ತಹಸಿಲ್ದಾರ್ ಕಚೇರಿ ಮುಂದುಗಡೆ ಕಪ್ಪು ಹಲಗೆ ಇಟ್ಟು ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಕಳೆದ ಒಂದುವರೆ ತಿಂಗಳಿನಿಂದ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೆ, ಪಾಠ ಪ್ರವಚನಗಳು ನಡೆಯದೆ ಇರುವುದನ್ನು ಪ್ರತಿಭಟಿಸಿ ಸ್ಥಳೀಯ ಎರಡು ಸರಕಾರಿ ಪದವಿ ಮಹಾ ವಿದ್ಯಾಲಯಗಳ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸಿಲ್ದಾರ್ ಕಚೇರಿ ಮುಂದುಗಡೆ ಕಪ್ಪು ಹಲಗೆ ಇಟ್ಟು ಪಾಠವನ್ನು ಮಾಡುವ ಮೂಲಕ ತಮಗೆ ಆಗುತ್ತಿರುವ ತೊಂದರೆಯನ್ನು ವ್ಯಕ್ತಪಡಿಸಿದರು.
ರಾಜ್ಯದ ಸರಕಾರಿ ಪದವಿ ಮಹಾ ವಿದ್ಯಾಲಯಗಳಲ್ಲಿ ಅಗಸ್ಟ್ ತಿಂಗಳನಿಂದ ಸರ್ಕಾರ ರಾಜ್ಯದ ಎಲ್ಲಾ ಅತಿಥಿ ಮತ್ತೊಮ್ಮೆ ಹೊಸದಾಗಿ ಕೌನ್ಸಿಲಿಂಗ್ ನಡೆಸಲು ಮುಂದಾಗಿರುವುದನ್ನು ಖಂಡಿಸಿದ ವಿದ್ಯಾರ್ಥಿ ಮುಖಂಡ ಶಿವನಗೌಡ ಬಿರಾದಾರ, ರಾಜ್ಯ ಸರ್ಕಾರ ಶೇ 70 ಇರುವ ಅತಿಥಿ ಉಪನ್ಯಾಸಕರನ್ನು ಸೇವಾ ಭದ್ರತೆ ನೀಡದೆ, ಇಲ್ಲಿಯವರೆಗೆ ಕೆಲಸ ಮಾಡಿಸಿಕೊಂಡು ಅವರ ಸೇವೆಯನ್ನು ಕಡೆಗಣಿಸುತ್ತಿದೆ. ಎಲ್ಲಾ ಸರ್ಕಾರಿ ಕಾಲೇಜುಗಳ ಅಧಾರಸ್ತಂಭ ಆಗಿದ್ದ ಅವರು ಕಡಿಮೆ ವೇತನ ಪಡೆದು ಖಾಯಂ ನೌಕರರಂತೆ ಕೆಲಸ ಮಾಡುತ್ತಿದ್ದರು. ಹಲವಾರು ವರ್ಷ ದುಡಿದವರಿಗೆ ಸೇವಾ ಭದ್ರತೆ ಕೊಡದೆ ಇರುವುದು ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿದೆ. ಈಗ ವರ್ಗಗಳು ನಡೆಯದೇ ಇರುವುದರಿಂದ ತಮ್ಮ ಪಾಠ ಪ್ರವಚನಕ್ಕೆ ತೊಂದರೆಯಾಗಿದ್ದು ಪರೀಕ್ಷೆಗಳು ಬಂದರು ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾತನಾಡಿದರು.
ವಿದ್ಯಾರ್ಥಿಗಳು ಪದವಿ ಕಾಲೇಜಿನಿಂದ ಬಸವೇಶ್ವರ ಸರ್ಕಲ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿಯ ಆಡಳಿತ ಸೌಧದ ಮುಂದೆ ಆಗಮಿಸಿ, ಕಪ್ಪು ಹಲಗೆ ಇಟ್ಟು ಕುವೆಂಪು ಅವರ ಕುರಿತು ಅಣಕು ಪಾಠವನ್ನು ಮಾಡಿದರು. ಶೀಘ್ರ ನೇಮಕ ಮಾಡಬೇಕು ಎಂದು ಘೋಷಣೆ ಕೂಗಿ. ಈ ಮೂಲಕ ತಮಗೆ ಆಗುತ್ತಿರುವ ತೊಂದರೆಯನ್ನು ವ್ಯಕ್ತಪಡಿಸಿದರು. ನಗರ ಕಾರ್ಯದರ್ಶಿ ಮಲ್ಲಮ್ಮ ಪಾಟೀಲ್ ಮುಖಂಡರಾದ ಓಂಕಾರ್ ಪವಾರ,ರಮೇಶ್ ಹೂಗಾರ, ರೇವಣಸಿದ್ದ ಹರಿಂದ್ರಾಳ ಸೇರಿದಂತೆ ವಸತಿ ಪದವಿ ಕಾಲೇಜು ಹಾಗೂ ಸಾಮಾನ್ಯ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎಬಿವಿಪಿ ಧ್ವಜವನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತಾಲೂಕು ದಂಡಾಧಿಕಾರಿ ಕೀರ್ತಿ ಚಾಲಕ್ ಮನವಿ ಸ್ವೀಕರಿಸಿದರು, ಎಎಸ್ಐ ಅಸ್ಕಿ ಮತ್ತು ಮನ್ನಾಬಾಯಿ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.