ಮುದ್ದೇಬಿಹಾಳ ಏ. 5 ರಂದು ಡಾ. ಬಾಬು ಜಗಜೀವನ ರಾಮ್ ಜಯಂತಿ; ತಾಲ್ಲೂಕು ಆಡಳಿತದಿಂದ ಅದ್ದೂರಿ ಆಚರಣೆಗೆ ನಿರ್ಧಾರ
ಮುದ್ದೇಬಿಹಾಳ: ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜಯಂತ್ಯುತ್ಸವವನ್ನು ಏಪ್ರಿಲ್ 5 ರಂದು ತಾಲ್ಲೂಕು ಆಡಳಿತದ ವತಿಯಿಂದ ಅತ್ಯಂತ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು. ಬುಧವಾರ ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ತಾಲ್ಲೂಕಿನ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯತಿಗಳು, ಅಂಗನವಾಡಿ ಕೇಂದ್ರಗಳು, ಶಾಲೆ-ಕಾಲೇಜುಗಳು ಹಾಗೂ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಜಯಂತಿ ಆಚರಿಸಬೇಕು. ಜಯಂತಿ ಆಚರಣೆ ಮಾಡಿದ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಪರಿಶೀಲಿಸಿ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು ಎಂದು ತಹಶೀಲ್ದಾರ ಕೀರ್ತಿ ಚಾಲಕ ಅವರ ಆದೇಶ ಮೇರಿಗೆ ಶಿರಸ್ತೆದಾರ ಎಂ ಎ ಬಾಗೇವಾಡಿ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಿಜೃಂಭಣೆಯ ಮೆರವಣಿಗೆ ಜಯಂತಿಯಂದು ಆಲಮಟ್ಟಿ ರಸ್ತೆಯಲ್ಲಿರುವ ಡಾ. ಬಾಬು ಜಗಜೀವನ ರಾಮ್ ವೃತ್ತದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಪ್ರಮುಖ ರಸ್ತೆಗಳ ಮೂಲಕ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ದ್ಯಾಮವ್ವನ ಕಟ್ಟೆ, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಸಾಗಿ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬಸಂತಿ ಮಠ ವಿವರಿಸಿದರು. ಬಸ್ ನಿಲ್ದಾಣದ ಸ್ವಚ್ಛತೆಗೆ ಮುಖಂಡರ ಆಗ್ರಹ ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡ ಮಂಜುನಾಥ ಕುಂದರಗಿ, “ಆಲಮಟ್ಟಿ ರಸ್ತೆಯಲ್ಲಿರುವ ಬಾಬು ಜಗಜೀವನ ರಾಮ್ ಹೆಸರಿನ ಬಸ್ ನಿಲ್ದಾಣದ ಮುಂದೆ ಕಸದ ತ್ಯಾಜ್ಯಗಳು ತುಂಬಿದ್ದು, ಇದು ಮಹಾನ್ ನಾಯಕರಿಗೆ ತೋರುತ್ತಿರುವ ಅಗೌರವವಾಗಿದೆ. ಕೂಡಲೇ ಆ ಪ್ರದೇಶವನ್ನು ಸ್ವಚ್ಛಗೊಳಿಸಿ ಗಾರ್ಡನ್ ನಿರ್ಮಿಸಬೇಕು,” ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ತಕ್ಷಣವೇ ಬಸ್ ನಿಲ್ದಾಣದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳ ಗೈರುಹಾಜರಿ: ತೀವ್ರ ಆಕ್ರೋಶ ಇತ್ತೀಚೆಗೆ ನಡೆದ ಸಮಗಾರ ಹರಳಯ್ಯ ಜಯಂತಿಯನ್ನು ಅಬಕಾರಿ ಇಲಾಖೆಯಲ್ಲಿ ಆಚರಿಸದ ಬಗ್ಗೆ ಮುಖಂಡ ಭಗವಂತ ಕಬಾಡೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಯಂತಿ ಕಾರ್ಯಕ್ರಮಗಳಿಗೆ ಗೈರಾಗುವ ಹಾಗೂ ನಿಯಮ ಪಾಲಿಸದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲು ಆಯುಕ್ತರಿಗೆ ಪತ್ರ ಬರೆಯಬೇಕೆಂದು ಮುಖಂಡರಾದ ತಿಪ್ಪಣ್ಣ ದೊಡ್ಡಮನಿ, ಮಂಜುನಾಥಸ್ವಾಮಿ ಕುಂದರಗಿ ಆಗ್ರಹಿಸಿದ್ದಾರೆ. ಈ ಸಭೆಯಲ್ಲಿ ಬಾಲಚಂದ್ರ ಹುಲ್ಲೂರ ಆನಂದ ಮುದೂರ ಅಶೋಕ್ ಪಾದಗಟ್ಟಿ ನಾಗೇಶ್ ಭಜಂತ್ರಿ ಪರಶುರಾಮ ತಳವಾರ, ತಾಪಂ ಸಹಾಯಕ ನಿರ್ದೇಶಕ (ಪಂ ರಾಜ್ಯ) ಮಲ್ಲಿಕಾರ್ಜುನ ಕೋರಿ, ಡಾ ಶಿವಾನಂದ ಮೇಟಿ ಆರ್ ಎಂ ಹಾದಿಮನಿ, ಎ ಎಸ್ಐ ಎ ಬಿ ಟಕ್ಕಳಕಿ,ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಸಂಜು ನಾಯಕ,ಸಂಗಮೇಶ ವಾಲಿಕಾರ, ಸೇರಿದಂತೆ ಸಭೆಯಲ್ಲಿ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ದಲಿತ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.



















