ಮುದ್ದೇಬಿಹಾಳದಲ್ಲಿ ಮನಿಯಾರ್ ಚಾರಿಟೇಬಲ್ ಟ್ರಸ್ಟ್ನಿಂದ ರಂಜಾನ್ ಕಿಟ್ ವಿತರಣೆ: ಸೌಹಾರ್ದತೆಯ ಸಂಗಮ
ಮುದ್ದೇಬಿಹಾಳ: “ಪರಮಾತ್ಮನ ಪೂಜೆ ಮಾಡುವ ಕೈಗಳಿಗಿಂತ, ಅಲ್ಲಾಹನನ್ನು ನೆನೆದು ನಮಾಜ್ ಮಾಡುವುದಕ್ಕಿಂತ, ಬಡವರ ಹಸಿವು ನೀಗಿಸಿ ಅವರಲ್ಲಿ ಭಗವಂತನನ್ನು ಕಾಣುವ ಸೇವಾ ಮನೋಭಾವದ ಕೈಗಳು ಅತ್ಯಂತ ದೊಡ್ಡವು,” ಎಂದು ಆಲಮೇಲ ವಿರಕ್ತಮಠದ ಶ್ರೀ ಜಗದೇವ ಮಲ್ಲಿಬೊಮ್ಮ ಮಹಾಸ್ವಾಮಿಗಳು ಮಾರ್ಮಿಕವಾಗಿ ನುಡಿದರು.
ಪಟ್ಟಣದ ಮನಿಯಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಡ ಮತ್ತು ನಿರ್ಗತಿಕರಿಗೆ ರಂಜಾನ್ ಕಿಟ್ ವಿತರಿಸುವ ಬೃಹತ್ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮಾನವೀಯತೆಯೇ ಧರ್ಮದ ಮೂಲ
ಸ್ವಾಮೀಜಿಗಳು ಮಾತನಾಡುತ್ತಾ, “ಧರ್ಮದ ಚೌಕಟ್ಟನ್ನು ಮೀರಿ ಮಾನವೀಯತೆಯನ್ನು ಎತ್ತಿ ಹಿಡಿಯುವ ಕೆಲಸ ಇಂದು ಮುದ್ದೇಬಿಹಾಳದಲ್ಲಿ ನಡೆಯುತ್ತಿದೆ. ತಾನು ಮಾತ್ರ ಹಬ್ಬ ಆಚರಿಸದೆ, ತನ್ನ ಸುತ್ತಲಿನ ಬಡವರೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು ಎಂಬ ಅಯ್ಯಬ್ ಮನಿಯಾರ ಅವರ ದಶಕಗಳ ಶ್ರಮ ಶ್ಲಾಘನೀಯ. ಇಂತಹ ಸೌಹಾರ್ದತೆಯ ನಡೆ ಇಡೀ ಸಮಾಜಕ್ಕೆ ಮಾದರಿ,” ಎಂದರು.
ಸೇವೆಯ ಪಥದಲ್ಲಿ 25 ವರ್ಷಗಳ ಪಯಣ
ಕಾರ್ಯಕ್ರಮದ ರೂವಾರಿ ಹಾಗೂ ಟ್ರಸ್ಟ್ ಸಂಚಾಲಕ ಅಯ್ಯಬ್ ಮನಿಯಾರ್ ಮಾತನಾಡಿ, “ನಾನು 1998ರಿಂದಲೂ ಈ ಕಿಟ್ ವಿತರಣಾ ಕಾರ್ಯವನ್ನು ಆರಂಭಿಸಿದೆ. ಅಂದು ಕೇವಲ 50- 400 ಕಿಟ್ಗಳಿಂದ ಆರಂಭವಾದ ಈ ಪುಟ್ಟ ಸೇವೆ ಇಂದು 2500 ಕುಟುಂಬಗಳಿಗೆ ತಲುಪಿದೆ. ಉಳಿತಾಯದ ಹಣದಿಂದ ಜನಸೇವೆ ಮಾಡುವುದು ಸಾಧ್ಯವಿದೆ. ಕಿಟ್ ಪಡೆಯಲು ಬರುವವರಲ್ಲಿ ನಾನು ನನ್ನ ತಂದೆ-ತಾಯಿ, ಅಣ್ಣ-ತಮ್ಮಂದಿರನ್ನು ಕಾಣುತ್ತೇನೆ. ನನ್ನ ದೇಹದಲ್ಲಿ ಉಸಿರಿರುವವರೆಗೆ ಈ ಸೇವೆಯನ್ನು ನಿಲ್ಲಿಸುವುದಿಲ್ಲ,” ಎಂದು ಭಾವುಕರಾಗಿ ನುಡಿದರು.
ಮುಂದುವರಿದು ಮಾತನಾಡಿದ ಅವರು, “ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬದುಕಲು ಮನೆ ಕಟ್ಟುತ್ತೇವೆ. ಆದರೆ ನಮ್ಮ ಸಾವಿನ ನಂತರ ನಾವು ಹೋಗುವ 3-6 ಅಡಿ ಮಣ್ಣಿನ ಜಾಗವನ್ನು ಶೃಂಗರಿಸಲು ನಾವು ಇಂತಹ ಪುಣ್ಯದ ಕೆಲಸಗಳನ್ನು ಮಾಡಲೇಬೇಕು,” ಎಂದರು.
