ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಮಾರ್ಚ್ 6ರಂದು ಬೆಂಗಳೂರಿನಲ್ಲಿ ಗುತ್ತಿಗೆದಾರರ ಪ್ರತಿಭಟನೆ.
ಮುದ್ದೇಬಿಹಾಳ: ಕಳೆದ ಮೂರು ವರ್ಷಗಳಿಂದ ಬಾಕಿ ಇರುವ ರಾಜ್ಯದ ಎಲ್ಲಾ ಗುತ್ತಿಗೆದಾರರ ಬಿಲ್ ಪಾವತಿಸುವಂತೆ ಒತ್ತಾಯಿಸಿ ಮಾರ್ಚ್ 6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಒಂದು ದಿನದ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐ.ಎಂ. ಪಟ್ಟಣಶೆಟ್ಟಿ ತಿಳಿಸಿದರು.
ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಮಂಗಲ ಭವನದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು ಗುತ್ತಿಗೆದಾರರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಹೋರಾಟ ಹಕ್ಕಿಗಾಗಿ, ಸರ್ಕಾರದ ವಿರುದ್ಧವಲ್ಲ:
“ನಮ್ಮ ಈ ಹೋರಾಟ ಯಾವುದೇ ನಿರ್ದಿಷ್ಟ ಸರ್ಕಾರದ ಅಥವಾ ಪಕ್ಷದ ವಿರುದ್ಧವಲ್ಲ. ಬದಲಾಗಿ ಸಂಕಷ್ಟದಲ್ಲಿರುವ ಗುತ್ತಿಗೆದಾರರ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟವಾಗಿದೆ. ಈಗಾಗಲೇ ಗುತ್ತಿಗೆದಾರರು ಮನೆ, ಆಸ್ತಿ ಹಾಗೂ ಹೆಂಡತಿ-ಮಕ್ಕಳ ಒಡವೆಗಳನ್ನು ಅಡವಿಟ್ಟು, ಕೈಗಡ ಸಾಲ ಮಾಡಿ ಸರ್ಕಾರಿ ಕಾಮಗಾರಿಗಳನ್ನು ಪೂರೈಸಿದ್ದಾರೆ. ಸಾಲ ತೀರಿಸಲಾಗದೆ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಬಿಲ್ ಬಿಡುಗಡೆಯಾಗಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ,” ಎಂದು ಪಟ್ಟಣಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಒಗ್ಗಟ್ಟು ಮುರಿಯುವ ಷಡ್ಯಂತ್ರ:
“ನಾವು ಹೋರಾಟ ಘೋಷಿಸಿದ ಬೆನ್ನಲ್ಲೇ ಗುತ್ತಿಗೆದಾರರನ್ನು ಒಡೆದು ಹಾಕುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಮಣಿಯದೆ ಎಲ್ಲರೂ ಒಗ್ಗಟ್ಟಾಗಿ ನ್ಯಾಯಕ್ಕಾಗಿ ಕೈಜೋಡಿಸಬೇಕು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಲ್ ಬಾಕಿ ಇದೆ ಎಂದು ಈಗಿನ ಸರ್ಕಾರ ಹೇಳುತ್ತಿದೆ. ಮನೆಯ ಯಜಮಾನ ಬದಲಾದರೂ ಹಳೆಯ ಸಾಲ ತೀರಿಸುವುದು ಧರ್ಮ. ಅದರಂತೆ ಸರ್ಕಾರ ಯಾವುದಿದ್ದರೂ ಬಾಕಿ ಬಿಲ್ ಪಾವತಿಸುವುದು ಅವರ ಕರ್ತವ್ಯ,” ಎಂದು ಅವರು ಮಾರ್ಮಿಕವಾಗಿ ನುಡಿದರು.
ಏಪ್ರಿಲ್ನಿಂದ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ:
ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶಗೌಡ ಪಾಟೀಲ ಮಾತನಾಡಿ, “ವಿಜಯಪುರ ಜಿಲ್ಲೆಯಿಂದ ಸುಮಾರು 1,000 ಗುತ್ತಿಗೆದಾರರು ಬೆಂಗಳೂರಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸರ್ಕಾರ ಈ ಸಾಂಕೇತಿಕ ಪ್ರತಿಭಟನೆಗೆ ಸ್ಪಂದಿಸದಿದ್ದರೆ, ಏಪ್ರಿಲ್ನಿಂದ ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು,” ಎಂದು ಎಚ್ಚರಿಸಿದರು.
”ರಾಜ್ಯದ ಸುಮಾರು ಒಂದೂವರೆ ಲಕ್ಷ ಗುತ್ತಿಗೆದಾರರಿಗೆ ಸರ್ಕಾರದಿಂದ 38 ಸಾವಿರ ಕೋಟಿ ರೂ. ಬಿಲ್ ಬಾಕಿ ಬರಬೇಕಿದೆ. ಇದರಿಂದ ಗುತ್ತಿಗೆದಾರರು ದಿವಾಳಿಯ ಅಂಚಿಗೆ ತಲುಪಿದ್ದಾರೆ. ಕನಿಷ್ಠ ಸರ್ಕಾರ ನಮ್ಮನ್ನು ಕರೆದು ಮಾತುಕತೆಯನ್ನೂ ನಡೆಸುತ್ತಿಲ್ಲ,” ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಗುತ್ತಿಗೆದಾರರಾದ ಎ.ಬಿ. ನರಸರಡ್ಡಿ, ರಮೇಶ ಮಾವಿನಗಿಡದ, ಸದಾನಂದ ಕುಂಬಾರ, ಆರ್.ಬಿ. ಅಸ್ಕಿ, ಬಿ.ಡಿ. ಪಾಟೀಲ, ರಾಯನಗೌಡ ತಾತರಡ್ಡಿ, ರುದ್ರಗೌಡ ಅಂಗಡಗೇರಿ,ರಾಜುಗೌಡ ಕೊಂಗಿ, ಶ್ರೀಶೈಲ ಮರೋಳ, ಶ್ರೀಕಾಂತ ಪಾಟೀಲ, ಯಲ್ಲಪ್ಪ ಚಲವಾದಿ, ಬಸವರಾಜ ಇಸ್ಲಾಂಪೂರ,ಬಸವರಾಜ ಕೋಳೂರ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


















