ಭೀಮೆಯ ನಾಡಿನಲ್ಲಿ ದಡ ಮುಟ್ಟಿಸುವ ಬಿಜೆಪಿ ಧೀಮಂತ ನಾಯಕ ಯಾರು..?
ಒಗ್ಗಟ್ಟಿನ ಮಂತ್ರ ಪಠಣ ಮಾಡಿದರೆ ಮಾತ್ರ ನೆಲೆ..!
ಮುನಿಸಿಕೊಂಡ ಪ್ರಾಮಾಣಿಕ ಕಾರ್ಯಕರ್ತರ ಮನವೊಲಿಕೆಗೆ ಮುಂದಾಗುತ್ತಾ ಬಿಜೆಪಿ..!
ಆಂತರಿಕ ಕಚ್ಚಾಟ ಸರಿ ಪಡಿಸಿ ಪಕ್ಷ ಸಂಘಟನೆ ಮಾಡುವ ನಾಯಕ ಯಾರು..?
ಈಗ ಬಿಜೆಪಿಯ ಭಿನ್ನಮತ ಶಮನಗೊಳಿಸುವರಾರು..!
ಕೆಲ ಸಮುದಾಯಗಳ ಮನವೊಲಿಸುವಲ್ಲಿ ವಿಫಲವಾಯ್ತೇ ಬಿಜೆಪಿ.?
ಪದೆ ಪದೇ ನಾಯಕತ್ವ ಬದಲಾವಣೆ & ಫಾಯರ್ ಬ್ರ್ಯಾಂಡ್ ನಾಯಕರ ಕೊರತೆಯೋ..!
ಪಕ್ಷಕ್ಕೆ ಶಕ್ತಿ ತುಂಬಾ ಬೇಕಾದ ಸಂಘಟನೆಗಳ
ಕೊರತೆಯೋ..!
ಬರಿದಾದ ದಾರಿಯಲ್ಲಿ ಗೆಲುವಿನ ರಂಗೋಲಿ ಬಿಡಿಸುವರಾರು..?
ಇಂಡಿ : ಇಡೀ ರಾಜ್ಯದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾದ ಮತಕ್ಷೇತ್ರವೆಂದು ಹೆಸರುವಾಸಿಯಾಗಿದೆ. ಏಕೆಂದರೆ ಇಂಡಿ ಮತಕ್ಷೇತ್ರ ಇದುವರೆಗೂ ಅತ್ಯಂತ ವಿಶೇಷ ಶಾಸಕರ ಆಯ್ಕೆಯ ಸುದೀರ್ಘ ಇತಿಹಾಸವನ್ನು ಹೊಂದಿದೆ. ಇಂತಹ ವಿಶೇಷ ರಾಜಕೀಯ ಹಿನ್ನೆಲೆಯಿರುವ ಇಂಡಿಯಲ್ಲಿ ಬಿಜೆಪಿ ಪಕ್ಷ ಮಾತ್ರ ಒಂದೇ ಒಂದು ಬಾರಿ ಗೆಲುವು ಸಾಧಿಸಿ ತನ್ನ ನಗೆ ಬೀರಿದೆ. ಆದರೆ ಇತ್ತೀಚೆಗೆ ನಡೆದ ಚುನಾವಣೆಯನ್ನು ವಿಮರ್ಶೆ ಮಾಡಿದಾಗ ಮತಕ್ಷೇತ್ರದಲ್ಲಿ ಬಿಜೆಪಿಯ ಕುರಿತು ಅಂದುಕೊಂಡಂತೆ ಗಮನಾರ್ಹವಾದ ಗೆಲುವಿನ ಗಮ್ಯ ಮುಟ್ಟಲಿಲ್ಲ. ಈಗ ಪಕ್ಷದಲ್ಲಿ ಎಲ್ಲವೂ ಅಯೋಮಯವಾಗಿದೆ ಎಂದು ಕಾರ್ಯಕರ್ತರ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಸಾವಿರಾರು ಕಾರ್ಯಕರ್ತರ ಸೈನ್ಯ, ನಾಯಕರ ಆನೆ ಬಲ, ಅಲ್ಲದೇ ಮೋದಿಜೀ ಜನಪ್ರೀಯತೆ, ಡಬಲ್ ಎಂಜಿನ್ ಎಂಬ ಹೆಗ್ಗಳಿಕೆಯ ಸರಕಾರ ಹೀಗೆ ತನ್ನ ಬಾಹುಬಲದ ಅತಿಶಯ ಶಕ್ತಿ ಸಾಮರ್ಥ್ಯ ಹೊಂದಿದರೂ ಕೂಡಾ, ಈ ಮತಕ್ಷೇತ್ರದಲ್ಲಿ ಕಮಲ ಕಮರುತ್ತಿದೆ..! ಎಂದೂ ಬಿಜೆಪಿಯ ಅನೇಕ ಕಾರ್ಯಕರ್ತರ ಮನದಲ್ಲಿ ಸಂಶಯದ ಭಾವ ಮೂಡುತ್ತಿದೆ.
