ಆನೇಕಲ್: ಕೊಟ್ಟ ಸಾಲವನ್ನು ಹಿಂತಿರುಗಿಸಿದಿರುವ ಕಾರಣಕ್ಕೆ ಮಹಿಳೆಯೊಬ್ಬರ ಬಟ್ಟೆ ಬಿಚ್ಚಿ ಅವಮಾನಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರ್ಜಾಪುರ ದಲ್ಲಿ ನಡೆದಿದೆ. ಭಾನುವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ದೊಮ್ಮಸಂದ್ರ ವ್ಯಾಪ್ತಿಯ ನೆರಿಗಾ ಗ್ರಾಮದ ನಿವಾಸಿ ಸುಬ್ಬಾರೆಡ್ಡಿ ಅವರ ಪುತ್ರಿಯರಾದ ಶಾಂತಿಪ್ರಿಯ ಮತ್ತು ಭಾನುಪ್ರಿಯ ಅವರ ಮೇಲೆ ದೌರ್ಜನ್ಯ ನಡೆದಿದೆ. ಇನ್ನು ಇದೇ ಗ್ರಾಮದ ನಿವಾಸಿಗಳಾದ ರಾಮಕೃಷ್ಣ ರೆಡ್ಡಿ ಇಂದ್ರಮ್ಮ ಅವರ ಪುತ್ರ ಸುನಿಲ್ ಕುಮಾರ್ ಮಹಿಳೆಯ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.
ಶಾಂತಿಪ್ರಿಯ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಮಕೃಷ್ಣ ರೆಡ್ಡಿ ಅವರಿಂದ ಒಂದು ವರ್ಷದ ಹಿಂದೆ ಶೇಕಡ 30 % ರಷ್ಟು ಬಡ್ಡಿದರದಲ್ಲಿ 1 ಲಕ್ಷ ಸಾಲವನ್ನು ಪಡೆದಿದ್ದರು. ಕಾಲಕಾಲಕ್ಕೆ ಬಡ್ಡಿ ಕಟ್ಟಿಕೊಂಡು ಬಂದಿದ್ರು. ಅದರೆ ಇತ್ತೀಚಿಗೆ ಹಣ ವಾಪಸ್ಸು ನೀಡುವಂತೆ ಸುನಿಲ್ ಒತ್ತಡ ಹಾಕಿದ್ದರು. ಆದರೆ ಹಣ ಇಲ್ಲದ ಕಾರಣಕ್ಕೆ ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆದಿತ್ತು. ಪಂಚಾಯಿತಿ ತೀರ್ಮಾನದಲ್ಲಿ ಜಮೀನು ಮಾರಾಟ ಮಾಡಿ ಹಣ ಕೊಡುವುದಾಗಿ ರಾಜಿ ಸಂಧಾನ ಆಗಿತ್ತು.
ಆದರೂ ಕೂಡ ಭಾನುವಾರ ಬೆಳಗ್ಗೆ ಶಾಂತಿಪ್ರಿಯ ಅವರ ಮನೆಗೆ ನುಗ್ಗಿದ ಸುನಿಲ್ ಕುಮಾರ್ , ಕೃಷ್ಣಾರೆಡ್ಡಿ ಇಂದ್ರಮ್ಮ ಅವರು ಶಾಂತಿಪ್ರಿಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಇನ್ನು ತಮಗಾದ ಅನ್ಯಾಯದ ಬಗ್ಗೆ ಅವರ ಕುಟುಂಬದವರೊಬ್ಬರು ಮಾಹಿತಿ ನೀಡಿದ್ದಾರೆ. ಇನ್ನು ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.