ವಿದ್ಯುತ್ ಸೇವೆ ಖಾಸಗೀಕರಣ ವಿರೋಧಿಸಿ ರೈತರು-ಜೇಸ್ಕಾಂ ನೌಕರರ ಜಂಟಿ ಹೋರಾಟ
ಅಫಜಲಪುರ: ರಾಜ್ಯದ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ ಪ್ರಯತ್ನವನ್ನು ವಿರೋಧಿಸಿ ರೈತ ಸಂಘಟನೆಗಳು ಹಾಗೂ ಜೇಸ್ಕಾಂ ನೌಕರರು
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಂಟಿಯಾಗಿ ರಸ್ತೆ ತಡೆದು ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ, ಕರ್ನಾಟಕ ಕಬ್ಬು ಬೆಳೆಗಾರರ ಸಂಘ, ಪ್ರಾಂತ ರೈತ ಸಂಘ ಹಾಗೂ ಜೇಸ್ಕಾಂ ನೌಕರರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಖಂಡರು, ವಿದ್ಯುತ್ ವಿತರಣಾ ಸಂಸ್ಥೆಗಳು ಸಾರ್ವಜನಿಕರ ಆಸ್ತಿಯಾಗಿದ್ದು ಅವುಗಳನ್ನು ಖಾಸಗಿ ಕಂಪನಿಗಳ ನಿರ್ವಹಣೆಗೆ ಒಪ್ಪಿಸುವುದು ಜನಹಿತಕ್ಕೆ ವಿರುದ್ಧವಾದ ಕ್ರಮ ಎಂದು ಆರೋಪಿಸಿದರು.
ಸಾರ್ವಜನಿಕ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ವಿದ್ಯುತ್ ಸಂಸ್ಥೆಗಳು ರೈತರು ಹಾಗೂ ಬಡ ವರ್ಗದ ಜನರಿಗೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿವೆ. ಖಾಸಗೀಕರಣ ಜಾರಿಯಾದರೆ ಉಚಿತ ವಿದ್ಯುತ್ ಯೋಜನೆಗಳು, ರಿಯಾಯಿತಿಗಳು ಹಾಗೂ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.
ಜೇಸ್ಕಾಂ ನೌಕರರು ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿ, ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ ಹೆಚ್ಚಾದರೆ ಸೇವಾ ವೆಚ್ಚ ಏರಿಕೆಯಾಗುವ ಅಪಾಯವಿದೆ. ಲಾಭದ ಉದ್ದೇಶವೇ ಮುಖ್ಯವಾಗಿರುವ ಖಾಸಗಿ ಸಂಸ್ಥೆಗಳು ಗ್ರಾಮೀಣ ಹಾಗೂ ರೈತ ಸಮುದಾಯದ ಅಗತ್ಯಗಳಿಗೆ ಆದ್ಯತೆ ನೀಡದಿರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯ ಬಳಿಕ ಪ್ರತಿಭಟನಾಕಾರರು ತಹಸೀಲ್ದಾರರ ಕಚೇರಿಗೆ ತೆರಳಿ ತಹಸೀಲ್ದಾರ ಸಂಜೀವಕುಮಾರ ದಾಸರ್ ಅವರ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಿ, ವಿದ್ಯುತ್ ಸಂಸ್ಥೆಗಳ ಖಾಸಗೀಕರಣ ಪ್ರಕ್ರಿಯೆಯನ್ನು ಕೈಬಿಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಶ್ರೀಮಂತ ಬಿರಾದಾರ, ಗುರು ಚಾಂದಕವಟೆ, ರಮೇಶ ಪಾಟೀಲ್, ರಮೇಶ ಶೆಟ್ಟಿ, ಪಾಂಡು ಕುಲಕರ್ಣಿ, ಅರ್ಜುನ ಸೋಮಜಾಳ, ಲತೀಫ ಪಟೇಲ್, ಶ್ರೀಶೈಲ್ ದುದ್ದುಣಗಿ, ಪುಂಡಲಿಕ ಸೋಲಾಪುರ, ಬಸವರಾಜ ಹೇರೂರ, ಬಸಮ್ಮ ಗುತ್ತೇದಾರ, ಗುರು ಹುಲ್ಲೂರ, ಜೇಸ್ಕಾಂ ಎಇಇ ನಾಗರಾಜ ಸೇರಿದಂತೆ ಹಲವಾರು ರೈತರು ಮತ್ತು ನೌಕರರು ಭಾಗವಹಿಸಿದ್ದರು.



















