ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವುದು ಸಾಹಸದ ಕಾರ್ಯ: ಬಿಇಒ ಧಮ್ಮೂರಮಠ ಅಭಿಮತ
ಮುದ್ದೇಬಿಹಾಳ: “ನಗರ ಪ್ರದೇಶಗಳಲ್ಲಿ ಪಾಲಕರು ಕೇಳಿದಷ್ಟು ಶುಲ್ಕ ನೀಡಲು ಸಿದ್ಧರಿರುತ್ತಾರೆ, ಅಲ್ಲಿ ಸಂಸ್ಥೆ ಬೆಳೆಸುವುದು ಸುಲಭ. ಆದರೆ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೇ ಆದ್ಯತೆ ನೀಡಿ ಸಂಸ್ಥೆ ಕಟ್ಟಿ ಬೆಳೆಸುವುದು ನಿಜಕ್ಕೂ ಒಂದು ಸಾಹಸದ ಕಾರ್ಯ,” ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ಧಮ್ಮೂರಮಠ ಹೇಳಿದರು.
ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಚೆನ್ನಬಸವ ಶ್ರೀ ಎಜ್ಯುಕೇಷನ್ ರೂರಲ್ ಕಲ್ಚರಲ್ ಸೊಸೈಟಿ ವತಿಯಿಂದ ಹಮ್ಮಿಕೊಂಡಿದ್ದ ‘ರಾಜ್ಯಮಟ್ಟದ ಚೆನ್ನಬಸವ ಶ್ರೀ ಪ್ರಶಸ್ತಿ ಪ್ರದಾನ’ ಹಾಗೂ ವಿದ್ಯಾರ್ಥಿ ವೇತನ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಾಧನೆಯ ಮೈಲುಗಲ್ಲು
ಕೆಳಮಟ್ಟದಿಂದ ಬಂದ ಮಂಜುನಾಥ ಕೊಪ್ಪ ಅವರು ಇಂದು ಹಳ್ಳಿಗಾಡಿನಲ್ಲಿ 500ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ದೊಡ್ಡ ಸಾಧನೆ. ಕಷ್ಟಪಟ್ಟರೆ ಏನನ್ನು ಸಾಧಿಸಬಹುದು ಎಂಬುದಕ್ಕೆ ಅವರೇ ನಿದರ್ಶನ ಎಂದು ಶ್ಲಾಘಿಸಿದರು.
ಪರೀಕ್ಷೆಗೆ ಹೆದರದಿರಿ: ಎಂ.ಎಂ.ಬೆಳಗಲ್
ಕಾರ್ಯಕ್ರಮ ಉದ್ಘಾಟಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ ಮಾತನಾಡಿ, “ವಿದ್ಯಾರ್ಥಿಗಳು ಪರೀಕ್ಷೆ ಕಂಡು ಭಯಪಡಬಾರದು. ಫಲಿತಾಂಶ ಬಂದಾಗ ನಿಮ್ಮ ಸಾಧನೆಯನ್ನು ಇಡೀ ರಾಜ್ಯವೇ ಕೊಂಡಾಡುವಂತೆ ಓದಬೇಕು,” ಎಂದು ಕರೆ ನೀಡಿದರು.
ಬಡವರ ಪಾಲಿನ ವರದಾನ
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಹರೀಶ ನಾಟೀಕಾರ, “ಲಕ್ಷಾಂತರ ರೂಪಾಯಿ ಶುಲ್ಕ ನೀಡಲಾಗದ ಬಡ ಪಾಲಕರಿಗೆ ಇಂತಹ ಗ್ರಾಮೀಣ ಶಾಲೆಗಳು ವರದಾನವಾಗಿವೆ. ಪಾಲಕರು ನೀಡಿದಷ್ಟೇ ಶುಲ್ಕ ಪಡೆದು ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ,” ಎಂದರು.
ಗಣ್ಯರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಪ್ರಭುಗಳು ದಿವ್ಯ ಸಾನಿಧ್ಯ ವಹಿಸಿದ್ದರು. ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ಸಂಸ್ಥೆಯ ಅಧ್ಯಕ್ಷ ಮಂಜುನಾಥ ಎಸ್.ಕೊಪ್ಪ, ಶಿಕ್ಷಕರ ಸಂಘದ ಎನ್.ಎಸ್.ತುರಡಗಿ, ಬಸನಗೌಡ ಮುದ್ನೂರ, ನಾನಾಗೌಡ ನಡುವಿನಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ರೇಖಾ ಎಂ.ಎಸ್., ಜಿ.ಎಚ್.ಗೌರೋಜಿ, ಎಚ್.ಆರ್.ಬಾಗಲಕೋಟ ಕಾರ್ಯಕ್ರಮ ನಿರ್ವಹಿಸಿದರು.
ಗಮನಸೆಳೆದ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಈ ಸಂದರ್ಭದಲ್ಲಿ ‘ಚೆನ್ನಬಸವ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪತ್ರಕರ್ತರಾದ ಗುಲಾಮಮೊಹ್ಮದ ದಫೇದಾರ, ಸಾಗರಕುಮಾರ ಉಕ್ಕಲಿ,
ಹೋರಾಟಗಾರರು: ಕುಮಾರಸ್ವಾಮಿ ಹಿರೇಮಠ, ಹರೀಶ ನಾಟೀಕಾರ, ಶೈಕ್ಷಣಿಕ ಕ್ಷೇತ್ರ: ಎಸ್.ಎಂ.ಜೋಗಿನ, ಎಸ್.ಪಿ.ಢವಳಗಿ, ರೇಷ್ಮಾ ಶೇಖ, ವೀರೇಶ ಹುಲಮನಿ, ಕಾಶೀನಾಥ ಸೂಳಿಭಾವಿ, ವಿಜಯಲಕ್ಷ್ಮಿ ನಿಡಗುಂದಿ, ಎಂ.ಕೆ.ಪೂಜಾರಿ, ಜಯಶ್ರೀ ಕರಡ್ಡಿ, ಎಸ್.ಜಿ.ನೀರಲಗಿ, ಸಂಗಣ್ಣ ಹೊಸಮನಿ, ಜ್ಯೋತಿ ಬಿರಾದಾರ, ಎಸ್.ಎಸ್.ಪಾಟೀಲ, ಬಸಮ್ಮ ಅಮಾತೆಗೌಡರ, ವಿಜಯಲಕ್ಷ್ಮಿ ಭೋವಿ, ಎಸ್.ಐ.ಪತ್ತಾರ, ವಿ.ಎಸ್.ತೆಗ್ಗಿ, ಜಿ.ಬಿ.ಬಿರಾದಾರ, ಭೀಮಪ್ಪ ಮಾದರ, ಎಂ.ಬೀ.ಪಾಟೀಲ, ಆರ್.ಎಂ.ಲಮಾಣಿ, ಬಿ.ಎ.ಉಡಚಣಕರ, ವಾಯ್.ಎಸ್.ಖಾದ್ರಿ, ಎಚ್.ಎಂ.ಮಕಾನದಾರ, ಯಮನಪ್ಪ ಬಾಗೇವಾಡಿ, ಎಂ.ಬಿ.ಗುಡಗುಂಟಿ, ನಿಂಗಪ್ಪ ದೊಡಮನಿ, ಅಬ್ದುಲರಶೀದ ಜಮಾದಾರ, ಚಿದಾನಂದ ಗುಡ್ಡದ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.