ಮತದಾನ ಮಾಡಿ, ಪ್ರಜಾಪ್ರಭುತ್ವ ಮೌಲ್ಯ ಗಟ್ಟಿಗೊಳಿಸಿ
– ಬಸವರಾಜ ಬಬಲಾದ
ಇಂಡಿ: ಯುವಜನತೆ ಚುನಾವಣೆಯಲ್ಲಿ ಮತದಾನ ಮಾಡುವ ಮತ್ತು ಇತರರಿಗೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕನ್ನು ಸದುಪಯೋಗ ಪಡಿಸಿಕೊಂಡು ಮತದಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಹಿರೇರೂಗಿ ಪಿಡಿಓ ಬಸವರಾಜ ಬಬಲಾದ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್,ಯುಬಿಎಸ್ ಶಾಲೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ವಿಜಯಪುರ, ಜಿಲ್ಲಾ ಸ್ವೀಪ್ ಸಮಿತಿ ವಿಜಯಪುರ, ತಾಲೂಕ ಆಡಳಿತ, ತಾಲೂಕ ಪಂಚಾಯಿತಿ ಇಂಡಿ, ತಾಲೂಕ ಸ್ವೀಪ್ ಸಮಿತಿ ಇಂಡಿ ಹಾಗೂ ಗ್ರಾಮ ಪಂಚಾಯಿತಿ ಹಿರೇರೂಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ 13 ನೇ ರಾಷ್ಟ್ರೀಯ ಮತದಾರರ ದಿನವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಜಾಪ್ರಭುತ್ವದ ಸಕ್ರಿಯತೆಯಲ್ಲಿ ಯುವಕರು,ರೈತರು ವಿದ್ಯಾರ್ಥಿಗಳು, ಮಹಿಳೆಯರು, ಕೂಲಿಕಾರ್ಮಿಕರು,
ಸ್ವಸಹಾಯ ಗುಂಪುಗಳು ಮತ್ತು ಸಮಾಜದ ಎಲ್ಲ ವರ್ಗಗಳ ಜನರು ಭಾಗಿಯಾಗಬೇಕು ಎಂದು ಹೇಳಿದರು.
ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರತಿಯೊಬ್ಬ ಪ್ರಜೆಗೂ ಮತದಾನದ ಮೂಲಭೂತ ಹಕ್ಕಿದೆ. ಯುವ ಜನರು ದೇಶದ ಬೆಲೆ ಕಟ್ಟಲಾಗದ ಸಂಪತ್ತು. ಹೊಸ ಮತದಾರರನ್ನು ಉತ್ತೇಜಿಸಿ, ಮತದಾರರ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಪ್ರತಿಯೊಬ್ಬರು ಮತದ ಹಕ್ಕನ್ನು ಚಲಾಯಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿಯನ್ನು ಶಿಕ್ಷಕ ಎಸ್ ಆರ್ ಚಾಳೇಕರ ಬೋಧಿಸಿದರು.ಯುವ ಮುಖಂಡ ಸಂತೋಷ ಕೋಟಗೊಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು,
ಸಿಬ್ಬಂದಿ ವರ್ಗ ಮತ್ತು ಮುಖ್ಯ ಶಿಕ್ಷಕರಾದ ವಿ ವೈ ಪತ್ತಾರ, ಎ ಎಂ ಬೆದ್ರೇಕರ ಹಾಗೂ ಶಿಕ್ಷಕರಾದ ಎಸ್ ಎಂ ಪಂಚಮುಖಿ, ಎಸ್ ಡಿ ಬಿರಾದಾರ, ಎಸ್ ಬಿ ಕುಲಕರ್ಣಿ, ಜೆ ಎಂ ಪತಂಗಿ, ಸಾವಿತ್ರಿ ಸಂಗಮದ, ಎನ್ ಬಿ ಚೌಧರಿ, ಜೆ ಸಿ ಗುಣಕಿ, ಎಸ್ ಎನ್ ಡಂಗಿ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ, ಎಫ್ ಎ ಹೊರ್ತಿ,ಎಸ್ ವ್ಹಿ ಬೆನೂರ ಸೇರಿದಂತೆ ಪಾಲಕರು,
ಮಕ್ಕಳು ಪಾಲ್ಗೊಂಡಿದ್ದರು.