ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ:ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣಗೊಂಡಿರುವುದು ದುರಂತ-ಹಾಲಗಂಗಧಾರಮಠ
ಮುದ್ದೇಬಿಹಾಳ : ಮಕ್ಕಳಿಗೆ ಬಾಲ್ಯದಲ್ಲಿ ಗುರುಕುಲ ಮಾದರಿ ಶಿಕ್ಷಣದಿಂದ ಸಂಸ್ಕಾರ,ಸಂಸ್ಕೃತಿಯ ಅರಿವು ದೊರೆಯುತ್ತದೆ ಎಂದು ನೆರಬೆಂಚಿ ಗ್ರಾಮದ ವೇ.ಸಂಗಯ್ಯ ಹಾಲಗಂಗಾಧರಮಠ ಹೇಳಿದರು.
ಪಟ್ಟಣದ ಮಹಾಂತೇಶ ನಗರದಲ್ಲಿರುವ ವಿಶ್ವಭಾರತಿ ಪಬ್ಲಿಕ್ ಸ್ಕೂಲ್ನಲ್ಲಿ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರ ಇಂದು ವ್ಯಾಪಾರೀಕರಣಗೊಂಡಿದೆ.ಎಲ್.ಕೆ.ಜಿ.ಯುಕೆಜಿ ಮಕ್ಕಳಿಗೆ ೫೦-೬೦ ಸಾವಿರ ರೂ.ಶುಲ್ಕ ವಸೂಲಿ ಮಾಡುವ ಮೂಲಕ ಶಿಕ್ಷಣ ದುಬಾರಿಯೆನ್ನುವ ಭಾವನೆಯನ್ನು ಉಳ್ಳವರು ಪ್ರದರ್ಶನ ಮಾಡುತ್ತಿದ್ದಾರೆ.ಬಡ.ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ಕೈಗೆಟುಕಬೇಕಾದರೆ ಸಾಮಾಜಿಕ ಮನೋಭಾವ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸಾಧ್ಯವಿದೆ ಎಂದರು.
ಪತ್ರಕರ್ತ ಶಂಕರ ಈ.ಹೆಬ್ಬಾಳ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದವರ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಪರಿಣಾಮಕಾರಿಯಾಗಿ ದೊರಕಿಸಲು ಪರಿಶ್ರಮ ಪಡುತ್ತಿರುವ ಶಿಕ್ಷಣ ಪ್ರೇಮಿ ವೀರೇಶ ಗುರುಮಠ ಅವರ ನೇತೃತ್ವದಲ್ಲಿ ನಡೆದಿರುವ ಶಾಲೆಯಲ್ಲಿ ಮಕ್ಕಳು ಬಾಲ್ಯವನ್ನು ಅನುಭವಿಸುವ ಜೊತೆಗೆ ಆಟವಾಡುತ್ತ ಇಲ್ಲಿ ಕಲಿಕೆ ಆಗುತ್ತಿದೆ.ಎಲ್ಲ ಶಿಕ್ಷಣ ಸಂಸ್ಥೆಗಳ ಉದ್ದೇಶ ಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬುದಾಗಿದ್ದು ಪರಸ್ಪರ ಸ್ನೇಹಪರವಾದ ಸಂಬಂಧ ಇರಬೇಕು.ಕಾಲು ಹಿಡಿದು ಎಳೆಯುವ ಪ್ರವೃತ್ತಿ ಶಿಕ್ಷಣ ಸಂಸ್ಥೆಗಳ ಮಧ್ಯೆ ಇರಬಾರದು ಎಂದರು.
ಸಂಸ್ಥೆಯ ಕಾರ್ಯಾಧ್ಯಕ್ಷ ವೀರೇಶ ಗುರುಮಠ ಮಾತನಾಡಿ, ಹಲವಾರು ಸಂಕಷ್ಟಗಳ ಮಧ್ಯೆ ಶಾಲೆಯನ್ನು ಮುನ್ನಡೆಸಿದ್ದು ಅದಕ್ಕೆ ಸಹಕಾರಿಯಾಗಿರುವವರನ್ನು ಸ್ಮರಿಸಿದರು.ಫಕೀರೇಶ್ವರ ಡಯಗ್ನೂಸ್ಟಿಕ್ ಸೆಂಟರ್ನ ಡಾ.ಚಂದ್ರಶೇಖರ ಶಿವಯೋಗಿಮಠ, ಹುಲ್ಲೂರಿನ ನ್ಯಾಶನಲ್ ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ,ಎಂ.ಜಿ.ಎಂ.ಕೆ ಕಾಲೇಜಿನ ಉಪನ್ಯಾಸಕಿ ವಿಜಯಲಕ್ಷ್ಮಿ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಶಿವಕುಮಾರ ಬಿಜಾಪೂರ, ಡಾ.ಹಣಮಂತ ತಿಡಗುಂದಿ,ನಿವೃತ್ತ ಶಿಕ್ಷಕ ಹಣಮಂತ ವಡಗೇರಿ,ಮಲ್ಲಿಕಾರ್ಜುನ ಪೋಲೇಶಿ,ಜ್ಯೋತಿ ಮಠಪತಿ,ಮಾರ್ಗದರ್ಶಕ ಶಿವಯ್ಯ ಗುರುಮಠ, ಮುಖ್ಯಗುರುಮಾತೆ ಪುಷ್ಪಾ ಗುರುಮಠ ಇದ್ದರು.ಸಂಗಮೇಶ ಶಿವಣಗಿ ಪ್ರಾರ್ಥಿಸಿದರು.ಬಸವರಾಜ ನಾಯಕ ನಿರೂಪಿಸಿದರು. ಬಸವರಜ ಕತ್ತಿ ವಂದಿಸಿದರು.