ನೆಲೆ ಕಂಡುಕೊಳ್ಳಲು ಸತತ ಪ್ರಯತ್ನ ಮಾಡುತ್ತಿದೆ ಭಾಜಪ..
ನಾಲ್ಕು ದಶಕಗಳ ಬಿಜೆಪಿ ಅಭ್ಯರ್ಥಿಗಳ ಹೆಸರು, ಪಡೆದ ಮತಗಳು-ವರ್ಷ-ಫಲಿತಾಂಶ
-
ಚೌದ್ರಿ ಗುರುಲಿಂಗಪ್ಪ ಮಲ್ಲಪ್ಪ – 1505 -1983 ಸೋಲು
-
ಕನ್ನೊಳ್ಳಿ ಜಯಸಿಂಗ್ ನರಸಿಂಗ್ – 1054 -1985 ಸೋಲು
-
ಚೌದ್ರಿ ಗುರುಲಿಂಗಪ್ಪ ಮಲ್ಲಪ್ಪ- 883 -1989 ಸೋಲು
-
ಬಗಲಿ ಪರಮೇಶ್ವರ ಸಾತಗೌಡ – 9632 -1994 ಸೋಲು
-
ಅಶೋಕ ನೀಲನಗೌಡ ಬಿರಾದಾರ – 7131- 1999 ಸೋಲು
-
ಡಾ.ಸಾರ್ವಭೌಮ ಸಾತಗೌಡ ಬಗಲಿ – 15807 -2004 ಸೋಲು
-
ಡಾ.ಸಾರ್ವಭೌಮ ಸಾತಗೌಡ ಬಗಲಿ – 29456 -2008 ಗೆಲವು
-
ಶ್ರೀಶೈಲಗೌಡ ಶಂಕ್ರೆಪ್ಪ ಬಿರಾದಾರ – 15784 -2013 ಸೋಲು
-
ದಯಾಸಾಗರ ಬಾಪುರಾಯ ಪಾಟೀಲ – 38941 -2018 ಸೋಲು
-
ಕಾಸುಗೌಡ ಈರಪ್ಪಗೌಡ ಬಿರಾದಾರ – 39862 -2023 ಸೋಲು.
ಬಿಜೆಪಿ ನಡೆದು ಬಂದ ದಾರಿ.!
ದಶಕಗಳ ಹಿಂದಿನ ಕಾಲಘಟ್ಟದಲ್ಲಿ ಇಂಡಿ ಬಿ.ಜೆ.ಪಿ ಯ ಭದ್ರ ಕೋಟೆಗೆ ಬುನಾದಿ ಹಾಕಿದ ಅತ್ಯಂತ ನಿಷ್ಠಾವಂತರಲ್ಲಿ ಬಾಬು ಸಾಹುಕಾರ್ ಧನಶೆಟ್ಟಿ, ಮಲ್ಲಯ್ಯ ಪತ್ರಿಮಠ, ಗುರುಲಿಂಗಪ್ಪ ಚೌದರಿ ವಕೀಲರು ಹಾಗೂ ಜೆ ಎನ್ ಕನ್ನೊಳ್ಳಿ, ಇವರೆಲ್ಲರೂ ತಮ್ಮ ಬದುಕಿನ ಬಹು ಪಾಲು ಜೀವನವನ್ನು ಪಕ್ಷದ ಬೆಳವಣಿಗಾಗಿ ಮುಡಿಪಾಗಿಟ್ಟವರು.ತಮ್ಮ ಕಷ್ಟ ನಷ್ಟಗಳನ್ನು ಹೊತ್ತುಕೊಂಡು ಬರಿಗಾಲಿನ ಫಕೀರರಂತೆ ಕ್ಷೇತ್ರದಾದ್ಯಂತ ಅಲೆದಾಡಿ ಶಿಸ್ತಿನಿಂದ ಪಕ್ಷ ಸಂಘಟಿಸಿದ ಮೂಂಚೂಣಿ ನಾಯಕರು.
