18ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಾಳೆ
ಅಫಜಲಪುರ: ಪಟ್ಟಣದ ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಮಠದ 18ನೇ ಪೀಠಾಧಿಪತಿ ಲಿಂ. ಷ. ಬ್ರ. ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರ 18ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಜುಲೈ 3ರಂದು ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಮಠದ ಕಮಿಟಿ ಮುಖಂಡರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂ. ಷ. ಬ್ರ. ಶ್ರೀ ಶಾಂತವೀರ ಮಳೇಂದ್ರ ಶಿವಾಚಾರ್ಯರು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನೇಕ ಸೇವಾ ಕಾರ್ಯಗಳನ್ನು ನಡೆಸುವ ಮೂಲಕ ಈ ಭಾಗದಲ್ಲಿ ಸೌಹಾರ್ದತೆ, ಭಾವೈಕ್ಯತೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರಿದ ಮಹನೀಯರಾಗಿದ್ದರು. ಅವರ ಪುಣ್ಯಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಲಬುರಗಿಯ ಶಾಂತಾ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ನ ಡಾ. ಸಂಜೀವಕುಮಾರ ಪಾಟೀಲ್ ಹಾಗೂ ಡಾ. ಅಂಬಿಕಾ ಪಾಟೀಲ್ ಅವರ ನುರಿತ ವೈದ್ಯಕೀಯ ತಂಡದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ನೇತ್ರ ತಪಾಸಣೆ, ಮೂಲವ್ಯಾಧಿ, ಹೊಟ್ಟೆ ನೋವು ಸಂಬಂಧಿತ ಕಾಯಿಲೆಗಳು, ಕೀಲು ನೋವು ಹಾಗೂ ಸಂಧಿವಾತ, ಹೃದ್ರೋಗ, ಕಿಡ್ನಿ, ಚರ್ಮರೋಗ, ಕಿವಿ–ಮೂಗು–ಗಂಟಲು (ENT) ತಪಾಸಣೆ, ಮಕ್ಕಳ ಕಾಯಿಲೆಗಳ ತಪಾಸಣೆ ಸೇರಿದಂತೆ ವಿವಿಧ ಆರೋಗ್ಯ ಸೇವೆಗಳು ಉಚಿತವಾಗಿ ಲಭ್ಯವಿರಲಿವೆ.
ಸಾರ್ವಜನಿಕರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮಠದ ಕಮಿಟಿ ಮುಖಂಡರು ಮನವಿ ಮಾಡಿದ್ದಾರೆ.
.