ಗಡಿ ಕಾಯ್ದು ತಾಯ್ನಾಡಿಗೆ ಮರಳುತ್ತಿರುವ ನೌಕಾಪಡೆ ಯೋಧ ಸತೀಶ ನಾಯಕ ಗೆ ಇಂದು ಭವ್ಯ ಸ್ವಾಗತ
ಮುದ್ದೇಬಿಹಾಳ: ಭಾರತೀಯ ನೌಕಾಪಡೆಯಲ್ಲಿ ಸತತ 15 ವರ್ಷಗಳ ಕಾಲ ದೇಶದ ಕಡಲ ಭದ್ರತೆಗಾಗಿ ಹಗಲಿರುಳು ಸೇವೆ ಸಲ್ಲಿಸಿ ನಿವೃತ್ತರಾಗಿರುವ ತಾಲೂಕಿನ ಜಟ್ಟಗಿ ತಾಂಡಾದ ಹೆಮ್ಮೆಯ ಪುತ್ರ ಸತೀಶ ನಾಯ್ಕ ಅವರಿಗೆ ಫೆಬ್ರವರಿ 19 ರಂದು ಪಟ್ಟಣದಲ್ಲಿ ಅಭೂತಪೂರ್ವ ಸ್ವಾಗತ ಕೋರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ತಮ್ಮ ಜೀವನದ ಬಹು ಅಮೂಲ್ಯ ಸಮಯವನ್ನು ದೇಶದ ರಕ್ಷಣೆಗಾಗಿ ಮುಡಿಪಾಗಿಟ್ಟ ಯೋಧ ಸತೀಶ ನಾಯ್ಕ ಅವರು ಸ್ವಗ್ರಾಮಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ, ಮುದ್ದೇಬಿಹಾಳ ತಾಲೂಕಿನ ಜನತೆ ಹಾಗೂ ವೀರಯೋಧ ಸ್ಮಾರಕ ಸಮಿತಿಯ ವತಿಯಿಂದ ಅದ್ದೂರಿ ಮೆರವಣಿಗೆಯನ್ನು ಆಯೋಜಿಸಲಾಗಿದೆ.
ಫೆಬ್ರವರಿ 19, ಗುರುವಾರ ಸಮಯ ಮಧ್ಯಾಹ್ನ 3:00 ಗಂಟೆಗೆ ಪಟ್ಟಣದ ಮಾರುತೇಶ್ವರ ದೇವಸ್ಥಾನದಿಂದ ಮಾರ್ಗ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಸೈನಿಕ ಮೈದಾನ ತಲುಪಲಿದೆ.
ಹಳೆ ತಹಶೀಲ್ದಾರ್ ಕಚೇರಿ ಹತ್ತಿರ ದೇಶಭಕ್ತಿಯ ಜಯಘೋಷ ತೆರೆದ ವಾಹನದಲ್ಲಿ ಕರೆತರಲಾಗುವುದು.
ಮೆರವಣಿಗೆಯುದ್ದಕ್ಕೂ ದೇಶಭಕ್ತಿ ಗೀತೆಗಳು ಹಾಗೂ ಜಯಘೋಷಗಳ ಮೂಲಕ ಯೋಧನಿಗೆ ಗೌರವ ಸಲ್ಲಿಸಲಾಗುತ್ತದೆ. ಈ ಭವ್ಯ ಸಮಾರಂಭಕ್ಕೆ ಜಟ್ಟಗಿ ತಾಂಡಾದ ಜನತೆ, ಮುದ್ದೇಬಿಹಾಳದ ಮಾಜಿ ಸೈನಿಕರ ಸಂಘ, ವೀರಯೋಧ ಸ್ಮಾರಕ ಸಮಿತಿ ಮುಖಂಡರು ಹಾಗೂ ಗ್ರಾಮಸ್ಥರು ಕೈಜೋಡಿಸಿದ್ದಾರೆ.
ದೇಶ ಕಾಯುವ ಯೋಧರೇ ನಮ್ಮ ಕಣ್ಣಿಗೆ ಕಾಣುವ ದೇವರು. ಸತೀಶ ನಾಯ್ಕ ಅವರ ಮುಂದಿನ ನಿವೃತ್ತ ಜೀವನವು ಸುಖ, ಶಾಂತಿ ಮತ್ತು ಸಂತೋಷದಿಂದ ಕೂಡಿರಲಿ” ಎಂದು ತಾಲೂಕಿನ ಜನತೆ ಹಾರೈಸಿದ್ದಾರೆ.
ಈ ಸ್ವಾಗತ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಯೋಧನಿಗೆ ಗೌರವ ಸಲ್ಲಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.