ಇಂಡಿ ಬಿಜೆಪಿ ಚುನಾವಣಾ ರಣಕಣದಲ್ಲಿ ಮೊಟ್ಟ ಮೊದಲ ಬಾರಿಗೆ ಗುರುಲಿಂಗಪ್ಪ ಚೌದರಿ ವಕೀಲರು ಸ್ಪರ್ಧಿಸಿ ಪರಾಭವಗೊಂಡರು. ನಂತರ ಕನ್ನೊಳ್ಳಿ ಜಿಎನ್ ಪರಮೇಶ್ವರ ಬಗಲಿ, ಅಶೋಕಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ ಹೀಗೆ ಇವರೆಲ್ಲರೂ ಸ್ಪರ್ಧಿಸಿದರೂ ಆದರೆ ಮತಕ್ಷೇತ್ರದಲ್ಲಿ ಯಾರೊಬ್ಬರೂ
ಪ್ರಭಾವಿ ನಾಯಕರಾಗಿ ಹೊರ ಹೊಮ್ಮಲಿಲ್ಲ.
ಮೊಟ್ಟ ಮೊದಲು ಕೇಸರಿ ಗುಲಾಲು ಹಾರಿದ್ದು..!
2008 ರ ಚುನಾವಣೆಯಲ್ಲಿ ಡಾ.ಸಾರ್ವಭೌಮ ಬಗಲಿ ಜಯಭೇರಿ ಭಾರಿಸಿ ಶಾಸಕರಾದ ನಂತರ ಕೆಲವೊಂದಿಷ್ಟು ನ್ಯೂನತೆಗಳಿಂದ ಬಿಜೆಪಿ ಇಂಡಿಯಲ್ಲಿ ಇದುವರೆಗೂ ನಿರೀಕ್ಷಿತವಾಗಿ ಪುಟಿದೇಳಲಿಲ್ಲ..
2018ರ ತಪ್ಪು ನಿರ್ಧಾರದ ಮರ್ಮಘಾತ.!
2018 ರಲ್ಲಿ ನಡೆದ ಚುನಾವಣೆಯಲ್ಲಿ ರವಿಕಾಂತ್ ಪಾಟೀಲ ಟಿಕೆಟ್ ಗಾಗಿ ಪ್ರಯತ್ನ ಪಡುವಾಗ ಭಿನ್ನಮತ ಸ್ಪೋಟವಾಗಿ ಅದು ಮುಗಿಲು ಮುಟ್ಟಿತು. ಇದರಿಂದ ಆಗಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ದೋಣಿಯಲ್ಲಿ ಒಡಕಿನಿಂದ ಕೂಡಿದ ಬಿರುಕಿನ ರಂದ್ರಗಳು ತೆರೆದುಕೊಂಡು ಬಿಜೆಪಿಯ ಅಭ್ಯರ್ಥಿ ದಯಾಸಾಗರ ಪಾಟೀಲ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು.ಹಾಗಾಗಿ ಬಿಜೆಪಿಯ ದೋಣಿ ಮುಳುಗಿ, ಕ್ಷೇತ್ರದಲ್ಲಿ ಗೆಲುವು ಮರೀಚಿಕೆಯಾಯಿತು.
ಜಾತಿಯ ಸಾಂಕ್ರಾಮಿಕ ಜಾಡ್ಯತೆಯ ವ್ಯಾಪಕತೆ.!
