ಕತ್ರಿಮಲೆ ಪವಾಡ ಪುಣ್ಯಕ್ಷೇತ್ರದಲ್ಲಿ ನಾಗಮಲೆ ಗ್ರೂಪ್ ನ ವತಿಯಿಂದ ವಿಶೇಷ ಪೂಜೆ ಹಾಗೂಪರಸೇವೆ:
ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ
ಹನೂರು:ಕರ್ನಾಟಕದ ಗಡಿ ಅಂಚಿಗೆ ಹೊಂದಿಕೊಂಡಿರುವ ತಮಿಳುನಾಡಿನ ಸೇಲಂ ಜಿಲ್ಲೆಯ ಗೋವಿಂದಪಾಡಿ ಗ್ರಾಮದ ಮಂಗಮ್ಮನ ಕೊಯ್ಲು ಗ್ರಾಮದಲ್ಲಿ, ಶ್ರೀ ಮಹಾಲಕ್ಷ್ಮೀ ಸ್ವರೂಪಿಣಿಯಾಗಿ ನೆಲೆಗೊಂಡಿರುವ ಶ್ರೀ ಮಂಗಮ್ಮ ತಾಯಿಯ ಸನ್ನಿಧಿ ಹಾಗೂ ಶ್ರೀ ಮಹದೇಶ್ವರ ಸ್ವಾಮಿಯವರ 77 ಮಲೆಗಳಲ್ಲಿ ಒಂದಾಗಿರುವ ಕತ್ರಿಮಲೆ ಪವಾಡ ಪುಣ್ಯಕ್ಷೇತ್ರದಲ್ಲಿ ನಾಗಮಲೆ ಗ್ರೂಪ್ ನ ವತಿಯಿಂದ ವಿಶೇಷ ಪೂಜೆ, ಪರಸೇವೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಶ್ರೀ ಮಲೆ ಮಹದೇಶ್ವರರ 77 ಮಲೆಗಳ ತಪೋಭೂಮಿಗಳಿಗೊಳಗೊಂಡಂತೆ ಶ್ರೀ ಕ್ಷೇತ್ರ ಕತ್ರಿ ಮಲೆಯು ಬಹಳ ವಿಶಿಷ್ಠತೆಯನ್ನು ಪಡೆದಿದೆ.ಇದೇ ಸಂದರ್ಭದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿಯವರ ಎಣ್ಣೆ ಮಜ್ಜನ ಸೇವಾಕರ್ತರಾದ ಶೆಟ್ಟಿ ಸರಗೂರು ಮೂಗಪ್ಪ ಹಾಗೂ ರಾಮವ್ವ ಮಠದ ಶ್ರೀ ಸಿದ್ದಪ್ಪ ಸ್ವಾಮಿಯವರು ಸಾನಿಧ್ಯವನ್ನು ವಹಿಸಿ, ಸ್ವತಃ ಶ್ರೀ ಮಹದೇಶ್ವರ ಸ್ವಾಮಿಯವರು ಪಾದಸ್ಪರ್ಶ ಮಾಡಿದ ಗುರುತಿಗೆ ಈ ಸ್ಥಳದಲ್ಲಿ ಪಂಚಾಮೃತ ಅಭಿಷೇಕ, ಅಷ್ಟೋತ್ತರ ಮತ್ತು ಮಹಾಮಂಗಳಾರತಿ ಮಾಡಿ ಎಲ್ಲರಿಗೂ ಸ್ವಾಮಿಯ ಪ್ರಸಾದ ವಿತರಣೆ ಮಾಡಿದರು, ಈ ಕಾರ್ಯಕ್ರಮ ನಾಗಮಲೆ ಗ್ರೂಪ್ ನ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು, ಮಂಗಮ್ಮನ ಪೋಡಿನಲ್ಲಿ ವಾಸವಾಗಿರುವ ಹೆಂಗಸರಿಗೆ ಸೀರೆ ವಿತರಣೆ ಮತ್ತು ಅಲ್ಲಿನ ಶಾಲಾ ಮಕ್ಕಳಿಗೆ ಬ್ಯಾಗ್ ಹಾಗೂ ನೋಟ್ ಬುಕ್ ಮತ್ತು ಜಾಮಿಟ್ರಿ ಬಾಕ್ಸ್ ವಿತರಿಸುವ ಧರ್ಮಕಾರ್ಯಕ್ಕೆ ಚಾಲನೆ ನೀಡಿದರು.
