ಅಬ್ಬಬ್ಬಾ..! ಅಕ್ಕ ಕಫೆ..! ಹೇಗಿದೆ ಗೊತ್ತಾ..? ಇದು ವಿಶೇಷ ಲೇಖನ
ವಿಜಯಪುರ : ವಿಶೇಷ ಲೇಖನ : ಸ್ವಚ್ಛ ಶನಿವಾರ ಪರಿಕಲ್ಪನೆಯ ಫಲಪ್ರದವಾಗಿ ಜಿಲ್ಲಾ ಪಂಚಾಯತಿ ಆವರಣವು ಸಂಪೂರ್ಣ ಹಸಿರುಮಯವಾಗಿ ಕಂಗೊಳಿಸುತ್ತಿದೆ. ಸ್ವಚ್ಛ ಶನಿವಾರ ಕಲ್ಪನೆಯಂತೆ ಪ್ರತಿ ತಿಂಗಳು ಮೊದಲನೇ ಶನಿವಾರ ಜಿಲ್ಲಾ,ತಾಲ್ಲೂಕು,ಗ್ರಾಮ ಪಂಚಾಯತಿ ಆವರಣ ಹಾಗೂ ವಿವಿಧ ಅನುಷ್ಠಾನ ಇಲಾಖೆಗಳಲ್ಲಿ ಸ್ವಚ್ಚತಾ ಅಭಿಯಾನ ಆಯೋಜನೆ ಮಾಡುವುದು ಈ ಕಲ್ಪನೆಯ ಉದ್ದೇಶವಾಗಿದೆ. ಆರಂಭದಲ್ಲಿ ಕೇವಲ ಸ್ವಚ್ಛತೆಯೊಂದಿಗೆ ಆರಂಭವಾದ ಈ ಅಭಿಯಾನ ಮುಂದೆ ಹಸರೀಕರಣ ಮಾಡಲು ಆರಂಭಿಸಿ ಪ್ರಸ್ತುತ ಜಿಲ್ಲಾ ಪಂಚಾಯತಿ ಆವರಣದಲ್ಲಿಯೇ 250ಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗುತ್ತಿದೆ.ಅಷ್ಟೇ ಅಲ್ಲದೇ ಆವರಣದ ತುಂಬೆಲ್ಲಾ ಹಸಿರು ಹುಲ್ಲು ಬೆಳೆಸಲಾಗಿದೆ. ಬಿಸಿಲು ನಾಡಿನ ಜಿಲ್ಲಾ ಪಂಚಾಯತಿ ಆವರಣ ಮಳೆನಾಡಿನಂತೆ ಕಂಗೊಳಿಸುತ್ತಿದೆ. ಇದರಿಂದ ಜಿಲ್ಲಾ ಪಂಚಾಯತಿಗೆ ಕಾರ್ಯ ನಿಮಿತ್ತ ಆಗಮಿಸುವ ಸಾರ್ವಜನಿಕರಿಗೆ ಹೊಸ ಚೈತನ್ಯ ದೊರೆಯುತ್ತಿದೆ.
ಜಿಲ್ಲಾ ಪಂಚಾಯತಿಗೆ ಮುಕುಟವಾದ ಶಿಶು ಪಾಲನಾ ಕೇಂದ್ರ.
ಜಿಲ್ಲಾ ಪಂಚಾಯತಿ ಆವರಣದಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಲಾಗಿದೆ. ಸುಸಜ್ಜಿತವಾದ ಕಟ್ಟಡ, ಆಟದ ವ್ಯವಸ್ಥೆ, ಮಕ್ಕಳಾಕರ್ಷಣೆಯ ಚಿತ್ರಗಳನ್ನು ಬರೆಸಿರುವುದು, ಸುತ್ತಲೂ ಹಸಿರು ಹೊದಿಕೆ, ಕೈ ತೋಟ, ಸುಸಜ್ಜಿತವಾದ ಶೌಚಾಲಯ, ಅಡುಗೆ ಕೋಣೆ ಸೇರಿ ಅತ್ಯಂತ ಸುಸಜ್ಜಿತವಾಗಿ ಶಿಶುಪಾಲನಾ ಕೇಂದ್ರ ಸಿದ್ದಪಡಿಸಲಾಗಿದ್ದು, ಇದೇ ಡಿ.22ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಲೋಕಾರ್ಪಣೆಗೊಳ್ಳಲು ಸಿದ್ಧವಾಗಿ ನಿಂತಿದೆ.
ಅಕ್ಕ ಕೆಫೆ :
ಜಿಲ್ಲಾ ಪಂಚಾಯತಿ ಆವರಣದಲ್ಲಿ ಅಕ್ಕ ಕೆಫೆ ಸಿದ್ಧವಾಗಿದೆ. ಈ ಕೆಫೆಯಲ್ಲಿ ತಮ್ಮ ಕೈರುಚಿ ತೋರಿಸಲು ಎನ್.ಆರ್.ಎನ್.ಎಮ್ ಯೋಜನೆಯ ಸ್ವ-ಸಹಾಯ ಸಂಘದ ಮಹಿಳೆಯರ ಪಡೆ ತಯಾರಾಗಿದೆ. ಇದು ಕೂಡಾ ಡಿ.22ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಲೋಕಾರ್ಪಣೆಗೊಳ್ಳಲಿದೆ.


