ಸೌಹಾರ್ದತೆ ಮತ್ತು ಶಾಂತಿಯ ಸಂದೇಶ
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್. ಚೌಕಿಮಠ ಮಾತನಾಡಿ, “ಬಡವರ ನೋವು ಅರ್ಥ ಮಾಡಿಕೊಂಡವರಿಂದ ಮಾತ್ರ ಇಂತಹ ನಿಸ್ವಾರ್ಥ ಸೇವೆ ಸಾಧ್ಯ. ಇಸ್ಲಾಮಿಕ್ ಕಾರ್ಯಕ್ರಮಗಳಿಗೆ ಹಿಂದೂಗಳನ್ನು ಆಹ್ವಾನಿಸುವುದು ನಮ್ಮ ದೇಶದ ಸೌಹಾರ್ದತೆಯ ಶಕ್ತಿಯನ್ನು ತೋರಿಸುತ್ತದೆ. ಪ್ರಪಂಚದ ಅಧಿಪತಿಯಾಗಬೇಕೆಂದು ಹೊರಟವರ ಅಹಂಕಾರಕ್ಕೆ ಯುದ್ಧಗಳೇ ಪಾಠ ಕಲಿಸುತ್ತಿವೆ. ಧರ್ಮದ ಹೆಸರಿನಲ್ಲಿ ಪರಸ್ಪರ ಹೊಡೆದಾಡುವುದು ವಿಷಾದನೀಯ. ಭಾರತ ದೇಶವನ್ನು ಇಂದು ಧರ್ಮ ಮತ್ತು ಸಂಸ್ಕೃತಿ ಕಾಪಾಡುತ್ತಿದೆ,” ಎಂದು ಅಭಿಪ್ರಾಯಪಟ್ಟರು.
ಪ್ರಸಿದ್ಧ ವಾಗ್ಮಿ ಲಾಲ್ಹುಸೇನ ಕಂದಗಲ್ಲ ಮಾತನಾಡಿ, “ಬಡವರಿಗೆ ದಾನ ಮಾಡುವುದು ನಾವು ಅವರಿಗೆ ಮಾಡುವ ಉಪಕಾರವಲ್ಲ, ಬದಲಿಗೆ ಭಗವಂತ ನಮಗೆ ನೀಡಿದ ಒಂದು ಶ್ರೇಷ್ಠ ಅವಕಾಶ. ಅಂತಹ ಅವಕಾಶವನ್ನು ಅಯೂಬ್ ಮನಿಯಾರ್ ಅವರು ಸದ್ಬಳಕೆ ಮಾಡಿಕೊಂಡು ಸಮಾಜದ ಋಣ ತೀರಿಸುತ್ತಿದ್ದಾರೆ,” ಎಂದರು.
ಕಾರ್ಯಕ್ರಮದಲ್ಲಿ ಸಿಪಿಐ ಮೊಹಮ್ಮದ ಫಸಿಯುದ್ಧಿನ್ ಅವರು ಶುಭ ಹಾರೈಸಿದರು. ಕಾರ್ಯಕ್ರಮದ ಆರಂಭದಲ್ಲಿ ಮೌಲಾನಾ ಅಫ್ತಾಬ್ ಅವರಿಂದ ಖುರಾನ್ ಪಠಣ ನಡೆಯಿತು.
ಈ ಸಂದರ್ಭದಲ್ಲಿ ಶಂಕರಗೌಡ ಹೊಸಮನಿ, ಅಹಿಲ್ಯಾದೇವಿ ಹೋಲ್ಕರ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ, ನ್ಯಾಯವಾದಿ ವಿ.ಎಸ್. ಸಾಲಿಮಠ, ಬನಶ್ರೀ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ರೂಪಸಿಂಗ್ ಲೋಣಾರಿ, ಮೌಲಾನಾ ಅಲ್ಲಾಭಕ್ಷ ಖಾಜಿ, ಟ್ರಸ್ಟ್ ಕಾರ್ಯದರ್ಶಿ ಅಫ್ತಾಬ ಮನಿಯಾರ, ನಿಂಗಣ್ಣ ಬೈಚಬಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ವಾಯ್.ಎಚ್. ವಿಜಯಕರ,ಮುಜಾಹಿದ್ ನಮಾಜಕಟ್ಟಿ ಸೇರಿದಂತೆ ಉಪಸ್ಥಿತರಿದ್ದರು.
ಮುದ್ದೇಬಿಹಾಳದ ಮನಿಯಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾವಿರಾರು ಬಡ ಕುಟುಂಬಗಳಿಗೆ ಸುಮಾರು 500-600 ರಂಜಾನ್ ಕಿಟ್ ವಿತರಿಸುವ ಮೂಲಕ ಸಮಾಜದಲ್ಲಿ ಸೌಹಾರ್ದತೆಯ ಮೆರುಗು ಹೆಚ್ಚಿಸಲಾಯಿತು.