ಮನುಷ್ಯನನ್ನು ಮಹಾದೇವನನ್ನಾಗಿಸುವುದೇ ಬಸವತತ್ವ: ಪ್ರೊ. ಶ್ರೀಶೈಲ ಘೂಳಿ
ಅಫಜಲಪುರ:“ದೇವರು ಮತ್ತು ಭಕ್ತನ ನಡುವೆ ದಲ್ಲಾಳಿಗಳ ಅಗತ್ಯವಿಲ್ಲ. ಮನುಷ್ಯನು ತನ್ನನ್ನು ತಾನು ಅರಿತುಕೊಂಡಾಗಲೇ ಆತ ದೈವಸ್ವರೂಪಿಯಾಗುತ್ತಾನೆ – ಇದೇ ಬಸವತತ್ವದ ಸಾರ” ಎಂದು ಪ್ರೊ. ಶ್ರೀಶೈಲ ಘೂಳಿ ಅಭಿಪ್ರಾಯಪಟ್ಟರು.
ನಗರದ ಬಸವಮಂಟಪದಲ್ಲಿ ಭಾರತೀಯ ಬಸವ ಬಳಗ, ಬಸವಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಸಂಯುಕ್ತವಾಗಿ ಆಯೋಜಿಸಿದ್ದ “ಶರಣ ಸಂಗಮ” ಕಾರ್ಯಕ್ರಮದಲ್ಲಿ “ಪವಾಡಗಳು ಹಾಗೂ ವೈಜ್ಞಾನಿಕ ಚಿಂತನೆ” ವಿಷಯದ ಕುರಿತು ಅನುಭಾವ ನೀಡುತ್ತ ಅವರು ಮಾತನಾಡಿದರು.
ಪವಾಡಗಳ ಹೆಸರಿನಲ್ಲಿ ಜನರನ್ನು ಮೋಸಗೊಳಿಸುವ ಪ್ರವೃತ್ತಿಯನ್ನು ತೀವ್ರವಾಗಿ ಖಂಡಿಸಿದ ಅವರು, ಶರಣರು ಇಂತಹ ಅಂಧಶ್ರದ್ಧೆಗಳಿಗೆ ವಿರೋಧವಾಗಿ ನಿಂತಿದ್ದರು ಎಂದು ಹೇಳಿದರು. ಇದೇ ವೇಳೆ ಕೆಲವು ಪವಾಡಗಳನ್ನು ಸ್ವತಃ ಪ್ರದರ್ಶಿಸಿ, ಅವುಗಳ ಹಿಂದೆ ಇರುವ ವೈಜ್ಞಾನಿಕ ಕಾರಣಗಳನ್ನು ವಿವರಿಸುವ ಮೂಲಕ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಪ್ರಯತ್ನ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಲಿಂಗೈಕ್ಯರಾದ ಡಾ. ದತ್ತಾತ್ರೇಯ ಭಜಂತ್ರಿ ಅವರಿಗೆ ನುಡಿನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶರಣ ಅಮೃತರಾವ್ ಪಾಟೀಲ್, ಡಾ. ಸಂಜಯ ಪಾಟೀಲ್ ಹಾಗೂ ಮುರುಘೇಂದ್ರ ಮಸಳಿ ಅವರು ಭಜಂತ್ರಿ ಅವರ ಜೀವನ ಸಾಧನೆಗಳನ್ನು ಸ್ಮರಿಸಿದರು.
ಮೃತ್ಯುಂಜಯ ಕಳ್ಳಿಮಠ ಅವರಿಂದ ವಚನ ಗಾಯನ ಕಾರ್ಯಕ್ರಮ ನಡೆದಿದ್ದು, ಸಭಿಕರನ್ನು ಭಾವನಾತ್ಮಕವಾಗಿ ಸ್ಪರ್ಶಿಸಿತು.



















