ಮಕ್ಕಳಿಗೆ ಕೇವಲ ಅಂಕ ಆಧಾರಿತ ಶಿಕ್ಷಣ ನೀಡದೆ, ಅವರಲ್ಲಿ ಸಾಮಾಜಿಕ ಮೌಲ್ಯ ಮತ್ತು ಸಂಸ್ಕಾರ ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ: ಶಾಂತಗೌಡ ಪಾಟೀಲ ನಡಹಳ್ಳಿ
ನ್ಯೂ ಎಕ್ಸ್ಪರ್ಟ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ: ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ.
ಮುದ್ದೇಬಿಹಾಳ: “ಶಾಲಾ ವಾರ್ಷಿಕೋತ್ಸವಗಳು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲ, ಅವು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕುವ ಅತ್ಯುತ್ತಮ ವೇದಿಕೆಗಳು” ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ (ನಡಹಳ್ಳಿ) ಅಭಿಪ್ರಾಯಪಟ್ಟರು.
ತಾಲ್ಲೂಕಿನ ಗೆದ್ದಲಮರಿ ಗ್ರಾಮದ ನ್ಯೂ ಎಕ್ಸ್ಪರ್ಟ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ವಾರ್ಷಿಕ ಸ್ನೇಹ ಸಮ್ಮೇಳನ-2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕಾರಯುತ ಶಿಕ್ಷಣದ ಅಗತ್ಯತೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಂತಗೌಡ ಪಾಟೀಲರು ಮಾತನಾಡಿ, “ಮಕ್ಕಳಿಗೆ ಕೇವಲ ಅಂಕ ಆಧಾರಿತ ಶಿಕ್ಷಣ ನೀಡದೆ, ಅವರಲ್ಲಿ ಸಾಮಾಜಿಕ ಮೌಲ್ಯ ಮತ್ತು ಸಂಸ್ಕಾರ ಬೆಳೆಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ಭಾರತದ ಶ್ರೀಮಂತ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಯಾವುದೇ ಕಾರಣಕ್ಕೂ ಖಾಸಗಿ ಶಾಲೆಗಳ ಮುಚ್ಚುವಿಕೆಗೆ ನಾವು ಅವಕಾಶ ನೀಡುವುದಿಲ್ಲ,” ಎಂದು ದೃಢವಾಗಿ ಹೇಳಿದರು.
ಬಡ ಮಕ್ಕಳ ಶಿಕ್ಷಣಕ್ಕೆ ಆಸರೆ ಕಾರ್ಯಕ್ರಮದಲ್ಲಿ ಮಾತನಾಡಿದ ಟಿ. ಡಿ ಲಮಾಣಿ ಅವರು, “ಮುತ್ತಣ್ಣ ಮತ್ತು ಕೃಷ್ಣ ಅವರು ಬಡತನದಲ್ಲಿ ಬೆಳೆದಿದ್ದರೂ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಛಲದಿಂದ ಈ ಸಂಸ್ಥೆ ಸ್ಥಾಪಿಸಿ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಮಕ್ಕಳು ಶಾಲೆಯಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಶಿಕ್ಷಕರ ಪ್ರಭಾವ ಅವರ ಮೇಲೆ ಹೆಚ್ಚಿರುತ್ತದೆ. ಪಠ್ಯದ ಜೊತೆಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡಬೇಕು,” ಎಂದರು.
ಶಿಕ್ಷಕ ಎಂ. ಎ. ತಳ್ಳಿಕೇರಿ ಮಾತನಾಡಿ, ಇಂದಿನ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಕಾಲದಲ್ಲಿ ನ್ಯೂ ಎಕ್ಸ್ಪರ್ಟ್ ಪಬ್ಲಿಕ್ ಶಾಲೆ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಶ್ರಮಿಸುತ್ತಿದೆ ಎಂದರು. ಉಪನ್ಯಾಸಕ ಮುತ್ತಣ್ಣ ಗೌಡರ ಪ್ರಸ್ತಾವಿಕವಾಗಿ ಮಾತನಾಡಿ, ಮಕ್ಕಳನ್ನು ದುಶ್ಚಟಗಳಿಂದ ದೂರವಿರಿಸಿ, ಪೋಷಕರು ಅವರಿಗೆ ಆದರ್ಶಪ್ರಾಯರಾಗಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಸುಧೀರ ಲಮಾಣಿ ಹಾಗೂ ಸತೀಶ ರಾಠೋಡ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ: ಸೈನ್ಯ ಮುತ್ತು ರಾಠೋಡ,
ಮಲ್ಲು ಅಪರಾಧಿ, ಪತ್ರಕರ್ತ ಶಿವಾನಂದ ಲಮಾಣಿ, ಸಂಸ್ಥೆಯ ಅಧ್ಯಕ್ಷ ಕೃಷ್ಣಪ್ಪ ಲಮಾಣಿ , ಕಾರ್ಯದರ್ಶಿ
ಲಾಲಸಿಂಗ ಲಮಾಣಿ ,ಬಸವರಾಜ ಲಮಾಣಿ, ಚಂದ್ರಶೇಖರ ರಾಠೋಡ, ಮಾಳಪ್ಪ ಕನ್ನೂರ, ಸಂಗಯ್ಯ ಹಿರೇಮಠ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ನಿರ್ವಹಣೆ ರವಿರಾಜ ಚವ್ಹಾಣ ಕಾರ್ಯಕ್ರಮ ನಿರೂಪಿಸಿದರು, ಏಕನಾಥ ಲಮಾಣಿ ವಂದಿಸಿದರು.
ಸಾಂಸ್ಕೃತಿಕ ವೈಭವ ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪುಟಾಣಿ ಮಕ್ಕಳು ಪ್ರದರ್ಶಿಸಿದ ಜಾನಪದ ನೃತ್ಯ ಹಾಗೂ ಸಮಕಾಲೀನ ನೃತ್ಯಗಳು ನೆರೆದಿದ್ದ ಪೋಷಕರು ಮತ್ತು ಸಾರ್ವಜನಿಕರ ಮನಸೂರೆಗೊಂಡವು.