ಕುಡಿಯುವ ನೀರಿನ ಸಮಸ್ಯೆಗೆ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ: ತಹಶೀಲ್ದಾರ್ ಕೀರ್ತಿ ಚಾಲಕ್ ಎಚ್ಚರಿಕೆ
ತಾಲ್ಲೂಕು ಮಟ್ಟದ ಕುಡಿಯುವ ನೀರಿನ ಟಾಸ್ಕ್ ಫೋರ್ಸ್’ ಸಭೆಯಲ್ಲಿ ಚರ್ಚ್.
ಮುದ್ದೇಬಿಹಾಳ: ತಾಲ್ಲೂಕಿನಲ್ಲಿ ಯಾವುದೇ ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಒಂದು ವೇಳೆ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾದರೆ ಅಂತಹ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ತಹಶೀಲ್ದಾರ್ ಕೀರ್ತಿ ಚಾಲಕ್ ಅವರು ಖಡಕ್ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಗುರುವಾರ ತಾಲ್ಲೂಕು ಮಟ್ಟದ ಕುಡಿಯುವ ನೀರಿನ ಟಾಸ್ಕ್ ಫೋರ್ಸ್’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಿರ್ಲಕ್ಷ್ಯ ವಹಿಸಿದರೆ ಶಿಸ್ತು ಕ್ರಮ :ಸಭೆಯಲ್ಲಿ ಕುಡಿಯುವ ನೀರಿನ ಇಂಜಿನಿಯರ್ ರಾಠೋಡ್ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ತಹಶೀಲ್ದಾರರು, “ಕೂಡಲೇ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು,” ಎಂದು ಎಚ್ಚರಿಸಿದರು. ಪ್ರತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು (PDO) ಮತ್ತು ಇಂಜಿನಿಯರ್ಗಳು ಸಮನ್ವಯತೆಯಿಂದ ಕೆಲಸ ಮಾಡಿ ಸಾರ್ವಜನಿಕರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಟಾಸ್ಕ್ ಫೋರ್ಸ್ ಸಭೆಯಲ್ಲಿ ಅನುದಾನದ ಕೊರತೆ ಮತ್ತು ನಿರ್ವಹಣೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಎ ಎಲ್ ರಾಠೋಡ ಮಾತನಾಡಿ, “ಬಹುಹಳ್ಳಿ ಯೋಜನೆಯ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದ ಕಾರಣ ನಿರ್ವಹಣೆಯಲ್ಲಿ ಅಡಚಣೆಯಾಗಿದೆ,” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಹಣಕಾಸಿನ ತೊಂದರೆಗಳಿದ್ದರೂ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಉಂಟಾಗದಂತೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು,” ಎಂದು ತಿಳಿಸಿದರು.
ಮುನ್ನೆಚ್ಚರಿಕೆ ಮತ್ತು ಸೂಚನೆಗಳು ಬೇಸಿಗೆ ಆರಂಭವಾಗುತ್ತಿರುವುದರಿಂದ ಜೂನ್ ತಿಂಗಳವರೆಗೆ ಯಾವುದೇ ಹಳ್ಳಿಯಲ್ಲಿ ನೀರಿನ ಹಾಹಾಕಾರ ಏಳದಂತೆ ನೋಡಿಕೊಳ್ಳಬೇಕು.
ಬಾಡಿಗೆ ಕೊಳವೆಬಾವಿ ಪಡೆಯಲು ಅನುಮತಿ ನೀಡುವ ಪ್ರಕ್ರಿಯೆ ಚುರುಕುಗೊಳಿಸಬೇಕು. ಜಾತ್ರೆ ಮತ್ತು ವಿಶೇಷ ಸಂದರ್ಭಗಳಲ್ಲಿ ಆಹಾರ ಸುರಕ್ಷತೆ ಹಾಗೂ ಕುಡಿಯುವ ನೀರಿನ ಶುದ್ಧತೆ ಕಾಪಾಡಬೇಕು. ಸಣ್ಣಪುಟ್ಟ ರಿಪೇರಿ ಕೆಲಸಗಳನ್ನು ತಕ್ಷಣವೇ ಪೂರೈಸಿ ನೀರು ಸರಬರಾಜು ಸ್ಥಗಿತಗೊಳ್ಳದಂತೆ ಗಮನಹರಿಸಬೇಕು.
