ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಬೆಳೆಸಿಕೊಳ್ಳಬೇಕು: ಡಾ. ಸಂಗಣ್ಣ ಸಿಂಗೆ
ಅಫಜಲಪುರ: ವಿದ್ಯಾರ್ಥಿ ಜೀವನವನ್ನು ರೂಪಿಸುವಲ್ಲಿ ಪುಸ್ತಕಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮೌಲಿಕ ಕೃತಿಗಳ ಓದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಮಾನವೀಯ ಮೌಲ್ಯಗಳು ಮತ್ತು ವಿಮರ್ಶಾತ್ಮಕ ಮನೋಭಾವವನ್ನು ಬೆಳೆಸುತ್ತದೆ ಎಂದು ಚಿಂತಕ ಡಾ. ಸಂಗಣ್ಣ ಸಿಂಗೆ ಹೇಳಿದರು.
ಪಟ್ಟಣದ ಮದರ್ ತೆರೆಸಾ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ “ದೇಗುಲಗಳ ಧರ್ಮ ಹಾಗೂ ಧರ್ಮದ ದೇಗುಲಗಳು” ಪುಸ್ತಕ ಕುರಿತು ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖ್ಯಾತ ಭಾಷಾಂತರಕಾರ ಡಾ. ಸೂರ್ಯಕಾಂತ ಸುಜ್ಯಾತ್ ಮಾತನಾಡಿ, ಯಾವುದೇ ಭಾಷೆಯ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ಪರಿಚಯವಾಗಬೇಕಾದರೆ ಭಾಷಾಂತರ ಅತ್ಯಗತ್ಯ. ಭಾಷಾಂತರಕಾರನಿಗೆ ಸ್ವಭಾಷೆ ಹಾಗೂ ಮೂಲ ಕೃತಿಯ ಭಾಷೆಯ ಬಗ್ಗೆ ಸಮರ್ಪಕ ಜ್ಞಾನವಿದ್ದಾಗ ಮಾತ್ರ ಕೃತಿಯ ಮೂಲ ಆಶಯ ಮತ್ತು ಮೌಲ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪ್ರಬೋಧನಕರ ಠಾಕ್ರೆ ಅವರ ಮರಾಠಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಉದ್ದೇಶ ಸಮಾಜ ಜಾಗೃತಿಯೇ ಆಗಿದ್ದು, ವಿದ್ಯಾರ್ಥಿಗಳು ಅದರ ಮೂಲ ಆಶಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿರೇಂದ್ರ ಪಾಟೀಲ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಕೆ. ನಾರಾಯಣ ಮಾತನಾಡಿ, ದೇಗುಲಗಳಿಗೆ ಅನ್ನ ಹಾಕುವುದಕ್ಕಿಂತ ಹಸಿದವರಿಗೆ ಅನ್ನ ನೀಡುವುದೇ ನಿಜವಾದ ದೈವತ್ವ. ಪ್ರತಿಯೊಬ್ಬರೂ ಮಾನವೀಯತೆ ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಬದುಕಬೇಕು ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕ ನಾಮದೇವ ಕಡಕೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತರಾಗದೆ ಸಾಹಿತ್ಯ ಲೋಕದ ಮಹತ್ವವನ್ನು ಅರಿತುಕೊಳ್ಳಬೇಕು. ಇಂತಹ ಸಂವಾದಗಳು ವಿದ್ಯಾರ್ಥಿಗಳ ಜ್ಞಾನವನ್ನು ವಿಸ್ತರಿಸುತ್ತವೆ ಎಂದರು.
ಸಾಹಿತಿ ಡಿ.ಎಂ. ನದಾಫ ಅವರು ಪುಸ್ತಕ ಕುರಿತು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದರ್ ತೆರೆಸಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಲೀಂ ಶೇಖ ವಹಿಸಿದ್ದರು. ಪಂಕಜ ನಾಯೋಡಿ ಸ್ವಾಗತಿಸಿದರು. ಶಿವಲೀಲಾ ಪಾಟೀಲ ನಿರೂಪಿಸಿದರು.
ಸುಮೀತ್ ಶಿಂಧೆ ವಂದಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಶಿವಾನಂದ ಮುಗಳಿ, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

















