ಈದ್ ಹಬ್ಬದ ಸಂದೇಶ: ಪ್ರೀತಿ, ಸಹೋದರತ್ವ ಮತ್ತು ಸಮಾಜದ ಪ್ರಗತಿ
ಮುದ್ದೇಬಿಹಾಳ :- ಪಟ್ಟಣದಲ್ಲಿನ ತಾಳಿಕೋಟೆ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ (ರಮಜಾನ )ಈದ್ ಉಲ್ ಫಿತ್ರ್ ಹಬ್ಬದ ಅಂಗವಾಗಿ ವಿಶೇಷ ನಮಾಜ್ ಭಕ್ತಿಭಾವದಿಂದ ನೆರವೇರಿಸಲಾಯಿತು. ಮುದ್ದೇಬಿಹಾಳ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಆಗಮಿಸಿ, ಶಾಂತಿ, ಸೌಹಾರ್ದತೆ ಮತ್ತು ಭಕ್ತಿಯ ವಾತಾವರಣದಲ್ಲಿ ನಮಾಜ್ ಸಲ್ಲಿಸಿದರು. ಬೆಳಗ್ಗಿನ ಜಾವದಿಂದಲೇ ಈದ್ಗಾ ಮೈದಾನದಲ್ಲಿ ಜನರ ಸಂಚಾರ ಹೆಚ್ಚಾಗಿ, ಹಬ್ಬದ ಸಂಭ್ರಮ ಕಂಗೊಳಿಸುತ್ತಿತ್ತು.
ನಮಾಜ್ ನಂತರ ಜಾಮಿಯಾ ಮಸೀದಿಯ ಇಮಾಮ್ ಹಾಗೂ ಖತೀಬ್ ಮೌಲಾನಾ ಮುಫ್ತಿ ಅಫ್ತಾಬ್ ಆಲಂ ಅವರು ಸಮುದಾಯದ ಪ್ರಗತಿ ಮತ್ತು ಏಕತೆಯ ಕುರಿತು ಮನನೀಯ ಭಾಷಣ ಮಾಡಿದರು. ತಮ್ಮ ಉಪನ್ಯಾಸದಲ್ಲಿ ಅವರು ಸಮಾಜದ ಸುಧಾರಣೆ, ಶಿಕ್ಷಣದ ಅಗತ್ಯತೆ ಹಾಗೂ ಪರಸ್ಪರ ಸೌಹಾರ್ದತೆಯ ಮಹತ್ವವನ್ನು ಒತ್ತಿ ಹೇಳಿದರು.
ಈದ್ ಹಬ್ಬವು ಕೇವಲ ಹಬ್ಬವಲ್ಲ, ಅದು ಸಹೋದರತ್ವ, ಪ್ರೀತಿ ಮತ್ತು ವೈಷಮ್ಯಗಳನ್ನು ದೂರ ಮಾಡುವ ಮಹತ್ವದ ಸಂದೇಶವನ್ನು ಸಾರುತ್ತದೆ , ಇಂದಿನ ದಿನಗಳಲ್ಲಿ ಸಮಾಜ ಒಳಜಗಳಗಳಲ್ಲಿ ಸಿಲುಕಿಕೊಂಡಿರುವುದು ವಿಷಾದನೀಯ ಸಂಗತಿ ಎಂದು ಹೇಳಿದ ಅವರು, ದೊಡ್ಡ ಸಮಸ್ಯೆಗಳನ್ನು ಎದುರಿಸಲು ಮೊದಲು ಕುಟುಂಬ ಮತ್ತು ಸಮುದಾಯದ ಒಳಗಿನ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವುದು ಅತ್ಯಾವಶ್ಯಕ ಎಂದು ಕರೆ ನೀಡಿದರು.
