ಅಫಜಲಪುರ: ಅಫಜಲಪುರ ತಾಲೂಕಿನ ಸುಕ್ಷೇತ್ರ ಆನೂರ ಗ್ರಾಮ ದೇವತೆ ಚಂದ್ರಗಿರಿ ದೇವಿ ಜಾತ್ರೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಬೆಳಿಗ್ಗೆ ೭ ಗಂಟೆಗೆ ದೇವಿಯ ಪುರ ಪ್ರವೇಶ ಕಾರ್ಯಕ್ರಮ ನಡೆಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವಿಯ ಉತ್ಸವ ಮೂರ್ತಿಯ ಮೇರವಣಿಗೆ ನಡೆಯಿತು. ಚಂದ್ರಿಗಿರಿ ದೇವಿಯ ಜೊತೆಗೆ ಜಂಟಿಗರಾಯ ದೇವರ ಪಲ್ಲಕ್ಕಿಯ ಮೇರವಣಿಗೆಯೂ ನಡೆಯಿತು.
ಮೆರವಣಿಗೆ ಸಂದರ್ಭದಲ್ಲಿ ಭಕ್ತರ ಮನೆ ಮನೆಗಳಿಗೆ ತೆರಳಿ ದೇವಿ ದರ್ಶನ ನೀಡಿದಳು. ಸಾಯಂಕಾಲ ೭ ಗಂಟೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಾದ್ಯಮೇಳಗಳು, ಜಯ ಘೋಷಗಳ ಮಧ್ಯ ದೇವಸ್ಥಾನದ ಪ್ರಧಾನ ಅರ್ಚಕ ರಾಹುಲ್ ಭಂಡಾರಿ ಅವರು ಅಗ್ನಿ ಪ್ರವೇಶ ಮಾಡುವ ಮೂಲಕ ಅಗ್ನಿ ತುಳಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಭಕ್ತರು ಅಗ್ನಿ ತುಳಿದು ತಮ್ಮ ಇಷ್ಟಾರ್ಥಗಳ ಪೂರೈಕೆಗೆ ದೇವಿಗೆ ಹರಕೆ ಕಟ್ಟಿಕೊಂಡರು. ನಂತರ ಕಾಳಿಕಾ ದೇವಿ ಕುಂಭ ಹೊತ್ತವರು ಹಾಗೂ ಚಂದ್ರಗಿರಿ ದೇವಿಯನ್ನು ಹೊತ್ತವರೆಲ್ಲರೂ ಅಗ್ನಿ ಪ್ರವೇಶ ಮಾಡಿದರು. ಬಳಿಕ ಅರ್ಚಕ ರಾಹುಲ್ ಭಂಡಾರಿ ಮಾತನಾಡಿ ಈ ಬಾರಿ ಉತ್ತಮ ಮಳೆ, ಬೆಳೆಯಾಗುವ ಸೂಚನೆಯನ್ನು ದೇವಿ ನೀಡಿದ್ದಾಳೆ. ಎಲ್ಲರಿಗೂ ಒಳಿತಾಗಲಿದೆ, ಸಾಂಕ್ರಾಮಿಕ ರೋಗ ಬಾಧೆಗಳು ಹೆಚ್ಚಾಗುವ ಸಾದ್ಯತೆ ಇದೆ, ಎಲ್ಲರೂ ಜಾಗೃತೆಯಿಂದ ಇರುವುದು ಒಳಿತು ಎಂದು ಕಾರಣಿಕ ನುಡಿದರು.
ನಂತರ ಭಕ್ತರಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಮುಖಂಡರಾದ ನಿಂಗಣ್ಣ ಕಲಶೆಟ್ಟಿ, ದತ್ತು ಘಾಣೂರ, ಈರಣ್ಣಗೌಡ ಪಾಟೀಲ್, ಅಂಬರೀಷ ಪಟ್ಟಣ, ಚಂದ್ರಕಾಂತ ಸಿಂಗೆ, ಶೇಖರಗೌಡ ಪಾಟೀಲ್, ಮಹಾಂತಯ್ಯ ಮಲಘಾಣ, ಬಾಬು ತಳವಾರ, ಬಲಭೀಮ ಬಳೂಂಡಗಿ, ಸಿದ್ದಪ್ಪ ಸಿಮಗೆ, ರಾಜು ಜಿರೋಳಿ, ದಾವಲಸಾಬ ಜೇರಟಗಿ, ಭೀಮರಾಯ ಮಂದೇವಾಲ, ಶ್ರೀಮಂತ ಸಿಂಗೆ, ರಾಣಪ್ಪ ಬಬಲಾದ, ಗುಂಡು ಮಾಳಗೆ, ಶಿವಶರಣ ಪ್ಯಾಟಿ, ಕಲ್ಲಣ್ಣ ಉಮ್ಮನಗೋಳ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.