ತಂಗಡಗಿಯಲ್ಲಿ ೨೬ ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ: ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಸ್ವಾಮೀಜಿಗಳ ಕರೆ
ಅದ್ಧೂರಿಯಾಗಿ ಮದುವೆ ಮಾಡುವ ಬದಲು, ಅದೇ ಹಣದಲ್ಲಿ ನೂರಾರು ಬಡವರ ಮಕ್ಕಳ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು,”
ಮುದ್ದೇಬಿಹಾಳ: “ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳ ಮದುವೆಗಳನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಮಾಡುವ ಬದಲು, ಅದೇ ಹಣದಲ್ಲಿ ನೂರಾರು ಬಡವರ ಮಕ್ಕಳ ಮದುವೆ ಮಾಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು,” ಎಂದು ಬಸವನ ಬಾಗೇವಾಡಿ ಶಿವಪ್ರಕಾಶ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಶುಕ್ರವಾರ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ದುಂದುವೆಚ್ಚಕ್ಕೆ ಕಡಿವಾಣ ಬೀಳಲಿ
ಕಾರ್ಯಕ್ರಮದಲ್ಲಿ ಮಾತನಾಡಿದ ಕುಂಟೋಜಿ ಭಾವೈಕ್ಯತಾ ಹಿರೇಮಠದ ಚೆನ್ನವೀರ ಶಿವಾಚಾರ್ಯರು, “ಮದುವೆಗೆ ಮುಂಚಿತವಾಗಿ ಫೋಟೋ ಶೂಟ್ಗಳಿಗಾಗಿ ಲಕ್ಷಾಂತರ ರೂಪಾಯಿ ವ್ಯರ್ಥ ಮಾಡುವ ಇಂದಿನ ಟ್ರೆಂಡ್ ಬದಲಾಗಬೇಕು. ಸಮಾಜದಲ್ಲಿ ಇಂತಹ ಮಾದರಿ ವಿವಾಹಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು,” ಎಂದರು. ಬಿಲ್ಕೆರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಸಾಮೂಹಿಕ ವಿವಾಹಗಳು ಬಡವರ ಮದುವೆಗಳಲ್ಲ, ಇವು ನಿಜವಾದ ಭಾಗ್ಯವಂತರ ಮದುವೆಗಳು,” ಎಂದು ಬಣ್ಣಿಸಿದರು.
ಮಂಗಳಮುಖಿಯರನ್ನು ಕಡೆಗಣಿಸದಿರಿ
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಮಾತನಾಡಿ, “ತೃತೀಯ ಲಿಂಗಿ ಮಕ್ಕಳು ಜನಿಸಿದರೆ ಅವರನ್ನು ಕಡೆಗಣಿಸದೆ ಉತ್ತಮ ಶಿಕ್ಷಣ ಕೊಡಿಸಿ. ಶಿಕ್ಷಣ ದೊರೆಯದ ಕಾರಣಕ್ಕೆ ಅವರು ರಸ್ತೆ, ರೈಲು ನಿಲ್ದಾಣಗಳಲ್ಲಿ ಕೈಚಾಚುವಂತಾಗಿದೆ. ಸರ್ಕಾರ ಮತ್ತು ಸಂಘ ಸಂಸ್ಥೆಗಳು ಅವರಿಗೆ ಅನುಕಂಪ ತೋರುವ ಬದಲು ಉದ್ಯೋಗಾವಕಾಶ ಕಲ್ಪಿಸಬೇಕು,” ಎಂದು ಮನವಿ ಮಾಡಿದರು.
೨೬ ಜೋಡಿಗಳ ನವಜೀವನ
ಈ ಬಾರಿಯ ಜಾತ್ರಾ ಮಹೋತ್ಸವದ ಅಂಗವಾಗಿ ಒಟ್ಟು ೨೬ ಜೋಡಿಗಳು ನವಜೀವನಕ್ಕೆ ಕಾಲಿರಿಸಿದರು. ಶಿಶು ಅಭಿವೃದ್ಧಿ ಮೇಲ್ವಿಚಾರಕಿ ಆರ್.ಎಸ್. ಬಿರಾದಾರ ಅವರು ಸ್ಥಳದಲ್ಲಿದ್ದು ಯಾವುದೇ ಬಾಲ್ಯ ವಿವಾಹ ನಡೆಯದಂತೆ ಜಾಗೃತಿ ವಹಿಸಿದ್ದರು. ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿತ್ತು.
ಕಾರ್ಯಕ್ರಮದಲ್ಲಿ ತಂಗಡಗಿ ಹಡಪದ ಅಪ್ಪಣ್ಣ ಸಂಸ್ಥಾನ ಗುರುಪೀಠದ ಅನ್ನದಾನ ಭಾರತಿ ಅಪ್ಪಣ್ಣ ಶ್ರೀ, ಬಳವಾಟದ ಸೋಮಶೇಖರ ಶಿವಾಚಾರ್ಯರು, ಸಚಿವರ ಸಹೋದರ ನಾಗರಾಜ ತಂಗಡಗಿ, ದೇವಿ ಆರಾಧಕರಾದ ಶಾಂತಪ್ಪ ಪೂಜಾರಿ, ಮುತ್ತಪ್ಪ ಪೂಜಾರಿ, ಮಂಜು ಪೂಜಾರಿ, ಸಂಗಣ್ಣ ಗುಳೇದಗುಡ್ಡ, ಸಂಗಣ್ಣ ದೇವರಮನಿ, ಚರಲಿಂಗಪ್ಪ ಹಾದಿಮನಿ, ರಾಮು ಲಿಂಗದಳ್ಳಿ, ಈಶ್ವರ ಗಡ್ಡಿ, ಎಂ.ಡಿ. ತಾರನಾಳ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.