ತಾಯಿ ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ
ಇಂಡಿ : ಜೀವನದಲ್ಲಿ ನಾವು ಎಲ್ಲರ ಋಣ ತೀರಿಸಲು ಸಾಧ್ಯವಿದೆ. ಗುರು ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ, ಆದರೆ ಶ್ರೀ ಸಿದ್ದೇಶ್ವರ ಶ್ರೀಗಳು ಕೇವಲ ಗುರುವಲ್ಲ ಜತೆಗೆ ಪ್ರತಿಯೊಬ್ಬರಿಗೂ ತಾಯಿಯ ಮಾತೃವಾತ್ಸಲ್ಯ ತೋರಿದ ಮಹಾನ ಸಂತ ಎಂದು ಬೀದರ ಭಾಲ್ಕಿ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು ಹೇಳಿದರು.
ತಾಲೂಕಿನ ಅಥರ್ಗಾ ಗ್ರಾಮದ ಗುರುದೇವಾಶ್ರಮದಲ್ಲಿ ಜ್ಞಾನಯೋಗಿ ಪರಮಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಗುರುವಂದನಾ ಮತ್ತು ಮಾತೃ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆನ್ಮ ನೀಡಿದ ತಾಯಿ, ಭೂ ತಾಯಿ, ನಾಡು ತಾಯಿ, ನುಡಿ ತಾಯಿ, ಜಲ ತಾಯಿ, ನಿಸರ್ಗ ತಾಯಿ ಹೀಗೆ ತಾಯಿಯನ್ನು ಕಾಣುತ್ತೇವೆ ಎಂದು ತಮ್ಮ ಪ್ರವಚನದಲ್ಲಿ ಹೇಳುತ್ತಿದ್ದ ಶ್ರೀಗಳು ಸ್ವಾಮಿ ವಿವೇಕಾನಂದ, ಶಿವಾಜಿ, ಭಗತಸಿಂಗ ಮೊದಲಾದವರಿಗೆ ತಾಯಿಯೇ ಪ್ರೇರಣೆಯಾಗಿದ್ದರು. ಹೀಗಾಗಿ ನಾವು ತಾಯಿಯ ಋಣ ತೀರಿಸಲು ಸಾದ್ಯವಿಲ್ಲ ಎಂದು ಶ್ರೀಗಳು ಹೇಳುತ್ತಿದ್ದುದು ಅಷ್ಟೇ ನೈಜವಿದೆ ಎಂದರು.
ಇಳಕಲ್ಲ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠದ ಗುರು ಮಹಾಂತ ಶ್ರೀಗಳು ಮಾತನಾಡಿ ಸಿದ್ದೇಶ್ವರ ಶ್ರೀಗಳು ಪ್ರವಚನದಿಂದ ಸನ್ಮಾರ್ಗ ತೋರಿದ ಮಹಾನ್ ಸಂತ.ಅವರ ಪ್ರವಚನದಲ್ಲಿ ಮಹಿಳೆಗೆ ಗೌರವ ನೀಡುವ ಸಂಸ್ಕಾರ ಸಂಸ್ಕೃತಿ ಬೆಳೆಸಿದರು. ಕನ್ನಡ ಇಂಗ್ಲೀಷ ಮರಾಠಿಯಲ್ಲಿ ಪ್ರವಚನ ನೀಡಿ ಪ್ರವಚನದ ಮೂಲಕ ಬದುಕಿಗೆ ಸನ್ಮಾರ್ಗ ಬೆಳಕು ತೋರಿದ ಮಹಾನ ಸಂತ ಎಂದರು.
ಗುರುದೇವಾಶ್ರಮ ಅಥರ್ಗಾದ ಈಶ ಪ್ರಸಾದ ಶ್ರೀಗಳು, ವಿರಕ್ತಿಮಠದ ಮುರಗೇಂದ್ರ ಶ್ರೀಗಳು, ಖ್ಯಾತ ಚಿಕ್ಕ ಮಕ್ಕಳ ಹೃದ್ರೋಗ ತಜ್ಞೆ ಡಾ|| ವಿಜಯಲಕ್ಷಿö್ಮÃ ಬಾಳೇಕುಂದ್ರಿ, ಉಡುಪಿಯ ಖ್ಯಾತ ಉಪನ್ಯಾಸಕಿ ಅಕ್ಷಯಾ ಗೋಖಲೆ, ಜಂಟಿ ಆಯುಕ್ತರು ಹುಬ್ಬಳ್ಳಿ ಆದಾಯ ತೆರಿಗೆ ಇಲಾಖೆಯ ರವೀಂದ್ರ ಹತ್ತಳ್ಳಿ, ಸಂತ ಸಾಯಿ ಆಂಗ್ಲ ಮಾಧ್ಯಮ ಶಾಲೆ ಪುಣೆಯ ಶಿವಲಿಂಗ ಢವಳೇಶ್ವರ, ಸೋಲಾಪುರದ ಅಜಯ ಜಾಧವ ಮಾತನಾಡಿದರು.
ಕಾರ್ಯಕ್ರದಲ್ಲಿ ಗಣಪತಿ ಬಾಣಿಕೋಲ,ಬಸವರಾಜ ಹೊನ್ನಾಳಿ,ರೇವಣಸಿದ್ದ ಅಂಕಲಗಿ, ಮಲಕಣ್ಣ ಬೊಳೆಗಾಂವ ಮತ್ತಿತರಿದ್ದರು.
ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ಗುರುವಂದನಾ ಮತ್ತು ಮಾತೃ ಶಕ್ತಿ ಸಂಗಮ ಕಾರ್ಯಕ್ರಮದಲ್ಲಿ ಬಸವಲಿಂಗ ಶ್ರೀಗಳು ಮಾತನಾಡಿದರು