ಲಿಂಗಸೂಗೂರು: ರಾಯಚೂರು ಜಿಲ್ಲೆ ಇದೀಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತ ನೀರು ಸೇವಿಸಿ ಮೂರುಜನ ಮೃತಪಟ್ಟು, 80 ಕ್ಕೂ ಹೆಚ್ಚು ಜನ ಆಸ್ಪತ್ರೆ ಪಾಲಾಗಿದ್ದಾರೆ. ಇದೀಗ ಅಂತಹದ್ದ ಒಂದು ಘಟನೆ ನಾಗರಹಾಳ ಪಂಚಾಯತಿ ಪಿಡಿಓ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಮರುಕಳಿಸಿದರೆ ಆಶ್ಚರ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ನಿವಾಸಿಗಳು ಚರಂಡಿ ನೀರು, ದುರ್ವಾಸನೆಯಿಂದ ಕಂಗೆಟ್ಟು ಹೋಗಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಹಾಳ ಗ್ರಾಮದ ವಾರ್ಡ್ ನಂ ೨ ರಲ್ಲಿ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಚರಂಡಿಗಳಲ್ಲಿ ಕಸ ಕಡ್ಡಿ ಪ್ಲಾಸ್ಟಿಕ್ ತುಂಬಿಕೊಂಡು ರಸ್ತೆಯಲ್ಲಿ ಹರಿಯುವ ನೀರು ಮುಂದೆ ಹೋಗದೆ ಮನೆಗಳ ಮಂದೆ ಶೇಖರಣೆಯಾಗುತ್ತಿದೆ. ಇನ್ನು ನಿವಾಸಿಗಳು ಹೊರಗಡೆಯಿಂದ ಮನೆಯ ಒಳಗೆ ಹೋಗಬೇಕಾದರೆ ಗಲೀಜು ತುಂಬಿದ ನೀರಿನಲ್ಲೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ನಿವಾಸಿಗಳ ಸಂಕಷ್ಟ ಮತ್ತು ದುಸ್ಥಿತಿ ಬಗ್ಗೆ ಪಿಡಿಓ ಸೇರಿದಂತೆ ಪಂಚಾಯತಿ ಅಧಿಕಾರಿಗಳ ಬಳಿ ನಾಲ್ಕೈದು ಬಾರಿ ಮೌಖಿಕವಾಗಿ ಅಳಲನ್ನು ಹೇಳಿಕೊಂಡರೂ ಯಾವುದೇ ಪ್ರಯೋಜನೆಯಾಗಿಲ್ಲ. ಕಾರಣ ಈ ವಾರ್ಡಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ. ಇದರಿಂದ ಬೇಸತ್ತ ನಿವಾಸಿಗಳು ಸ್ವತಃ ತಾವೇ ಚರಂಡಿ ಸ್ಚಚ್ಚತೆಗೆ ಮುಂದಾಗಿದ್ದಾರೆ. ಇಷ್ಟಾದರೂ ಇತ್ತ ಇಣುಕಿ ನೋಡದ ಪಿಡಿಓ ಮತ್ತು ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಪರಶುರಾಮ ಗೌಂಡಿ ಆಕ್ರೋಶ ಹೊರಹಾಕಿದರು.
ಇನ್ನೂ ಇಲ್ಲಿ ಈ ಸಮಸ್ಯೆಗೆ ಕಾರಣವಾಗಿದ್ದು ಸಿಸಿ ರಸ್ತೆಯ ನೀರು ಸರಾಗವಾಗಿ ಹೋಗುವಂತೆ ನಿರ್ಮಿಸಲಾದ ಚರಂಡಿ ಕಾಮಗಾರಿ ಇಳಿಜಾರಿನಲ್ಲಿ ಮಾಡಿದ್ದರಿಂದ ನೀರು ಸರಾಗವಾಗಿ ಹೋಗುತ್ತಿಲ್ಲ. ಹೀಗಾಗಿ ಶೇಖರಣೆಯಾದ ಚರಂಡಿ ನೀರಿನ ದುರ್ವಾಸನೆ ಮತ್ತು ಸೊಳ್ಳೆ ಕಾಟದಿಂದ ನಿವಾಸಿಗಳು ರೋಷಿ ಹೋಗಿದ್ದಾರೆ.
ಇದೀಗ ಗ್ರಾಮಸ್ಥರು ಮನೆ ಮುಂದೆ ಶೇಖರಣೆಯಾಗಿರುವ ಚರಂಡಿ ನೀರು ಹರಿಯುವಂತೆ ಮಾಡಿ ವಾಸ ಮಾಡಲು ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಇನ್ನಾದ್ರೂ ಗ್ರಾ.ಪಂ. ಅಧಿಕಾರಿಗಳು ಹಾಗೂ ಸದಸ್ಯರು ಎಚ್ವೆತ್ತು ಇತ್ತ ಗಮನ ಹರಿಸಿ ಚರಂಡಿ ದುರಸ್ತಿಗೊಳಿಸುವಲ್ಲಿ ಮುಂದಾಗುತ್ತಾರಾ ಕಾದು ನೋಡಬೇಕಿದೆ.