ಲಿಂಗಸೂಗೂರು: ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಹೆಣಗಾಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಭಿವೃದ್ಧಿಯನ್ನೇ ಮರೆತಿದೆ ಎಂದು ಬಿಜೆಪಿ ಮಂಡಲ ಕಾರ್ಯದರ್ಶಿ, ಹಾಗೂ ಮಹಿಳಾ ಮೋರ್ಚ ಉಸ್ತುವಾರಿ, ಹಾಗೂ ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷೆ, ಯುವ ನಾಯಕಿ ಜ್ಯೋತಿ ಸುಂಕದ್ ಖಂಡಿಸಿದ್ದಾರೆ.
ಮಹಿಳೆಯರ ಪ್ರಯಾಣಕ್ಕೆಂದು ಶಕ್ತಿ ಯೋಜನೆ ಗ್ಯಾರಂಟಿ ಒಂದು ಇಲ್ಲಿಯವರೆಗೆ ಜಾರಿ ಇದ್ದರೂ ಅದರಲ್ಲೂ ಕೆಲವೊಂದು ಬಸ್ಸುಗಳಲ್ಲಿ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದು ಬೋರ್ಡನ್ನು ಹಾಕಿದ್ದಾರೆ.
ಉಳಿದ ಘೋಷಣೆಗಳು ಕೂಡಾ ಇನ್ನೂ ಕಾಗದದಲ್ಲಿನೇ ಇವೆ. ಗೃಹಲಕ್ಷ್ಮಿ ಯೋಜನೆಯಾಗಲಿ ನಿರುದ್ಯೋಗಿ ಯುವ ಜನತೆಗೆ ಘೋಷಿಸಿರುವ ಯುವ ನಿಧಿಯಾಗಲಿ ಇನ್ನೂ ಮರಿಚೀಕೆಯಾಗಿಯೇ ಇವೆ. ಅವುಗಳು ಮಹಿಳೆಯರಿಗೆ ಮತ್ತು ಯುವ ಜನತೆಗೆ ಮುಟ್ಟಿಯೇ ಇಲ್ಲ ಎಂದ ಅವರು ಅಕ್ಕಿ ವಿಷಯದಲ್ಲಿ ರಾಜಕೀಯ ಮಾಡುತ್ತಾ ಬಡ ಜನರಿಗೆ ಮುಟ್ಟಬೇಕಾದ ಪಡಿತರ ಅಕ್ಕಿ ಬಾರದೇ ಹೋಗಿದೆ. ವಿನಾಕಾರಣ ಕೇಂದ್ರ ಸರಕಾರದ ಮೇಲೆ ಗೂಬೆ ಕೂಡಿಸುವ ಕಾರ್ಯವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಇಂತಹ ಮಹತ್ವದ ಘೋಷಣೆಗಳನ್ನು ಮಾಡುವ ಬದಲು ಸಾರಾಸಾರ ವಿಚಾರ ಮಾಡದೇ ಘೋಷಿಸಿದ್ದು ಆ ಪಕ್ಷದ ಅಪಕ್ವತೆಯನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.