ಸಮಾಜ ಕಾರ್ಯ ಶಿಬಿರ ಯಶಸ್ವಿ| ಸಮಾರೋಪ
ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಅರಿಯಲು ಸಮಾಜ ಕಾರ್ಯ ಶಿಬಿರ ಅನುಕೂಲ
ಅಫಜಲಪುರ: ತಾಲೂಕಿನ ದೇವಲ ಗಾಣಗಾಪೂರ ಗ್ರಾಮದಲ್ಲಿ ನಾರ್ಥ್ ಕರ್ನಾಟಕ ಡೆಕ್ಕನ್ ಫೌಂಡೇಶನ್, ಪಾರಸ್ ಸಮಾಜ ಕಾರ್ಯ ಮಹಾವಿದ್ಯಾಲಯ ಕಲಬುರಗಿ ಹಾಗೂ ಮಹಾತ್ಮಾ ಗಾಂಧಿ ಸಮಾಜ ಕಾರ್ಯ ಮಹಾವಿದ್ಯಾಲಯ ಅಫಜಲಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ “ಸಮಾಜ ಕಾರ್ಯ ಶಿಬಿರ”ದ ಸಮಾರೋಪ ಸಮಾರಂಭ ರವಿವಾರ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ನಾರ್ಥ್ ಕರ್ನಾಟಕ ಡೆಕ್ಕನ್ ಫೌಂಡೇಶನ್ ಆಡಳಿತ ಅಧಿಕಾರಿಯಾದ ಹಣಮಂತ .ಟಿ. ಬಿ ಮಾತನಾಡಿ, ಇಂದಿನ ಯುವಜನತೆ ಕೇವಲ ಶಿಕ್ಷಣಕ್ಕೆ ಸೀಮಿತವಾಗದೆ ಸಮಾಜದ ಸಮಸ್ಯೆಗಳ ಅರಿವು ಹೊಂದಬೇಕು. ಸಮಾಜ ಕಾರ್ಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಉತ್ತಮ ವೇದಿಕೆಯಾಗಿವೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಹತ್ತಿರದಿಂದ ಅರಿತು ಅವರಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳುವುದು ಸಮಾಜ ಕಾರ್ಯದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನೂತನ ವಿದ್ಯಾಲಯದ ಉಪನ್ಯಾಸಕರಾದ ಗುರುಲಿಂಗಯ್ಯ ಬಿ. ಸ್ವಾಮಿ ಮಾತನಾಡಿ, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳ ಅರಿವು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಅಗತ್ಯವಾಗಿದೆ. ಸಮಾಜ ಸೇವೆಯ ಮೂಲಕ ವ್ಯಕ್ತಿಯ ವ್ಯಕ್ತಿತ್ವ ವಿಕಾಸವಾಗುತ್ತದೆ. ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ಜೀವನದ ನೈಜ ಅನುಭವಗಳನ್ನು ನೀಡುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಚಿಂತನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದು ತಿಳಿಸಿದರು.
ಪತ್ರಕರ್ತ ಚೆನ್ನಣ್ಣ ಹಿಂಚಗೇರಿ ಮಾತನಾಡಿ, ಸಮಾಜಮುಖಿ ಚಟುವಟಿಕೆಗಳಲ್ಲಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಗೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಶಿಬಿರಾರ್ಥಿ ಸಿದ್ದರಾಮ ಶಿವಣಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಕಾರ್ಯ ಶಿಬಿರವು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಅನುಭವ ಹಾಗೂ ಸಾಮಾಜಿಕ ಅರಿವು ಮೂಡಿಸಿದೆ. ಶಿಬಿರದ ಅವಧಿಯಲ್ಲಿ ಸ್ವಚ್ಛತಾ ಕಾರ್ಯ, ಜಾಗೃತಿ ಕಾರ್ಯಕ್ರಮಗಳು ಮತ್ತು ಗ್ರಾಮಸ್ಥರೊಂದಿಗೆ ಸಂವಾದ ನಡೆಸುವ ಮೂಲಕ ಸಮಾಜದ ನೈಜ ಸ್ಥಿತಿಗತಿಗಳನ್ನು ಅರಿಯಲು ಅವಕಾಶ ದೊರಕಿತು. ಸಮಾಜ ಸೇವೆಯೇ ನಿಜವಾದ ಮಾನವೀಯತೆ ಎಂಬ ಅರಿವು ಈ ಶಿಬಿರದಿಂದ ಮೂಡಿದೆ ಎಂದು ಹೇಳಿದರು.
ಈ ಸಮಾಜ ಕಾರ್ಯ ಶಿಬಿರದಲ್ಲಿ ಎಂ.ಎಸ್.ಡಬ್ಲು ವಿದ್ಯಾರ್ಥಿಗಳು ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಗ್ರಾಮ ಸ್ವಚ್ಛತಾ ಕಾರ್ಯ, ಜನರಲ್ಲಿ ಜಾಗೃತಿ ಮೂಡಿಸುವ ಕಿರು ನಾಟಕಗಳು, ಭಾಷಣ ಸ್ಪರ್ಧೆಗಳು, ವ್ಯಾಯಾಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಬಿರಾರ್ಥಿಗಳು ಸ್ವತಃ ವೇದಿಕೆ ನಿರ್ಮಾಣ ಮಾಡುವ ಮೂಲಕ ಸಂಘಟನಾ ಕೌಶಲ್ಯವನ್ನು ಪ್ರದರ್ಶಿಸಿದರು. ಅಲ್ಲದೇ ಶರಣರು, ಸಂತರು, ಮಹಾನ್ ಪುರುಷರು ಹಾಗೂ ಹೋರಾಟಗಾರರ ಜೀವನ ಮತ್ತು ಆದರ್ಶಗಳ ಕುರಿತು ವಿಷಯ ಮಂಡನೆ ನಡೆಸಲಾಯಿತು. ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ, ರೈತರ ಆತ್ಮಹತ್ಯೆ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ *ಪಾರಸ್ ಎಂ.ಎಸ್.ಡಬ್ಲು ಕಾಲೇಜಿನ ಪ್ರಾಂಶುಪಾಲರಾದ ಸುಖದೇವ ಕಟ್ಟಿಮನಿ*, ಹಾಗೂ ಸಮಾಜ ಕಾರ್ಯ ಶಿಬಿರದ ಸಹ ನಿರ್ದೇಶಕರಾದ ಬಸೀರಾ ಗೋಟ್ಯಾಳ, ಮತ್ತು ಮೈನಾಜ್ ಬೇಗಂ ಹಾಗೂ ಶಿಬಿರಾರ್ಥಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣೆಯನ್ನು ಶಿಬಿರಾರ್ಥಿಗಳಾದ ಮಲ್ಲಿಕಾರ್ಜುನ, ನಾಗರಾಜ,ಅಮರ್ ಮಾನೆ, ಅಪರಂಜಿ,ಜೈ ಭೀಮ ಕಾರ್ಯಕ್ರಮ ನಿರ್ವಹಣೆ ಮಾಡಿದರು.,ದಶರಥ,ಲಕ್ಷ್ಮೀ,ಪೂಜಾ ಸಮಾಜ ಕಾರ್ಯ ಗೀತೆ ಹಾಡಿದರು , ಪ್ರೇಮಾ,ದೀಪಿಕಾ, ಚಂದ್ರಕಲಾ ಸಂಗಡಿಗರು ಸ್ವಾಗತ ಗೀತೆಯನ್ನು ಹಾಡಿದರು.


