ಶಿಕ್ಷಣದ ಪ್ರಾಮುಖ್ಯತೆಯನ್ನು ವಿವರಿಸಿದ ಮೌಲಾನಾ ಅವರು, ಪೋಷಕರು ತಮ್ಮ ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಜೊತೆಗೆ ಪ್ರಪಂಚಿಕ ಶಿಕ್ಷಣವನ್ನೂ ನೀಡಬೇಕೆಂದು ಸಲಹೆ ನೀಡಿದರು. ಸಮಾಜದ ಬಡ ಮತ್ತು ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣದಲ್ಲಿ ಸಹಾಯ ಮಾಡಲು ಸ್ಥಳೀಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ, ಜಕಾತ್ ಮತ್ತು ಇತರ ನೆರವುಗಳ ಮೂಲಕ ಅವರನ್ನು ಉತ್ತೇಜಿಸಬೇಕು ಎಂದು ಹೇಳಿದರು. ಈ ರೀತಿಯಲ್ಲಿ ವೈದ್ಯರು, ವಕೀಲರು ಮತ್ತು ವಿವಿಧ ಕ್ಷೇತ್ರಗಳಲ್ಲಿ ನಿಪುಣರಾದ ವ್ಯಕ್ತಿಗಳನ್ನು ಬೆಳೆಸಬಹುದು ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಪರಿಸ್ಥಿತಿಯನ್ನು ಉಲ್ಲೇಖಿಸಿ, ಶಿಕ್ಷಣದ ಕೊರತೆಯಿಂದ ಸಮುದಾಯದ ಪ್ರತಿನಿಧಿತ್ವ ಕುಂಠಿತವಾಗಿದ್ದು, ನಮ್ಮ ಸಮಸ್ಯೆಗಳನ್ನು ಸಮರ್ಪಕವಾಗಿ ಹೇಳುವವರು ಕಡಿಮೆಯಾಗಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು. ಸಮಾಜದಲ್ಲಿ ಹೆಚ್ಚು ವಿದ್ಯಾವಂತರಾಗಿದ್ದರೆ, ಜವಾಬ್ದಾರಿಯುತ ನಾಗರಿಕರು ಹೆಚ್ಚಾಗಿ ಇದ್ದರೆ ಪರಿಸ್ಥಿತಿ ಇನ್ನಷ್ಟು ಉತ್ತಮವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಕೊನೆಯಲ್ಲಿ ಮೌಲಾನಾ ಮುಫ್ತಿ ಅಫ್ತಾಬ್ ಆಲಂ ಅವರು ಪ್ರಾರ್ಥನೆ ಸಲ್ಲಿಸಿ, ಅಲ್ಲಾಹ್ ಸಮುದಾಯದಲ್ಲಿ ಏಕತೆ ಮತ್ತು ಶಾಂತಿಯನ್ನು ನೆಲೆಗೊಳಿಸಲಿ, ಅನ್ಯಾಯದ ಮಾರ್ಗದಲ್ಲಿರುವವರಿಗೆ ಸನ್ಮಾರ್ಗದರ್ಶನ ನೀಡಲಿ ಹಾಗೂ ಒಳ್ಳೆಯ ಕಾರ್ಯಗಳಲ್ಲಿ ತೊಡಗಿರುವವರ ಪ್ರಯತ್ನಗಳನ್ನು ಸ್ವೀಕರಿಸಲಿ ಎಂದು ಹಾರೈಸಿದರು.
ನಮಾಜ್ ನಂತರ ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಹಿರಿಯರು, ಯುವಕರು ಮತ್ತು ಮಕ್ಕಳು ಎಲ್ಲರೂ ಹಬ್ಬದ ಸಂತೋಷವನ್ನು ಹಂಚಿಕೊಂಡರು. ಸಂಪೂರ್ಣ ಕಾರ್ಯಕ್ರಮವು ಶಾಂತಿಯುತವಾಗಿ, ಸೌಹಾರ್ದತೆಯ ವಾತಾವರಣದಲ್ಲಿ ನೆರವೇರಿತು.