ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಕೊಡುಗೆ ಅವಿಸ್ಮರಣೀಯ -ಸಂತೋಷ ಬಂಡೆ
ವಿಜಯಪುರ: ಕನ್ನಡದ ನಾಡು ನುಡಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟ ಆಲೂರು ವೆಂಕಟರಾಯರು ಪ್ರತಿಕೋದ್ಯಮ, ಸಾಹಿತ್ಯ, ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ. ಕರ್ನಾಟಕ ಏಕೀಕರಣದ ನೆಲೆಯಲ್ಲಿ ಅವರು ಮಾಡಿದ ಕೆಲಸ ಅವಿಸ್ಮರಣೀಯ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಬುಧವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ಆಲೂರು ವೆಂಕಟರಾಯರ ಪುಣ್ಯ ಸ್ಮರಣೆ’ಯನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಆಲೂರು ವೆಂಕಟರಾಯರು ಭಾಷೆ, ಸಾಹಿತ್ಯ, ಶಿಕ್ಷಣ, ಇತಿಹಾಸದ ಮೂಲಕ ಕನ್ನಡಿಗರನ್ನು ಒಗ್ಗೂಡಿಸಿ, 1956ರ ಕರ್ನಾಟಕ ಏಕೀಕರಣಕ್ಕೆ ಭದ್ರ ಬುನಾದಿ ಹಾಕಿದರು. ಅವರ ತ್ಯಾಗ, ಹೋರಾಟ, ದೂರದೃಷ್ಟಿಯಿಂದಾಗಿಯೇ ಇಂದು ನಾವು “ಕರ್ನಾಟಕ” ಎಂಬ ಮನೆಯಲ್ಲಿ ಒಂದಾಗಿದ್ದೇವೆ ಎಂದು ಹೇಳಿದರು.
ಶಿಕ್ಷಕ ಎಸ್ ಎಂ ಹಳ್ಳಿಕೇರಿ ಮಾತನಾಡಿ, ವಿಜಯಪುರ ದಲ್ಲಿ ಜನಿಸಿದ ಆಲೂರು ವೆಂಕಟರಾಯರು ತಮ್ಮ ಕೃತಿಗಳ ಮೂಲಕ ಕನ್ನಡಿಗರನ್ನು ಎಚ್ಚರಿಸುವ ಕಾರ್ಯ ಮಾಡಿ ಕರ್ನಾಟಕ ಏಕೀಕರಣಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಶ್ರೀಶೈಲ ರೇವತಗಾಂವ ಮಾತನಾಡಿ, ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎಂಬ ಘೋಷಣೆಯೊಂದಿಗೆ ಕರ್ನಾಟಕದ ಅಸ್ಮಿತೆಯನ್ನು ಎತ್ತಿ ಹಿಡಿದ ವೆಂಕಟರಾಯರು ಕನ್ನಡ ಭಾಷಿಕರಿಂದ ‘ಕನ್ನಡ ಜನರ ಪ್ರಧಾನ ಅರ್ಚಕ’ ಎಂದು ಕರೆಸಿಕೊಂಡಿದ್ದು, ಅವರ ಕನ್ನಡತ್ವವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಶಿಕ್ಷಕ ಸಂತೋಷ ಪವಾರ, ಗ್ರಾಮಸ್ಥರಾದ ಆನಂದ ಗಂಗನಳ್ಳಿ, ಜಟಿಂಗರಾಯ ಕಕ್ಕೇರಗೋಳ, ಸಿದ್ದು ಗಂಗನಳ್ಳಿ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.
‘ಕರ್ನಾಟಕ ಗತ ವೈಭವ’ ಕೃತಿ ಹಾಗೂ ‘ಜಯ ಕರ್ನಾಟಕ’ ಪತ್ರಿಕೆ ಮೂಲಕ ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸಿ, ಸಾಂಸ್ಕೃತಿಕ ಮತ್ತು ಭೌಗೋಳಿಕ ಏಕೀಕರಣಕ್ಕೆ ಅಡಿಪಾಯ ಹಾಕಿದ ರೂವಾರಿ ಆಲೂರು ವೆಂಕಟರಾಯರು.
ಸಂತೋಷ ಬಂಡೆ
ಶಿಕ್ಷಕ ಸಾಹಿತಿ,ನಾಗಠಾಣ.



















