ಅನೀಲ ರಾಠೋಡ ಹತ್ಯೆ: ಅಪರಾಧಿಗಳಿಗೆ ಮರಣ ದಂಡನೆಗೆ ಆಗ್ರಹ
ಅಫಜಲಪುರ: ಕಲಬುರಗಿ ನಗರದಲ್ಲಿ ವಕೀಲ ಅನೀಲ ರಾಠೋಡ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆಯನ್ನು ತಾಲೂಕ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.
ಪಟ್ಟಣದ ತಹಸೀಲ್ದಾರ ಕಚೇರಿ ಮುಂದೆ ವಕೀಲರು ಪ್ರತಿಭಟನೆ ನಡೆಸಿ, ಪ್ರಕರಣದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ ದೇಶಾದ್ಯಂತ ವಕೀಲರ ಮೇಲೆ ನಡೆಯುತ್ತಿರುವ ಹಲ್ಲೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ನ್ಯಾಯಾಂಗ ವ್ಯವಸ್ಥೆಯ ಆಧಾರಸ್ತಂಭವಾಗಿರುವ ವಕೀಲರ ಮೇಲಿನ ದಾಳಿ ಕಾನೂನು ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅನೀಲ ರಾಠೋಡ ಅವರ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ತನಿಖೆಯನ್ನು ತ್ವರಿತಗೊಳಿಸಬೇಕು. ತನಿಖೆಯಲ್ಲಿ ಯಾವುದೇ ಲೋಪವಾಗದಂತೆ ಕ್ರಮ ಕೈಗೊಂಡು, ಅಪರಾಧಿಗಳನ್ನು ಶೀಘ್ರ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಕ್ರೂರ ಕೃತ್ಯಗಳಿಗೆ ಮರಣ ದಂಡನೆ ವಿಧಿಸಿದಾಗ ಮಾತ್ರ ಇಂತಹ ಘಟನೆಗಳಿಗೆ ತಡೆಯೊಡ್ಡಲು ಸಾಧ್ಯ ಎಂದು ಅವರು ಒತ್ತಾಯಿಸಿದರು.ಅಲ್ಲದೇ
ವಕೀಲರ ಭದ್ರತೆಗಾಗಿ ವಿಶೇಷ ಕಾಯ್ದೆ ಜಾರಿಗೆ ತರಬೇಕು. ನ್ಯಾಯಾಂಗ ಸೇವೆಯಲ್ಲಿ ತೊಡಗಿರುವ ವಕೀಲರಿಗೆ ಸೂಕ್ತ ರಕ್ಷಣೆಯನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇಲ್ಲವಾದಲ್ಲಿ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಹಿರಿಯ ವಕೀಲ ಕೆ.ಜಿ. ಪೂಜಾರಿ ಮಾತನಾಡಿ, ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಕೀಲರಿಗೆ ಭದ್ರತೆ ಒದಗಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಂತರ ತಹಸೀಲ್ದಾರ ಸಂಜೀವಕುಮಾರ ದಾಸರವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಕೀಲರಾದ ಎಸ್.ಜಿ. ಹುಲ್ಲೂರ, ಕೆ.ಡಿ.ಪಟೇಲ,ವಾಸೀಂ ಜಾಗಿರದಾರ, ಅನೀತಾ ದೊಡ್ಮನಿ,ಎಂ.ಎಸ್.ಪಾಟೀಲ, ಅರ್ಜುನ ಕೆರೂರ, ಸಿ.ಎಸ್.ಹಿರೇಮಠ,ಎಸ್.ಟಿ.ರಾಠೋಡ,ಸುರೇಶ ಅವಟೆ, ಅನೀಲ ಜಮಾದಾರ,ನಾಗೇಶ ಕೊಳ್ಳಿ, ಸುಪ್ರೀಯಾ ಅಂಕಲಗಿ,ಸಂತೋಷ ಸೇಜೋಳೆ ,ಮಂಜುನಾಥ ಧರಿಗೊಂಡ,ರಾಮು ಸುತಾರ,ಸಿದ್ದು ಇಸ್ಪೂರ,ರಾಜಾಬಾಸ್ಕರ,ರೇವೂಬಾಯಿ, ಸೇರಿದಂತೆ ಅನೇಕ ವಕೀಲರಿದ್ದರು.



















