ರಾಯಚೂರು : ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ೪೨೭ ನೇ ವರ್ಧಂತಿ ಉತ್ಸವ ಹಿನ್ನೆಲೆ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ವೈಭವದಿಂದ ಸಹಸ್ರಾರು ಭಕ್ತರ ಮಧ್ಯದಲ್ಲಿ ನಡೆಯಿತು.
ಮಂತ್ರಾಲಯ ಮಠದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಸಲಾಯಿತು. ರಾಯರ ಬೃಂದಾವನಕ್ಕೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಶ್ರೀ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ ನಡೆಸಲಾಯಿತು. ಅಷ್ಟಾಕ್ಷರಿ ಮತ್ತು ಗುರು ರಾಯರ ಸ್ತೋತ್ರ ಕವಚ ಪಾರಾಯಣ ಮಾಡಲಾಯಿತು. ಬೆಳಿಗ್ಗೆ ೮ ಗಂಟೆಗೆ ತಿರುಪತಿ ತಿರುಮಲ ಶ್ರೀನಿವಾಸ ದೇವರ ಶೇಷವಸ್ತ್ರ ಸಮರ್ಪಣೆ ಕಾರ್ಯ ನಡೆಸಲಾಯಿತು.
ರಾಯರ ಮೂಲ ಬೃಂದಾವನಕ್ಕೆ ವಿಶೇಷ ಶೇಷವಸ್ತ್ರ ಸಮರ್ಪಣೆ ಮಾಡಲಾಯಿತು. ಶೇಷವಸ್ತ್ರ ಸಮರ್ಪಣೆ ನಂತರ ನೂರಾರು ಜನರಿಂದ ನಾದಸಮರ್ಪಣೆ ಕಾರ್ಯಕ್ರಮ ನಿರ್ವಹಿಸಲಾಯಿತು. ಗುರು ರಾಯರ ಮೂಲ ಬೃಂದಾವನಕ್ಕೆ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ವಿಶೇಷ ಪೂಜೆ ನೆರವೇರಿಸಲಾಯಿತು. ಶ್ರೀಮಠಕ್ಕೆ ಆಗಮಿಸಿದ ಭಕ್ತರು ಲಕ್ಷಾಂತರ ರೂ. ಬೆಲೆ ಬಾಳುವ ಆಭರಣಗಳನ್ನು ಸಮರ್ಪಿಸಿದರು. ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಹಿನ್ನೆಲೆಯಲ್ಲಿ ಮಠದ ಪ್ರಾಂಗಣದಲ್ಲಿ ಚಿನ್ನದ ರಥೋತ್ಸವ ನಡೆಸಲಾಯಿತು.
ಚೆನ್ನೈನ ನಾದಹಾರ ಟ್ರಸ್ಟ್ನಿಂದ ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಸಂಗೀತ ಸೇವೆ ಸಲ್ಲಿಸುವ ತಂಡದ ೧೫೦ ಸಂಗೀತಗಾರರು ಏಕಕಾಲಕ್ಕೆ ಗಾಯನ ಮಾಡಿ, ನಾದ ಝೆಂಕಾರ ಮೊಳಗಿಸಿದರು. ಚಿನ್ನದ ರಥೋತ್ಸವದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿ ಅತ್ಯಂತ ವೈಭವದಿಂದ ನಿರ್ವಹಿಸಲಾಯಿತು. ಈ ಕಾರ್ಯಕ್ರಮಕ್ಕೆ ದೇಶದ ಮೂಲೆ ಮೂಲೆಗಳಿಂದ ಜನ ಸಾಗರ ಹರಿದು ಬಂದಿತ್ತು.