ವಿವಿಧ ಗ್ರಾಮಗಳ ನೀರಿನ ಸಮಸ್ಯೆ ಚರ್ಚೆ
ಸಭೆಯಲ್ಲಿ ತಾಲ್ಲೂಕಿನಾದ್ಯಂತ ಎದುರಾಗಿರುವ ನೀರಿನ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು:
ಬಸರಕೋಡ ಯೋಜನೆ: ಬಸರಕೋಡ ಬಹುಹಳ್ಳಿ ಕುಡಿಯುವ ಯೋಜನೆಯಿಂದ ಢವಳಗಿ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿಲ್ಲ ಎಂಬ ಬಗ್ಗೆ ಪಿಡಿಒಗಳು ಸಭೆಯ ಗಮನಕ್ಕೆ ತಂದರು.
ಗಂಭೀರ ಸಮಸ್ಯೆ ಇರುವ ಗ್ರಾಮಗಳು: ಚವನಭಾವಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನೀರಿನ ತೊಂದರೆ ಇರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ರೀತಿ ಮುಂದಿನ ದಿನಗಳಲ್ಲಿ ಆಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಲಾಯಿತು.
3.5 ವರ್ಷಗಳಿಂದ ತಂಗಡಗಿ ಬಹುಹಳ್ಳಿ ಕುಡಿಯುವ ಯೋಜನೆ ನೀರಿಲ್ಲ
ರಕ್ಕಸಗಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಾದ ಬಲದಿನ್ನಿ, ಕಾರಕೂರ ಗ್ರಾಮಗಳಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ತಂಗಡಗಿ ಬಹುಹಳ್ಳಿ ಕುಡಿಯುವ ನೀರು ಸರಬರಾಜಾಗುತ್ತಿಲ್ಲ. ಬಲದಿನ್ನಿ ಹಾಗೂ ಕಾರಕೂರ ಗ್ರಾಮಗಳಿಗೆ ಕಳೆದ 3.5 ವರ್ಷಗಳಿಂದ ನೀರು ಸರಬರಾಜು ಇಲ್ಲ ಎಂದು ರಕ್ಕಸಗಿ ಪಿಡಿಒ ಮಾಲಾಶ್ರೀ ಅಮ್ಮನ್ನವರು ಸಭೆಗೆ ತಿಳಿಸಿದರು. ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸಲು ಇಂಜಿನಿಯರ್ಗಳಿಗೆ ತಾಪಂ ಇಒ ಸೂಚನೆ ನೀಡಿದರು.
ಇತರ ಗ್ರಾಮಗಳು: ಮಡಿಕೇಶ್ವರ, ತಾರನಾಳ ಗ್ರಾಮದಲ್ಲಿ ಬಾವಿ ಇದ್ದು, ಕೂಡಲೇ ಮೋಟಾರ್ ಪೈಪ್ಲೈನ್ ಕಾಮಗಾರಿ ಮಾಡಬೇಕು. ಕವಡಿಮಟ್ಟಿ ಹಾಗೂ ಸರೂರ ಗ್ರಾಮಕ್ಕೆ ಬಹುಹಳ್ಳಿ ಯೋಜನೆಯ ನೀರು ಪೂರೈಕೆಯಾಗುತ್ತಿಲ್ಲ ಎಂದು ಪಿಡಿಓ ಕೆ.ಎಚ್. ಕುಂಬಾರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತಕರಾದ ಆರ್ ಎಸ್ ಹಿರೇಗೌಡರ,ಡಾ ಸತೀಶ್ ತಿವಾರಿ,ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ಮೇಟಿ,ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕೋರಿ,ನಾಲತವಾಡ ಉಪತಹಶಿಲ್ದಾರ ಎನ್ ಬಿ ಮಾವಿನಮಟ್ಟಿ(ದೊರೆ),
ಕಂದಾಯ ನಿರೀಕ್ಷೆಕ ವೆಂಕಟೇಶ್ ಅಂಬಿಗೇರ, ಡಿ ಎಸ್ ತಳವಾರ, ಮಹಾಂತೇಶ ಮಾಗಿ,ಶಿವಶರಣ ಕುಂಬಾರ,ಹಾಗೂ ಗ್ರಾಮಾಡಳಿತಾಧಿಕಾರಿಗಳು,ಹಾಗೂ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು (PDO) ಉಪಸ್ಥಿತರಿದ್ದರು.