನರನ್ನು ಆರ್ಥಿಕವಾಗಿ ಸ್ವಾವಲಂಬನೆಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಬಿ-ಜಿ ರಾಮ್ ಜಿ ಯೋಜನೆ ಅಡಿ ನಿರಂತರ ಕೂಲಿ ಕೆಲಸ ಒದಗಿಸಲು ಮೊದಲ ಆದ್ಯತೆ ನೀಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾಹದೇವಪ್ಪ ಏವೂರ ಹೇಳಿದರು.
ಗುರುವಾರ ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾವಿನಹಳ್ಳಿ ಗ್ರಾಮದ ಮರಗಾ ಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಚಟುವಟಿಕೆ ಅಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಕಾಯಕ ಬಂಧುಗಳು, ಅಕುಶಲ ಕೂಲಿಕಾರರಿಗೆ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಕೂಲಿ ಕಾರ್ಮಿಕರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಜಾರಿಯಲ್ಲಿರುವ ವಿಬಿ-ಜಿ ರಾಮ್ಜಿ ಯೋಜನೆ ಅಡಿಯಲ್ಲಿ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ಆಸಕ್ತರು ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಿ ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ತಿಳಿಸಿದರು.
ಈ ಯೋಜನೆ ಕೇವಲ ಉದ್ಯೋಗವಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲಿ ಬಾಳಿಕೆ ಬರುವ ಮೂಲಸೌಕರ್ಯಗಳ ನಿರ್ಮಾಣಕ್ಕೂ ಆದ್ಯತೆ ನೀಡಲಾಗಿದೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಅನುಮೋದಿತ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಯೋಜನೆಯಡಿ ಜಾನುವಾರು ಶೆಡ್, ಎರೆಹುಳು ತೊಟ್ಟಿ, ತೋಟಗಾರಿಕೆ ವಿಸ್ತರಣೆ, ತೆರೆದ ಬಾವಿ, ಕೃಷಿ ಹೊಂಡ (ಫಾರ್ಮ್ ಪಾಂಡ್) ಸೇರಿದಂತೆ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬಹುದು. ಸಮುದಾಯ ಕಾಮಗಾರಿಗಳಲ್ಲಿ ಬರ ನಿಯಂತ್ರಣ ಕಾಮಗಾರಿ, ಮಣ್ಣಿನ ಚೆಕ್ ಡ್ಯಾಂ, ಮುಖ್ಯ ಕಾಲುವೆ, ಪ್ರವಾಹ ತಿರುವು ಚರಂಡಿ, ಜಲ ಕೊಯ್ಲು ಹೊಂಡ, ಸಮುದಾಯ ಮೆಟ್ಟಿಲು ಬಾವಿ ಪುನಶ್ಚೇತನ, ನೀರಾವರಿ ಬಾವಿ, ಸರ್ಕಾರಿ ಶಾಲೆಗಳ ಕಂಪೌAಡ್ ಗೋಡೆ, ಅಡುಗೆ ಕೋಣೆ, ಶೌಚಾಲಯ ನಿರ್ಮಾಣ ಹಾಗೂ ಆಟದ ಮೈದಾನ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ ಎಂದು ಹೇಳಿದರು.
ತಾಪಂ ಸಹಾಯಕ ನಿರ್ದೇಶಕ ಗ್ರಾಮೀಣ ಉದ್ಯೋಗದ ಸಂಜಯ ಖಡೆಗೆಕರ್ ಮಾತನಾಡಿ, ಜುಲೈ ೧ ರಿಂದ ನರೇಗಾ ಯೋಜನೆ ಬದಲಾಗಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮೀಷನ್ ಗ್ರಾಮೀಣ ಕಾಯ್ದೆ ೨೦೨೫ ಯೋಜನೆ ಜಾರಿಗೆ ಬಂದಿರುವ ಕುರಿತು ತಿಳಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಸ್ಥಳದಲ್ಲಿ ಕೂಲಿಕಾರರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಯಿತು. ಸದರಿ ಶಿಬಿರದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಕೂಲಿಕಾರರು ಆರೋಗ್ಯ ತಪಾಸಣೆ ಮಾಡಿ ಮಧುಮೇಹ, ರಕ್ತದೊತ್ತಡ ಪರೀಕ್ಷೆ ಮಾಡಿ ಸಮಾಲೋಚನೆ ಮಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಬಿರಾದಾರ, ಎಂಐಎಸ್ ಸಂಯೋಜಕರು ಹನುಮಂತ ಮೇಟಿ, ತಾಂತ್ರಿಕ ಸಂಯೋಜಕ ಸಾಹಿಲ್ ದನಶೆಟ್ಟಿ, ಐಇಸಿ ಸಂಯೋಜಕ ರಾಮನಗೌಡ ಸರಬಡಗಿ, ತಾಂತ್ರಿಕ ಸಹಾಯಕ ಸಂಗಮೇಶ ಬಿರಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಡಿಇಒ ಜೀವನ ತೊರವಿ, ಬಿಲ್ ಕಲೆಕ್ಟರ್ ಗುರು ಹಕ್ಕಿ, ಗ್ರಾಮ ಕಾಯಕ ಮಿತ್ರ ಮಂಗಳಾ ಉತಾರೆ, ಮಂಜುನಾಥ ಮೇಲಿನಕೇರಿ, ಗ್ರಾಮದ ಮುಖಂಡರು, ಸ್ವ ಸಹಾಯ ಸಂಘದ ಸದಸ್ಯರು, ಕಾಯಕ ಬಂಧುಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು.
ಇಂಡಿ: ತಾಲೂಕಿನ ಮಾವಿನಳ್ಳಿ ಗ್ರಾಮದ ಮರಗಾ ಲಕ್ಷ್ಮಿ ದೇವಸ್ಥಾನ ಆವರಣದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಚಟುವಟಿಕೆ ಅಡಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹಾಗೂ ಕಾಯಕ ಬಂಧುಗಳು, ಅಕುಶಲ ಕೂಲಿಕಾರರಿಗೆ ಜಾಗೃತಿ ಅಭಿಯಾನದ ಕರಾ ಪತ್ರವನ್ನು ಮಾಹದೇವಪ್ಪ ಏವೂರ ವಿತರಿಸಿದರು.

















