ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ
ಮುದ್ದೇಬಿಹಾಳ: “ಕ್ಷಯ ರೋಗವು ಗುಣಪಡಿಸಬಹುದಾದ ಕಾಯಿಲೆಯಾಗಿದ್ದು, ಸಾರ್ವಜನಿಕರು ರೋಗದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಪಡೆಯಬೇಕು,” ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸತೀಶ್ ತಿವಾರಿ ಹೇಳಿದರು.
ಇಲ್ಲಿನ ಹೊರಪೇಟೆ ಗಲ್ಲಿಯಲ್ಲಿರುವ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಭಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಶ್ವ ಕ್ಷಯ ರೋಗ ನಿಯಂತ್ರಣ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತಿಹಾಸ ಮತ್ತು ಮಹತ್ವ
1882ರ ಮಾರ್ಚ್ 24ರಂದು ಜರ್ಮನಿಯ ವಿಜ್ಞಾನಿ ರಾಬರ್ಟ್ ಕಾಕ್ ಅವರು ಕ್ಷಯರೋಗಕ್ಕೆ ಕಾರಣವಾಗುವ ‘ಮೈಕೋಬ್ಯಾಕ್ಟಿರಿಯಂ ಟ್ಯುಬರ್ ಕ್ಯುಲೋಸಿಸ್’ ರೋಗಾಣುವನ್ನು ಪತ್ತೆ ಹಚ್ಚಿದ್ದರು. ಈ ಮಹತ್ವದ ಸಂಶೋಧನೆಯ ನೆನಪಿಗಾಗಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ಡಾ. ತಿವಾರಿ ವಿವರಿಸಿದರು. ರೋಗ ಖಚಿತವಾದ ನಂತರ 6 ರಿಂದ 20 ತಿಂಗಳವರೆಗೆ ಕ್ರಮಬದ್ಧವಾಗಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯವಿದೆ ಎಂದರು.
ಗರಸಂಗಿ ಆರೋಗ್ಯ ಕೇಂದ್ರದಲ್ಲಿ ಜಾಗೃತಿ
ತಾಲ್ಲೂಕಿನ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೂ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್. ಗೌಡರ, “ಎರಡು ವಾರಕ್ಕೂ ಹೆಚ್ಚು ಕಾಲ ಕೆಮ್ಮು, ಜ್ವರ ಕಂಡುಬಂದಲ್ಲಿ ನಿರ್ಲಕ್ಷಿಸದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ವಿಶೇಷವಾಗಿ ಎಚ್ಐವಿ ಸೋಂಕಿತರು, ಮಧುಮೇಹ ಪೀಡಿತರು ಹಾಗೂ ಧೂಮಪಾನಿಗಳು ಈ ಸೋಂಕಿಗೆ ಬೇಗ ತುತ್ತಾಗುವ ಸಾಧ್ಯತೆ ಇರುತ್ತದೆ. ರೋಗಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ರೋಗಾಣುಗಳಿಂದ ಇತರರಿಗೆ ಹರಡುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಅನುಸೂಯ ತೇರದಾಳ, ಯಲ್ಲಪ್ಪ ಚಲವಾದಿ, ಅಮರಯ್ಯ ಶಾಸ್ತ್ರಿ, ಎಸ್.ಡಿ. ಸಗರಿ, ಎಂ.ಎಂ. ಟಪಾಲ್, ಎಸ್.ಸಿ. ರುದ್ರವಾಡಿ, ವಿ.ಕೆ. ಪಾಟೀಲ್, ಝೆಡ್.ಎಂ. ಬೀಳಗಿ, ಪ್ರಶಿಭಾರಣಿ ಹಾಗೂ ಶ್ರೀ ಸಿದ್ದಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.



















