ಸಚಿವ ಸ್ಥಾನಕ್ಕಾಗಿ ಇಂಡಿ ಮತಕ್ಷೇತ್ರದಲ್ಲಿ ರಾಜಕೀಯ ಹೊಸ ಬೆಳವಣಿಗೆ..!
ಇಂಡಿ: ಬರುವ ಸಚಿವ ಸಂಪುಟದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಇಲ್ಲದಿದ್ದರೆ ಪಕ್ಷದ ಎಲ್ಲ ಪದಾಧಿಕಾರಿಗಳು, ಸರಕಾರದ ನಾಮ ನಿರ್ದೇಶಿತ ಸದಸ್ಯರು ಸಾಮೂಹಿಕ ರಾಜಿನಾಮೆ ನೀಡುವದಾಗಿ ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ ಹೇಳಿದರು.
ಅವರು ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಬೃಹತ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಇಂಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಅಜೀತ ಧನಶೆಟ್ಟಿ ಮಾತನಾಡಿ ೧೯೯೪ ರಿಂದ ೨೦೧೩ ರ ವರೆಗೆ ಇಂಡಿ ಮತಕ್ಷೇತ್ರ ಕಾಂಗ್ರೆಸ ಪಕ್ಷದ ಸ್ಥಾನ ನಾಲ್ಕನೆಯ ಸ್ಥಾನದಲ್ಲಿತ್ತು. ಅದನ್ನು ಪ್ರಥಮ ಸ್ಥಾನಕ್ಕೆ ತಂದು ಜಿಪಂ ತಾಪಂ ಪುರಸಭೆ ಸೇರಿದಂತೆ ಎಲ್ಲ ಕಡೆ ಮುಂಚೂಣಿ ತಂದವರು ಯಶವಂತರಾಯಗೌಡ ಪಾಟೀಲರು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅಧ್ಯಕ್ಷ ಇಲಿಯಾಸ ಬೋರಾಮಣಿ ಮಾತನಾಡಿ ಇಂಡಿ ಮತಕ್ಷೇತ್ರಕ್ಕೆ ೧೯೫೭ ರಿಂದ ಒಮ್ಮೆಯೂ ಸಚಿವ ಸ್ಥಾನ ದೊರೆತಿಲ್ಲ. ಈ ಬಾರಿ ನೀಡದಿದ್ದರೆ ಎಲ್ಲ ಪಕ್ಷದ ಅಧಿಕಾರದಲ್ಲಿ ಇದ್ದವರು ಸಾಮೂಹಿಕ ರಾಜಿನಾಮೆ ನೀಡುತ್ತೇವೆ ಎಂದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ ಮಾತನಾಡಿ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು . ಅನುಭವ, ಹಿರಿತನ, ಪಕ್ಷ ನಿಷ್ಠೆ ಹಾಗೂ ಜನಪರ ಕಾರ್ಯ ಮಾಡಿದ ಶಾಸಕರು . ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮಹಿಳಾ ವಿಭಾಗದ ಅಧ್ಯಕ್ಷೆ ನಿರ್ಮಲಾ ತಳಕೇರಿ ಮತ್ತು ಹಿರೇಬೇವನೂರ ಗ್ರಾ.ಪಂ ಅಧ್ಯಕ್ಷೆ ಶೈಲಜಾ ಜಾಧವ ಮಾತನಾಡಿ ಮೂರು ಬಾರಿ ಜಿಪಂ ಸದಸ್ಯರಾಗಿ, ಜಿಪಂ ಅಧ್ಯಕ್ಷರಾಗಿ ಹಾಗೂ ಮೂರು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿ ಅಪಾರ ಆಡಳಿತ ಅನುಭವ ಮತ್ತು ಜನಸೇವೆಯ ಪರಿಪಕ್ವತೆಯನ್ನು ಗಳಿಸಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕತ್ವ, ಪಕ್ಷ ಸಂಘಟನೆಗೆ ನೀಡಿದ ಕೊಡುಗೆ ಹಾಗೂ ಗಡಿನಾಡಿನ ಅಭಿವೃದ್ಧಿಯ ಕುರಿತು ಅವರ ಬದ್ಧತೆ ಸದಾ ಶ್ಲಾಘನೀಯವಾಗಿದ್ದು ಅವರಿಗೆ ಸಚಿವ ಸ್ಥಾನ ನೀಡಿದರೆ ಇಂಡಿ ಮತಕ್ಷೇತ್ರ ಮತ್ತು ಜಿಲ್ಲೆ ಅಭಿವೃದ್ದಿ ಹೊಂದಲಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಸಿದ್ದಣ್ಣ ಬೂದಿಹಾಳ ಮಾತನಾಡಿ ಇಂಡಿ ಭಾಗವು ಸ್ವಾತಂತ್ರ್ಯಾನಂತರ ಇಂದಿನವರೆಗೂ ಸಚಿವ ಸ್ಥಾನದಿಂದ ಮಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ನ್ಯಾಯದ ದೃಷ್ಟಿಯಿಂದ ಈ ಬಾರಿ ಸಚಿವ ಸಂಪುಟದಲ್ಲಿ ಇಂಡಿ ಮತಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದರು
ಇಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಯೋಗಪ್ಪ ಜೊತಗೊಂಡ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ,ಸಣ್ಣಪ್ಪ ತಳವಾರ , ಜಾವೇದ ಮೋಮಿನ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಭೀಮನಗೌಡ ಪಾಟೀಲ್, ರವೀಂದ್ರ ನಿಗಡಿ, ಭೀಮಾಶಂಕರ ಮೂರಮನ, ರುದ್ರು ಅಲಗೊಂಡ, ಮಹಿಬೂಬ ಅರಬ, ಜಟ್ಟೆಪ್ಪ ರವಳಿ, ಪಾಪು ಕಿತ್ತಲಿ, ಮಲ್ಲನಗೌಡ ಪಾಟೀಲ, ಸಂತೋಷ ಪರಶೇನವರ, ಸದಾಶಿವ ಪ್ಯಾಟಿ, ಶಿವಯೋಗಪ್ಪ ಜೋತಗೊಂಡ, ಶಿವಯೋಗ್ಯಪ್ಪ ಚನ್ನಗೊಂಡ ಸೇರಿದಂತೆ ಇನ್ನಿತರರು ಇದ್ದರು.