ಎರಡು ದಿನಗಳ ಕಾಲ ನಡೆದ ಈ ಧರ್ಮಕಾರ್ಯದಲ್ಲಿ ಬೆಂಗಳೂರು,ಮೈಸೂರು ಹಾಗೂ ಚಾಮರಾಜನಗರ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ್ದ ಮಹದೇಶ್ವರ ಸ್ವಾಮಿಯ ಭಕ್ತಾದಿಗಳು, ಸ್ವಾಮಿಯ ಸೇವೆಯನ್ನು ಸಾಮೂಹಿಕವಾಗಿ ಸೇರಿ ಯಶಸ್ವಿಯಾಗಿ ನೆರವೇರಿಸಿದರು.ಹಾಗೂ ಅಮಾವಾಸ್ಯೆ ಅಂಗವಾಗಿ ವಿಶೇಷ ಪ್ರಸಾದವನ್ನು ಸಿದ್ದಪಡಿಸಿ, ಅಲ್ಲಿನ ಹಾಡಿಯ ಎಲ್ಲಾ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೆ ದಾಸೋಹ ಮಾಡಲಾಯಿತು.
ಕತ್ರಿಮಲೆ ಪುಣ್ಯಕ್ಷೇತ್ರ: ಶ್ರೀ ಮಲೆ ಮಹದೇಶ್ವರ ಸ್ವಾಮಿಯವರು ತಪವನ್ನಾಚರಿಸಲು ತಮ್ಮ 77 ಮಲೆ ಕೈಲಾಸಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಕತ್ರಿ ಮಲೆಯ ತುತ್ತತುದಿಯಲ್ಲಿ ಪ್ರಶಾಂತವಾದ ಸ್ಥಳದಲ್ಲಿ ತಪಸ್ಸನ್ನಾರಿಸಿ, ತಮ್ಮ ಬಲಗಾಲಿನ ಪಾದದ ಹೆಜ್ಜೆಯೂರಿ, ಈ ಕ್ಷೇತ್ರವನ್ನು ಪುಣ್ಯಗೊಳಿಸಿರುವುದು ಇಲ್ಲಿನ ಪ್ರಸಿದ್ದಿಯಾಗಿದೆ.ಈ ಪುಣ್ಯ ಸ್ಥಳದಲ್ಲಿ ಮಹದೇಶ್ವರ ಸ್ವಾಮಿಯವರ ತಂಗಿಯಾಗಿ, ಮಹಾಲಕ್ಷ್ಮಿ ಸ್ವರೂಪಿಣಿಯಾದ ಮಂಗಮ್ಮ ದೇವಿಯು ಬೆಟ್ಟದ ನಡುವಲ್ಲಿ ನೆಲೆಯಾಗಿ ಭಕ್ತ ಸಂಕಷ್ಠಗಳನ್ನು ನಿವಾರಿಸುವ ಶಕ್ತಿದೇವತೆಯಾಗಿ ನೆಲೆಗೊಂಡಿರುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.