2023 ರ ಈ ಬಾರಿ ಇಂಡಿ ವಿಧಾನಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಅದೇ ರಾಗ ಅದೇ ಹಾಡು..! ಎಂಬಂತೆ ಬಿಜೆಪಿ ದೋಣಿ ಮತ್ತೆ ಚುನಾವಣಾ ಕಡಲಿನಲ್ಲಿ ಭಿನ್ನಮತ, ಜಾತಿಯ ಸಾಂಕ್ರಾಮಿಕ ಹೊಡೆತಕ್ಕೆ ಸಿಕ್ಕು ಮುಗ್ಗರಿಸಿ, ಕಾಂಗ್ರೆಸ್ ನ ರಣತಂತ್ರಕ್ಕೆ ಸೋಲು ಕಂಡಿತು. ಚುನಾವಣೆಯಲ್ಲಿ ಒಗ್ಗಟಿನ ಕೊರತೆಯಿಂದ ಪಕ್ಷದ ಆಂತರಿಕ ಕಚ್ಚಾಟದಿಂದ ಹಾಗೂ ಕಾಂಗ್ರೆಸ್ ನ ಚಾಣಾಕ್ಷ ನಡೆಗೆ ಸಾಂಪ್ರದಾಯಿಕ ವಿರೋಧಾಭಾವವಿರುವ ಎರಡು ಸಮುದಾಯಗಳು ದೂರವಾದವು.ಇದರಿಂದ ಸಣ್ಣ ವರ್ಗದ ಜನ ಕಕ್ಕಾಬಿಕ್ಕಿಯಾಗಿ ಚದುರಿ ಹೋದರು. ಇದರ ಪರಿಣಾಮ ಬಿಜೆಪಿ ಮತಕ್ಷೇತ್ರದಲ್ಲಿ ಮತ್ತೆ ಸೋಲು ಕಂಡಿತು. ಆದರೆ ಈ ಸೋಲಿನ ವಿಷಯ ಮಾತ್ರ ಪಕ್ಷದ ಸಾವಿರಾರು ಕಾರ್ಯಕರ್ತರ ಮನದ ಮೇಲೆ ಘಾಸಿಗೊಳಿಸಿತು ಎನ್ನುವದು ಬಹು ಜನರ ಅಭಿಪ್ರಾಯವಾಗಿದೆ.
ಅವಕಾಶವಾದ ರಾಜಕಾರಣಕ್ಕೆ ತೀಲಾಂಜಲಿ.!
ಇವೆಲ್ಲದರ ಪರಿಣಾಮವಾಗಿ ಇತ್ತೀಚಿಗೆ ನಡೆದ ಬಿಜೆಪಿ ತಾಲ್ಲೂಕು ಆತ್ಮಾವಲೋಕನ ಸಭೆಯಲ್ಲಿ ಆಂತರಿಕ ಕಚ್ಚಾಟದ ಕಿಡಿ ಹೊತ್ತಿ ಉರಿಯಿತು.ಇನ್ನೂ ಮುಂದೆಯಾದರೂ ಭಿನ್ನಮತ, ಪಕ್ಷ ದ್ರೋಹದಂತಹ ಚಟುವಟಿಕೆಗಳು ದೂರಾಗಲಿ, ಪಕ್ಷದ ಪರಿಸ್ಥಿತಿ ಸುಧಾರಿಸಲಿ ಎನ್ನುವದು ಪಕ್ಷದ ಅನೇಕ ಕಾರ್ಯಕರ್ತರ ಅಭಿಮತ. ಈ ಎಲ್ಲ ವ್ಯತಿರಿಕ್ತ ನಿರಾಶೆಯ ಕವಿದಿರುವ ಕಾರ್ಮೊಡಗಳನ್ನು ದೂರ ಸರಿಸಿ ಗೆಲುವಿನ ಉತ್ಸಾಹದ ಹಡಗು ನಿರ್ಮಿಸಿ ಜಾತಿ ಮೇಲಾಟವನ್ನು ದೂರು ಮಾಡಿ ಆಂತರಿಕ ಕಚ್ಚಾಟದ ಅವಕಾಶವಾದ ರಾಜಕಾರಣಕ್ಕೆ ಸಂಪೂರ್ಣ ತೀಲಾಂಜಲಿಯಿಟ್ಟು ಗೆಲುವಿನ ಗುಲಾಲನ್ನು ಕೈಯಲ್ಲಿ ಹಿಡಿದುಕೊಂಡು ಹಾರಿಸುವರಾರು.?
ಸಮರ್ಥ ಸೇನಾಧಿಪತಿ ಯಾರು.!
