ಮಣ್ಣೂರ ಗ್ರಾಮದ ಬಿ.ಎಸ್.ಬಿ ದಾಬಾಯಲ್ಲಿ ಘಟನೆ|ಆರೋಪಿಗಳು ಅಂದರ್
ಬಿಯರ್ ಬಾಟಲ್ ನಿಂದ ಹೊಡೆದು ಮಾಲಿಕನಿಂದ ವೇಟರ್ ಕೊಲೆ ?
ಅಫಜಲಪುರ:ಕುಡಿದು ವೇಟರ್ ಕೆಲಸ ಮಾಡುತ್ತಿಲ್ಲ ಎಂದು ಕೋಪಗೊಂಡು ದಾಬಾ ಮಾಲೀಕ ಬಿಯರ್ ಬಾಟಲ್ ನಿಂದ ಹೊಡೆದು ಕೊಲೆ ನಡೆಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಮಣ್ಣೂರ ಗ್ರಾಮದ ಬಿ.ಎಸ್.ಬಿ ದಾಬಾದಲ್ಲಿ ಕಳೆದ ಮೂರು ವರ್ಷಗಳಿಂದ ವೇಟರ್ ಮತ್ತು ಕುಕ್ಕರ್ ಕೆಲಸ ಮಾಡುತ್ತಿದ್ದ ಚಂದ್ರಕಾಂತ ಅಲ್ದಿ(26) ಕೊಲೆಯಾದ ದುರ್ದೈವಿ.ಈತ ಬಡದಾಳ ಗ್ರಾಮದವನಾಗಿದ್ದು, ಕೆಲಸಕ್ಕಾಗಿ ಮಣ್ಣೂರ ಗ್ರಾಮದ ದಾಬಾದಲ್ಲಿ ಕೆಲಸ ಮಾಡುತ್ತಿದ್ದ,ಆದರೆ ಕಳೆದ ಹಲವು ದಿನಗಳಿಂದ ದಾಬಾ ಮಾಲಕ್ ಮತ್ತು ಚಂದ್ರಕಾಂತ ನಡುವೆ ಆಗಾಗ ಜಗಳ ನಡೆಯುತ್ತಿತ್ತು,ಅದೇ ರೀತಿ ರವಿವಾರ ರಾತ್ರಿ 11:30 ಗಂಟೆಗೆ ಸರಿಯಾಗಿ ಕೆಲಸ ಮಾಡುತ್ತಿಲ್ಲ,ಬರೇ ಕುಡಿಯುವುದು ಅಷ್ಟೇ ಕಲಿತಿದ್ದೀಯಾ ಎಂದು ಹೇಳಿ ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿದೆ.ಬಳಿಕ ದಾಬಾ ಮಾಲಕ್ ಖಾಜಪ್ಪ ಪೂಜಾರಿ ಎಂಬಾತ ವೇಟರ್ ಚಂದ್ರಕಾಂತ ಅಲ್ದಿ ಮೇಲೆ ಹಲ್ಲೆ ನಡೆಸಿ ಕೊನೆಗೆ ಸ್ಥಳದಲ್ಲೇ ಬಿದ್ದಿದ್ದ ಬಿಯರ್ ಬಾಟಲ್ ನಿಂದ ತಲೆಯ ಮೇಲೆ ಹೊಡೆದಿದ್ದರಿಂದ ಪ್ರಜ್ಞೆ ಬಿದ್ದಿದ್ದಾನೆ.ಆದರೆ ಒಂದಿಷ್ಟು ಸಮಯದ ನಂತರ ತಾನೇ ಎದ್ದು ಬರುತ್ತಾನೆ ಎಂದು ಅಲ್ಲೇ ಬಿಟ್ಟಿದ್ದಾರೆ.ಆದರೆ ಬೆಳಿಗ್ಗೆ ಎದ್ದು ನೋಡಿದ ಮೇಲೆ ಇನ್ನೂ ಎಚ್ಚರವಾಗಿಲ್ಲ ಎಂದು ಅಫಜಲಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೆಗೆದುಕೊಂಡು ಬಂದಾಗ ವೈದ್ಯರು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಅಫಜಲಪುರ ಪೋಲಿಸರು ದಾಬಾ ಮಾಲಕ್ ಖಾಜಪ್ಪ ಪೂಜಾರಿ ಸೇರಿದಂತೆ ಇತರರಿಗೆ ಬಂಧಿಸಿದ್ದಾರೆ.ಮೃತ ಚಂದ್ರಕಾಂತ ಅಲ್ದಿ ಕುಟುಂಬಸ್ಥರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್ಪಿ ತಮ್ಮರಾಯ ಪಾಟೀಲ್, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐ ಸೋಮಲಿಂಗ ಒಡೆಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



















