ವಿನೂತನ ಸಂಚಾರಿ ಆರೋಗ್ಯ ವಾಹನಕ್ಕೆ ಸಚಿವ ಡಾ.ಎಂ.ಬಿ.ಪಾಟೀಲ ಅವರಿಂದ ಚಾಲನೆ
ವಿಜಯಪುರ ಮೇ.21 : ಕಾರ್ಮಿಕರಿದ್ದಲ್ಲಿ ಆರೋಗ್ಯ ತಪಾಸಣೆಗೆ ಅನುಕೂಲ ಕಲ್ಪಿಸುವ ವಿನೂತನ ಸಂಚಾರಿ ಆರೋಗ್ಯ ವಾಹನಕ್ಕೆ ಬುಧವಾರಂದು ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಗೆ 3 ಸಂಚಾರಿ ಆರೋಗ್ಯ ಘಟಕದ ವಾಹನಗಳು ಮಂಜೂರಾಗಿದ್ದು, ಈಗಾಗಲೇ ವಿಜಯಪುರ ಜಿಲ್ಲೆಗೆ ಬಂದಿರುವ 2 ಸಂಚಾರಿ ಆರೋಗ್ಯ ಘಟಕಗಳಿಗೆ ಚಾಲನೆಯನ್ನು ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಮತ್ತು ಹೋಬಳಿಗಳು ಗ್ರಾಮಗಳು ಒಳಪಡುವ ರೀತಿಯಲ್ಲಿ ರೂಟ್ ಮ್ಯಾಪ ಸಿದ್ದಪಡಿಸಿ ನೀಡಲಾಗಿದ್ದು ಆ ರೀತಿಯಲ್ಲಿ ಸಂಚಾರಿ ಆರೋಗ್ಯ ಘಟಕ ವಾಹನಗಳು ಕಾರ್ಯನಿರ್ವಹಿಸುತ್ತವೆ. ಕಾರ್ಮಿಕರು ಕೆಲಸ ಮಾಡುವ ಮತ್ತು ವಾಸಿಸುವ ಸ್ಥಳಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಸಂಖ್ಯೆಯ ನೋಂದಾಯಿತ ಕಾರ್ಮಿಕರಿಗೆ ಸೌಲಭ್ಯ ಸಿಗುವಂತಹ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಈ ವಾಹನಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ಸದರಿ ಸಂಚಾರಿ ಆರೋಗ್ಯ ಘಟಕದಲ್ಲಿ ಎಮ್.ಬಿ.ಬಿ.ಎಸ್ ವೈದ್ಯರು,ಜಿ ಎನ್ ಎಮ್ ,ಲ್ಯಾಬ ಟೆಕ್ನಿಷಿಯನ್ ಒಳಗೊಂಡಂತೆ 6ಜನ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಾರೆ ಈ ಸಂಚಾರಿ ಆರೋಗ್ಯ ಘಟಕದಲ್ಲಿ 25 ವೈದ್ಯಕೀಯ ಉಪಕರಣಗಳು, 05 ಪ್ರಯೋಗಾಲಯದ ಉಪಕರಣಗಳು ಹಾಗೂ 37 ವಿವಿಧ ವೈದ್ಯಕೀಯ ಬಳಕೆ ವಸ್ತುಗಳಿರಲಿವೆ. ಈ ಸಂಚಾರಿ ಆರೋಗ್ಯ ಘಟಕದಲ್ಲಿ ರಕ್ತ ಪರೀಕ್ಷೆ,ಬಿ.ಪಿ, ಶುಗರ, ಹೃದ್ರೋಗ ತಪಾಸಣೆ, ಕಾಮಾಲೆ-ಎ, ಬಿ, ಸಿ ಮತ್ತು ಇ, ಸಿಪ್ಲಿಸ, ಮಲೇರಿಯಾ, ಡೆಂಗ್ಯೂ, ಚಿಕನಗೂನ್ಯಾ, ಲೆಪೆÇ್ಟೀಸ್ಪಿರಿಯಾ, ಟೈಫಾಯಿಡ್ ಮತ್ತು ಇತರೆ ಕಾಯಿಲೆಗಳಿಗೆ ಸಂಬಂಧಿಸಿದಂತೆ ರೋಗ ನಿರ್ಣಯ ಪರೀಕ್ಷೆ ಮಾಡಿ, ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂಚಾರಿ ಆರೋಗ್ಯ ಘಟಕದ ಕಾರ್ಯನಿರ್ವಹಣೆಯ ಮೇಲ್ನೋಟವನ್ನು ಇಲಾಖೆಯ ಅಧಿಕಾರಿಗಳಾದ ಉಪ ಕಾರ್ಮಿಕ ಆಯುಕ್ತರು, ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಕಾರ್ಮಿಕ ಅಧಿಕಾರಿಗಳು ವಹಿಸುತ್ತಾರೆ. ಜಿಲ್ಲೆಯ ಎಲ್ಲ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರು ತಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡು ಯೋಜನೆಯ ಸದುಪಯೋಗ ಪಡೆಯಬೇಕೆಂದು ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಉಮಾಶ್ರೀ ಕೋಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ಕುಮಾರ ಗುಣಾರಿ ಸೇರಿದಂತೆ ಕಾರ್ಮಿಕ ನಿರೀಕ್ಷಕರು, ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.