ತಹಶಿಲ್ದಾರ ಕಛೇರಿ ಸಚಿವ ಶಿವಾನಂದ ಪಾಟೀಲ ಅನಿರೀಕ್ಷಿತ ಭೇಟ
ಪಾರದರ್ಶಕ ಜನಸ್ನೇಹಿ ಆಡಳಿತಕ್ಕೆ ತಾಕೀತು
ಬಸವನಬಾಗೇವಾಡಿ : ಪಟ್ಟಣದಲ್ಲಿರುವ ತಹಶಿಲ್ದಾರ ಕಛೇರಿಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಆಡಳಿತ ಯಂತ್ರಕ್ಕೆ ಶಾಕ್ ನೀಡಿದರು.
ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಬಸವನಬಾಗೇವಾಡಿ ತಾಲೂಕ ಕೇಂದ್ರದಲ್ಲಿರುವ ತಹಶಿಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ತಾಲೂಕಿನ ಜನರಿಗೆ ಸರ್ಕಾರದ ಸೇವೆ ಕಲ್ಪಿಸುವಲ್ಲಿ ಯಾವುದೇ ರೀತಿಯಲ್ಲಿ ವಿಳಂಬ ಮಾಡದೇ, ತೊಂದರೆ ನೀಡದೇ ಅಧಿಕಾರಿಗಳು, ಸಿಬ್ಬಂದಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಜೊತೆಗೆ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಸರ್ಕಾರದ ಯೋಜನೆಗಳು ಅರ್ಹರನ್ನು ತಲುಪುವಂತೆ ಅನುಷ್ಠಾನಕ್ಕೆ ತರುವಂತೆ ಕಟ್ಟೆಚ್ಚರ ನೀಡಿದರು.
ಇಡೀ ಕ್ಷೇತ್ರದಲ್ಲಿ ಯಾವುದೇ ವ್ಯಕ್ತಿ ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಛೇರಿಗೆ ಆಗಮಿಸಿದರೂ ಸಮಾಧಾನದಿಂದ ಅಹವಾಲು ಆಲಿಸಿ, ಪರಿಹಾರ ಕಂಡುಕೊಡಬೇಕು ಎಂದು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತಾಕೀತು ಮಾಡಿದರು.


