ಇಲ್ಲಿ ಪ್ರತೀ ವರ್ಷವೂ ಸಹ “ಗಿರಿಜಾತ್ರೆ” ಎಂಬ ಹೆಸರಿನಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಹಾಗೂ ಶ್ರೀ ಮಂಗಮ್ಮ ತಾಯಿಯವರಿಗೆ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳ ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರು ಯಾವುದೇ ಭೇದ ಭಾವವಿಲ್ಲದೇ ಭಕ್ತಿಭಾವದಿಂದ ಪೂಜೆಯನ್ನು ಸಲ್ಲಿಸಿ,ತಮ್ಮ ಸೇವೆಗಳನ್ನು ಅರಿಕೆಯ ಮೂಲಕ ತೀರಿಸುತ್ತಾರೆ.ಹಾಗೂ ಇಲ್ಲಿ ನಂಬಿ ಬಂದ ಭಕ್ತರ ಕಷ್ಠಗಳನ್ನು ನಿವಾರಿಸುವಲ್ಲಿ ಮಂಗಮ್ಮ ತಾಯಿಯು ಬಹಳ ಶಕ್ತಿದೇವತೆಯಾಗಿ ನೆಲೆಯಾಗಿದ್ದಾಳೆ. ಇನ್ನೂ ಜಾತ್ರೆಯ ಸಂದರ್ಭದಲ್ಲಿ, ಬೆಟ್ಟದ ನಡುವಲ್ಲಿರುವ ಮಂಗಮ್ಮನ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಬೆಟ್ಟದ ಮೇಲಿರುವ ತನ್ನ ಅಣ್ಣನಾದ ಮಾದಪ್ಪ ಸ್ವಾಮಿಯ ದರ್ಶನ ಮಾಡಿಸಿ, ನಂತರ ಮತ್ತೆ ಮಂಗಮ್ಮನ ಸನ್ನಿಧಿಗೆ ಉತ್ಸವಮೂರ್ತಿಯನ್ನು ತಂದಿರಿಸಲಾಗುತ್ತದೆ.ಈ ಸಂದರ್ಭದಲ್ಲಿ ಬಂದಂತಹ ಎಲ್ಲಾ ಭಕ್ತಾದಿಗಳಿಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿರುತ್ತದೆ.
ಗಿರಿವೇಷ : ಯುಗಾದಿ ಕಳೆದ 2 ನೇ ತಿಂಗಳ ಹುಣ್ಣಿಮೆಯ ಅಸುಪಾಸಿನಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ಮಾತ್ರ ಇಲ್ಲಿ ಪೂಜೆ ನಡೆಯುವುದು ಇಲ್ಲಿನ ವಿಶೇಷ.ಹುಣ್ಣಿಮೆಯ ಅಸುಪಾಸಿನಲ್ಲಿ ನಡೆಯುವ ಈ ಜಾತ್ರೆಯು ಈ ಬಾರಿ ದಿನಾಂಕ 11-05-2025 ರಿಂದ 13-05-2025 ರವರೆಗೆ ಮೂರು ದಿನಗಳ ಕಾಲ ನಡೆಯುತ್ತದೆ.ಈ ಸಂದರ್ಭದಲ್ಲಿ ಭಕ್ತರು ಗಿರಿ ವೇಷವನ್ನು ಧರಿಸುತ್ತಾರೆ. ಇದಕ್ಕೂ ಮುನ್ನವೇ ಮಾದೇಶ್ವರರ ಪಾದವನ್ನು ದರ್ಶನ ಮಾಡಿ ಅಲ್ಲಿಂದ 100 ಮೀಟರ್ ದೂರಕ್ಕೆ ತೆರಳಿ ವೇಷ ಧರಿಸಬೇಕು. ವೇಷ ಧರಿಸಿದ ನಂತರ ಮತ್ತೆ ಪಾದವಿರುವ( ಮಾದಪ್ಪನ ಹೆಜ್ಜೆ ಗುರುತು ) ಸ್ಥಳಕ್ಕೆ ಯಾರೂ ತೆರಳುವಂತಿಲ್ಲ.ಪ್ರತಿ ವರ್ಷಕ್ಕೊಮ್ಮೆ ನಡೆಯುವ ಮಂಗಮ್ಮ ಜಾತ್ರೆಯನ್ನು ಅದ್ದೂರಿಯಿಂದ ಆಚರಿಸಲಾಗುವುದು. ಮೂರು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಬಹಳಷ್ಟು ವಿಶೇಷತೆಗಳಿದ್ದು, ಶೇ 90 ಭಾಗದಷ್ಟು ಜನ ಭಕ್ತರು ಕರ್ನಾಟಕದವರೇ ಭಾಗವಹಿಸುವುದು ಮತ್ತೊಂದು ವಿಶೇಷ.
ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಒಂದು ಬಾರಿ ವೇಷವನ್ನು ಧರಿಸಿದರೆ ನಿರಂತರವಾಗಿ ಮೂರು ಬಾರಿ ವೇಷವನ್ನು ಧರಿಸಬೇಕು. ಆಗಲೇ ಕಷ್ಟಗಳೆಲ್ಲವೂ ಕಳೆದುಹೋಗುತ್ತದೆ ಎಂಬ ನಂಬಿಕೆ ಇದೆ.
ಒಂದು ತೊಟ್ಟು ನೀರೂ ಕೂಡ ಕುಡಿಯದ ಭಕ್ತಾದಿಗಳು ಕೆಲವೊಮ್ಮೆ ಸಂಜೆ ಮೂರು ಗಂಟೆಯವರೆವಿಗೂ ಹಸಿದುಕೊಂಡೇ ಇದ್ದಂತಹ ಸನ್ನಿವೇಶಗಳು ಕೂಡ ಇಲ್ಲಿ ಕಾಣಸಿಗುತ್ತವೆ. ಕೊಂಡೋತ್ಸವ ಹಾಗೂ ಉತ್ಸವಗಳೂ ಇಲ್ಲಿ ಜರುಗುತ್ತದೆ.
ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಮಾರ್ಗದಲ್ಲಿ 20 ಕಿ.ಮೀ ಕ್ರಮಿಸಿ,ಪಾಲಾರ್ ಮಾರ್ಗವಾಗಿ ಬಂದರೇ, ಗೋವಿಂದ ಪಾಡಿ ಗ್ರಾಮವು ಸಿಗುತ್ತದೆ.ಈ ಗ್ರಾಮದಿಂದ ಬಲಕ್ಕೆ ತಿರುಗಿ 10 ಕಿ.ಮೀ ದೂರದವರೆಗೆ ಕಾಲ್ನಡಿಗೆಯಲ್ಲಿ ಸಾಗಿದರೆ, ಸಿಗುವ ಮಂಗಮ್ಮನ ಕೊಯ್ಲು ಗ್ರಾಮದಿಂದ ಆರಭವಾಗುವುದೇ ಈ ಕತ್ರಿಮಲೆ.
ಈ ಮಲೆಯು ತನ್ನದೇ ವಿಶೇಷತೆಗಳ ಮೂಲಕ ಭಕ್ತರ ಕಣ್ಮನವನ್ನು ಸೆಳೆಯುತ್ತದೆ. ಆದರೆ,ಇದುವರೆಗೂ ಈ ಸ್ಥಳವು ಹೆಚ್ಚು ಹೊರ ಜಗತ್ತಿಗೆ ತೆರೆದುಕೊಂಡಿಲ್ಲ.
ಮೂಲತಃ ಈ ಸ್ಥಳವು ತಮಿಳುನಾಡು ರಾಜ್ಯಕ್ಕೆ ಸೇರಿದೆಯಾದರೂ, ಕರ್ನಾಟಕ ರಾಜ್ಯದ ಗಡೀ ಜಿಲ್ಲೆ ಚಾಮರಾಜನಗರಕ್ಕೆ ಹತ್ತಿರದಲ್ಲಿದೆ. ಇಲ್ಲಿ 150 ರಿಂದ 200 ಕನ್ನಡ ಸೋಲಿಗ ಜನಾಂಗದ ಕುಟುಂಬಗಳು ವಾಸವಿದೆ. ಇಲ್ಲಿ ಮಂಗಮ್ಮ ದೇವಿ ದೇವಸ್ಥಾನ ಹಾಗೂ ಮಲೆ ಮಹದೇಶ್ವರ ಸ್ವಾಮಿಯವರ ಅವರ ಹೆಜ್ಜೆ ಗುರುತು ಬೆಟ್ಟದ ತುತ್ತ ತುದಿಯಲ್ಲಿ ಇದೆ.
ಈ ಸಂದರ್ಭದಲ್ಲಿ ಅರ್ಚಕರು ಹಾಗೂ ನೂರಾರು ಭಕ್ತರು, ಮತ್ತು ಶಾಲಾ ಮಕ್ಕಳು ಪೋಷಕರು ಹಾಜರಿದ್ದರು.