ಬಿಜೆಪಿಯ ವಿಜಯೋತ್ಸವದ ದೋಣಿ ಸಾಗಿಸುವ ಸಮರ್ಥ ಸೇನಾನಿ ನಾವಿಕ ಯಾರು.? ಇದು ತಾಲ್ಲೂಕಿನಲ್ಲಿ ಜನರಲ್ಲಿ ಈಗ ಬಗೆ ಹರಿಯದ ಯಕ್ಷ ಪ್ರಶ್ನೆಯಾಗಿದೆ.? ಪ್ರಶ್ನೆಗೆ ಈಗ ಉತ್ತರವಾಗಿ ಮತ್ತೆ ಒಗ್ಗಟ್ಟಿನ, ಐಕ್ಯತೆಯ ಮಂತ್ರದೊಂದಿಗೆ ಬಿಜೆಪಿ ದೋಣಿಯ ದಡ ಮುಟ್ಟಿಸುವ ನಾಯಕ ಯಾರು..? ಎನ್ನುವುದೇ ತಾಲ್ಲೂಕಿನ ಜನರ ಬಹುದೊಡ್ಡ ಪ್ರಶ್ನೆಯಾಗಿ ಬಾಕಿಯಾಗಿ ಉಳಿದಿದೆ.
- ಜಾತಿಯ ಮೇಲಾಟಕ್ಕೆ ಸೋಲಿಗೆ ಕಾರಣವಾಗುತ್ತೆ. ಆದರೆ ನಾಯಕತ್ವ ಹೊತ್ತವರು, ವಹಿಸಿಕೊಳ್ಳುವರು, ಯಾವುದೇ ನೀರಿಕ್ಷೇಯಿಲ್ಲದೇ ಪ್ರಾಮಾಣಿಕವಾಗಿ ಪಕ್ಷದ ತತ್ವ ಸಿದ್ದಾಂತದ ಅಡಿಯಲ್ಲಿ ಕಾರ್ಯ ನಿರ್ವಹಿಬೇಕು. ನಿರಂತರವಾಗಿ ಪಕ್ಕಕ್ಕಾಗಿ 5 ವರ್ಷಗಳ ಕಾಲ ಸೈನಿಕರನ್ನ ತಯಾರಿಸಿ, ಕೊನೆಗೆ ಯಾವುದೋ ನೆಪದಲ್ಲಿ ತತ್ವ ಸಿದ್ದಾಂತಕ್ಕೆ ಬಲಿಕೊಡೊದು ಒಳ್ಳೆಯದಲ್ಲ..! ನಾಯಕತ್ವ ವಹಿಸಿಕೊಳ್ಳುವರು ಸ್ವಂತಕ್ಕಾಗಿ
ಸ್ವಾರ್ಥಕ್ಕಾಗಿ ಅಲ್ಲಾ, ಪಕ್ಷಕ್ಕಾಗಿ ಪ್ರಾಮಾಣಿಕವಾಗಿರಬೇಕು.
ಎಸ್ ಜಿ ಕುಲಕರ್ಣಿ, ವಕೀಲರು ಇಂಡಿ
- ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟು ಸಂಘಟನಾತ್ಮಕ ಶಕ್ತಿ ತುಂಬುತ್ತೆವೆ. ಇನ್ನೂ ಈ ಬಾರಿ ಸಾಂಪ್ರದಾಯಿಕ ಸಮುದಾಯದ ಮತಗಳು ದೂರಾಗಿದ್ದು, ಕೇವಲ ಎರಡು ಪ್ರಭಲ ಸಮುದಾಯಗಳಿಗೆ ಹೆಚ್ಚಿನ ಅದ್ಯತೆ ನೀಡಿದ್ದು ಸೋಲಿಗೆ ಕಾರಣ. ಸದ್ಯ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟುತ್ತೇವೆ. ಹಿಂದುತ್ವದ ನೆಲೆಗಟ್ಟಿನ ಅಕ್ರಮಣಕಾರಿ ವಿಚಾರವಾದಿ, ರಾಷ್ಟ್ರೀಯ ಪ್ರಜ್ಞೆಯಿರುವ ನಾಯಕನನ್ನು ಪಕ್ಷ ಗುರುತಿಸಿ, ಭವಿಷ್ಯದ ದಿನಗಳಲ್ಲಿ ಪಕ್ಷ ಕಟ್ಟಲು ಅನುಕೂಲ ಮಾಡಿಕೋಡುತ್ತದೆ .
ಅನೀಲ ಜಮಾದಾರ, ಬಿಜೆಪಿ ಮುಖಂಡರು ಇಂಡಿ.